ETV Bharat / city

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ.. ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

author img

By

Published : Aug 19, 2022, 9:12 AM IST

ಕೊಡಗಿಗೆ ಮಳೆಹಾನಿ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿರುವುದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

siddaramaiah
ಸಿದ್ದರಾಮಯ್ಯ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ನಾಯಕರು ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿರುವುದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ನಿನ್ನೆ ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಹಾಗೂ ಸ್ಥಳೀಯರೊಂದಿಗೆ ಸಮಾಲೋಚಿಸಲು ತೆರಳಿದ್ದ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದರು. ಇದೀಗ ಕಾಂಗ್ರೆಸ್ ನಾಯಕರಿಂದ ಈ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Siddaramaiah
ಸಿದ್ದರಾಮಯ್ಯ ಟ್ವೀಟ್​

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದು, 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರು ಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು. ಯುಪಿ ಮಾದರಿ ಎಂದರೆ ಇದೆನಾ?' ಎಂದು ಪ್ರಶ್ನಿಸಿದ್ದಾರೆ.

ನಾವು ಸಮಾಜದಲ್ಲಿ ಸಾಮರಸ್ಯ ಬಯಸುವವರು. ಎಲ್ಲ ಜಾತಿ, ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಬಯಸುವವರು ನಾವು. ಬಿಜೆಪಿಯವರು ಮತ ಧ್ರುವಿಕರಣಕ್ಕಾಗಿ ಸಮಾಜ ಒಡೆಯುವವರು. ಗೋಡ್ಸೆಗೆ ಪೂಜೆ ಮಾಡುವುದು ದೇಶ ಪ್ರೇಮವೇ?. ಶಿವಮೊಗ್ಗದ ಗಲಭೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರೇ ಕಾರಣ. ಸಚಿವ ಸ್ಥಾನ ಕಳೆದುಕೊಂಡು ಮನೆಯಲ್ಲಿರುವ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಖಾತರಿಯೂ ಇಲ್ಲ. ಇದರಿಂದ ಹತಾಶರಾಗಿರುವ ಈಶ್ವರಪ್ಪನವರು ಆರ್ ಎಸ್ ಎಸ್ ಒಡೆಯರನ್ನು ಒಲಿಸಿಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆ ಎಂದಿದ್ದಾರೆ.

ಸಾಧನೆಯ ಬಲದಿಂದ ಚುನಾವಣೆಯನ್ನು ಎದುರಿಸಲಿಕ್ಕಾಗದ ಬಿಜೆಪಿ ನಾಯಕರಿಗೆ ಸುಳ್ಳು ಸುದ್ದಿ ಮತ್ತು ಆಧಾರ ರಹಿತ ಆರೋಪಗಳೇ ಬಂಡವಾಳ. ಹಳೆಯ ಆಟವನ್ನು ಬಿಜೆಪಿ ರಾಜ್ಯದಲ್ಲಿ ಮತ್ತೆ ಶುರು ಮಾಡಿದೆ. ಈ ಸುಳ್ಳಿನ ಸರದಾರರಿಗೆ ಸತ್ಯವನ್ನು ಎದುರಿಸುವ ನೈತಿಕತೆ ಇಲ್ಲ. ವಿ.ಡಿ.ಸಾವರ್ಕರ್ ಬಗ್ಗೆ ಅಭಿಮಾನ ಇದ್ದರೆ ಅವರ ಬಗ್ಗೆ ಪುಸ್ತಕ ಬರೆದು, ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಿ.

ಕೋಮುಗಲಭೆ ಹುಟ್ಟುಹಾಕಲು ಅವರ ಪೋಟೊವನ್ನು ಅಸ್ತ್ರವನ್ನಾಗಿ ಯಾಕೆ ಮಾಡುತ್ತಿದ್ದೀರಿ? ಇದನ್ನೇ ನಾನು ಪ್ರಶ್ನಿಸಿದ್ದು. ಮಹಾತ್ಮ ಗಾಂಧೀಜಿಯವರ ಪೋಟೋ ಹಾಕಿ ಜಾಹೀರಾತು ಕೊಡುತ್ತಿರುವ ರಾಜ್ಯದ ಬಿಜೆಪಿಯವರು, ತಮ್ಮದೇ ಪಕ್ಷದ ಕಾರ್ಯಕರ್ತರು ಗಾಂಧೀಜಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಫೋಟೋ ಮೆರವಣಿಗೆ ಮಾಡಿದ್ದಾರೆ. ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಸಾವರ್ಕರ್ ಅವರನ್ನು ಹೊತ್ತು ಮೆರೆಯುತ್ತಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ 52 ವರ್ಷಗಳ ಕಾಲ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಯಾಕೆ ಹಾರಿಸಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತೀರಾ?. ಬಾಬಾಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಪಕ್ಷದ ಕಚೇರಿಯಲ್ಲಿಯೇ ಕಸದ ಬುಟ್ಟಿಗೆ ಎಸೆದಿರುವ ಬಿಜೆಪಿ ನಾಯಕರ ಹೃದಯದೊಳಗೆ ಗಾಂಧೀಜಿಯೂ ಇಲ್ಲ, ಅಂಬೇಡ್ಕರ್ ಅವರೂ ಇಲ್ಲ. ಅವರೊಳಗೆ ಇರುವುದು ನಾಥುರಾಮ್ ಗೋಡ್ಸೆ ಮಾತ್ರ. ಈ ಸತ್ಯವನ್ನು ಮೊದಲು ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿರುವ ವಿಚಾರವಾಗಿ ವ್ಯಂಗ್ಯ ಮಾಡಿರುವ ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ ಅವರಿಗೆ 75 ವರ್ಷ ಆಯ್ತು ಎಂದು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸಿದರು. ಅವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ. ಈಗ ಅವರ ವಯಸ್ಸು ಕಡಿಮೆ ಆಯ್ತಾ? ಇದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಅಲ್ಲ, ಸೋಲಿನ ಭಯ ಎಂದಿದ್ದಾರೆ.

Dinesh Gundurao
ದಿನೇಶ್ ಗುಂಡೂರಾವ್ ಟ್ವೀಟ್​

ದಿನೇಶ್ ಗುಂಡೂರಾವ್ ಆಕ್ರೋಶ: ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿರುವುದಕ್ಕೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಂಡನೆ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ಭೇಟಿಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಯುವ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದು ಹೇಡಿಗಳ ಲಕ್ಷಣ.

ಈ‌ ಕೃತ್ಯ ಅವರ ಹತಾಶೆ ತೋರಿಸುತ್ತಿದೆ. ಸಿದ್ದರಾಮಯ್ಯರವರನ್ನು ಸೈದಾಂತಿಕವಾಗಿ ಎದುರಿಸಲಾಗದ ಬಿಜೆಪಿ ಇಂತಹ ಹೀನ ನಡೆ ಪ್ರದರ್ಶಿಸುತ್ತಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಗಲಭೆ. ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನ ಬಳಿಕ ಬಿಜೆಪಿಯವರಿಗೆ ನಡುಕ ಶುರುವಾಗಿದೆ‌. ಹಾಗಾಗಿ ಸಿದ್ದರಾಮಯ್ಯರ ಮೇಲಿನ ಅಸಹನೆಯಿಂದ ಕಾರ್ಯಕರ್ತರನ್ನು ಛೂ ಬಿಟ್ಟು ಘೇರಾವ್ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಈ ಷಡ್ಯಂತ್ರಕ್ಕೆ ಕಾಂಗ್ರೆಸ್ ಆಗಲಿ ಸಿದ್ದರಾಮಯ್ಯರಾಗಲಿ ಸೊಪ್ಪು‌ ಹಾಕುವುದಿಲ್ಲ. ಬಿಜೆಪಿಯವರು ಹೇಡಿಗಳಂತೆ ವರ್ತಿಸುವುದು ಬಿಡಲಿ ಎಂದಿದ್ದಾರೆ.

HC Mahadevappa tweet
ಹೆಚ್ ಸಿ ಮಹದೇವಪ್ಪ ಟ್ವೀಟ್​

ಹೆಚ್ ಸಿ ಮಹದೇವಪ್ಪ ಗರಂ: ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, 'ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ವಿಪಕ್ಷೀಯ ನಾಯಕರಾದ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆಯುವ ಮೂಲಕ ಅಗೌರವಯುತವಾಗಿ ನಡೆದುಕೊಂಡಿರುವ ಬಿಜೆಪಿ ಯುವ ಮೋರ್ಚಾದ ಗೂಂಡಾಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು. ಶೇ 40ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯವನ್ನು ಸಂಪೂರ್ಣ ಕತ್ತಲಿಗೆ ಕೊಂಡೊಯ್ಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಸಂಪುಟದಲ್ಲಿರುವ ಸದಸ್ಯರೇ ಉಗಿಯುತ್ತಿದ್ದರೂ ಕೂಡ ಬುದ್ಧಿ ಬರುವಂತೆ ತೋರುತ್ತಿಲ್ಲ' ಎಂದಿದ್ದಾರೆ.

ಆಡಳಿತ ನಡೆಸುವ ಯೋಗ್ಯತೆ ಇಲ್ಲದ ಇವರು ಜನಪರವಾಗಿ ಸಿದ್ದರಾಮಯ್ಯ ಅವರ ಮೇಲೆ ತೋರಿರುವ ವರ್ತನೆ ಅಕ್ಷರಶಃ ಖಂಡನೀಯ. ಇದು ಗೂಂಡಾ ರಾಜ್ಯದ ಮನಸ್ಥಿತಿಯ ಪ್ರತೀಕವಾಗಿದೆ. ಕೈಲಾಗದವನು ಮೈ ಪರಚಿಕೊಂಡ ಎಂಬತೆ ಬಿಜೆಪಿಗರು ತಮ್ಮ ಹತಾಶೆಯನ್ನು ಈ ರೀತಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ.

ಹಿಂದುಳಿದ ವರ್ಗಗಳು ಮತ್ತು ಶೋಷಿತ ವರ್ಗಗಳ ಪರವಾದ ನಾಯಕರೆಂದರೆ ಈ ಮನುವಾದಿಗಳಿಗೆ ಸದಾ ಎಲ್ಲಿಲ್ಲದ ಅಸಹನೆ ಎಂಬುದಕ್ಕೆ ಇದೂ ಕೂಡಾ ಒಂದು ಉದಾಹರಣೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ.. ಖಂಡನೆ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.