ETV Bharat / city

ನೀರಾವರಿ ನಿಗಮಗಳ ಜೊತೆ ಇಂದು ಸಿಎಂ ಸರಣಿ ಸಭೆ: ದೆಹಲಿ ಭೇಟಿಗೂ ಮುನ್ನ ಮಾಹಿತಿ ಸಂಗ್ರಹ

author img

By

Published : Apr 4, 2022, 10:12 AM IST

ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್ ಅವರು ಸಮಯ ನೀಡಿದಲ್ಲಿ ನಾಳೆಯೇ ಸಿಎಂ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ವರಿಷ್ಠರ ಭೇಟಿ ಮಾಡಲಿದ್ದು, ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಆಕಾಂಕ್ಷಿಗಳಲ್ಲಿ ಮತ್ತೆ ಸಚಿವ ಸ್ಥಾನದ ಆಸೆ ಗರಿಗೆದರಿದೆ.

CM Basavaraja bommayi
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚೆಗಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಮಯಾವಕಾಶ ಕೋರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸಕ್ಕೂ ಮೊದಲು ರಾಜ್ಯದ ನೀರಾವರಿ ನಿಗಮಗಳ ಆಡಳಿತ ಮಂಡಳಿಗಳ ಸಭೆ ಕರೆದಿದ್ದು, ಯೋಜನೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ನೀರಾವರಿ ನಿಗಮಗಳ ಜೊತೆ ಅವರು ಸರಣಿ ಸಭೆ ನಡೆಸುವರು. ಇದಾದ ನಂತರ, ಕಾವೇರಿ ನೀರಾವರಿ ನಿಗಮದ ಸಭೆ ನಡೆಸಲಿದ್ದಾರೆ.

ಇದರೊಂದಿಗೆ ನಿಗಮದ ವಾರ್ಷಿಕ ಸಾಮಾನ್ಯ ಸಭೆಯನ್ನೂ ನಡೆಸಲಿದ್ದಾರೆ. ಬಳಿಕ ಸಿಎಂ ವಿಶ್ವೇಶ್ವರಯ್ಯ ಜಲ ನಿಗಮದ ಸಭೆ ನಡೆಸುವರು. ಪ್ರಸ್ತುತ ನೀರಾವರಿ ಯೋಜನೆ ಕಾಮಗಾರಿಗಳ ಪ್ರಗತಿ, ಕೇಂದ್ರದಿಂದ ಸಿಗಬೇಕಿರುವ ನೆರವು, ಸೌಲಭ್ಯ, ಅನುಮತಿಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಮೇಕೆದಾಟು ಯೋಜನೆ ಕುರಿತು ಮಹತ್ವದ ಮಾತುಕತೆ ನಡೆಸಲು ದೆಹಲಿಗೆ ತೆರಳಲಿರುವ ಬೊಮ್ಮಾಯಿ, ಇದರ ಜೊತೆಗೆ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಭೂಸ್ವಾಧೀನ, ಮಹಾದಾಯಿ ಯೋಜನೆ, ಭದ್ರ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಸೇರಿ ಕೃಷ್ಣಾ,ಕಾವೇರಿ ಕೊಳ್ಳದ ಯೋಜನೆಗಳ ಕುರಿತು ಮಾತುಕತೆ ನಡೆಸುವರು.

ಮೇಕೆದಾಟು ಯೋಜನೆ ಕುರಿತು ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ ಇದ್ದು, ಅದಕ್ಕೂ ಮೊದಲು ಸಿಎಂ ದೆಹಲಿ ಪ್ರವಾಸ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಸಚಿವ ಶೇಖಾವತ್ ಸಮಯ ನೀಡಿದಲ್ಲಿ ನಾಳೆಯೇ ಸಿಎಂ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ದೆಹಲಿ ಭೇಟಿ ವೇಳೆ ವರಿಷ್ಠರ ಭೇಟಿ ಮಾಡಲಿರುವ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಆಕಾಂಕ್ಷಿಗಳಲ್ಲಿ ಮತ್ತೆ ಸಚಿವ ಸ್ಥಾನದ ಆಸೆ ಗರಿಗೆದರಿದೆ.

ಇದನ್ನೂ ಓದಿ: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನ ಮುಖ್ಯ: ಗವರ್ನರ್‌ ಗೆಹ್ಲೋಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.