ETV Bharat / city

ಕಳೆದ 70 ವರ್ಷದಿಂದ ಜನ ಸಮಸ್ಯೆಯಿಂದ ಬೇಸತ್ತಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ : ಸಿಎಂ

author img

By

Published : May 7, 2022, 4:33 PM IST

ವಯಸ್ಸಾದ ಗೋವುಗಳನ್ನು ವಧೆ ಮಾಡುವುದಕ್ಕೆ ಕೆಲವರು ಬೆಂಬಲ ಕೊಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಯಾವತ್ತೂ ಉಳಿಸುವ ಕಡೆ ಇದೆ. ವಧೆ ಮಾಡುವ ಸಂಸ್ಕೃತಿ ನಮ್ಮದಲ್ಲ. ಈ ವರ್ಷ ಕ್ಷೀರ ಕ್ರಾಂತಿ ಮಾಡಲು ಮುಂದಾಗಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ..

cm-basavaraja-bommai-on-congress-in-a-programme
ಕಳೆದ 70 ವರ್ಷದಿಂದ ಜನ ಸಮಸ್ಯೆಯಿಂದ ಬೇಸತ್ತಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ: ಸಿಎಂ

ಬೆಂಗಳೂರು : ಸಮಸ್ಯೆಗಳನ್ನೇ ಹೇಳುವ ವರ್ಗ ಇದೆ. ನಾವು ಪರಿಹಾರ ಕೊಡುವಂಥ ವರ್ಗಕ್ಕೆ ಸೇರಬೇಕು. 70 ವರ್ಷಗಳಿಂದ ಜನ‌ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್​​ಗೆ ಪರೋಕ್ಷ ಟಾಂಗ್ ನೀಡಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿಎಂ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಸರ್ಗದಲ್ಲಿ ಬಹಳಷ್ಟು ಪಶುಸಂಕುಲ ಇದೆ. ಅವುಗಳು ನಮ್ಮ‌ ಬದುಕಿನ ಅವಿಭಾಜ್ಯ ಅಂಗ. ಧ್ವನಿ ಇಲ್ಲದವನಿಗೆ ವಿಧಾನಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅವರ ಬಗ್ಗೆ ಯೋಚನೆ ಮಾಡುವುದು ಪ್ರಜಾಪ್ರಭುತ್ವದ ಪರಿಪೂರ್ಣತೆ ಆಗಿದೆ. ಗೋವುಗಳನ್ನಿ ದೇವರು ಮನುಷ್ಯರಿಗಾಗಿ ಸೃಷ್ಟಿ ಮಾಡಿದ್ದಾನೆ. ಯಾವ ಹಾಲನ್ನು ಕುಡಿದು ಬದುಕುತ್ತಿದ್ದೇವೋ ಅದರ ಬಗ್ಗೆ ಕೆಳ‌ಮಟ್ಟದ ಭಾಷೆ ಮಾತನಾಡುತ್ತಾರೆ. ಇದು ದುರದೃಷ್ಟಕರ ಎಂದು ಸಿಎಂ ಟಾಂಗ್ ನೀಡಿದರು.

ರೈತ ಗೋವುಗಳನ್ನು ಯಾವತ್ತೂ ಹೊರೆ ಎಂದು ತಿಳಿದಿಲ್ಲ. ಈ ವರ್ಷ 100 ಗೋಶಾಲೆ ಆರಂಭಿಸುತ್ತೇವೆ. ಗೋಶಾಲೆಯಲ್ಲಿನ ತ್ಯಾಜ್ಯಗಳ‌ ಮರು ಉತ್ಪಾದನೆ ಮಾಡಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ದತ್ತು ತೆಗೆದುಕೊಳ್ಳುವ ಪುಣ್ಯಾಶ್ರಮ ಯೋಜನೆ ತಂದಿದ್ದೇವೆ. ನಾನೂ ಗೋವುಗಳನ್ನು ದತ್ತು ತೆಗೆದುಕೊಂಡಿದ್ದೇನೆ. ಜನವರಿ 22ರಂದು ನಾನು 11 ಗೋವುಗಳನ್ನು ದತ್ತು ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಪುಣ್ಯ ಗಳಿಸುವ ಕಾರ್ಯಕ್ರಮ ಕೊಟ್ಟರೆ ಜನ ಏಕೆ ಬೇಡ? ಅಂತಾರೆ ಎಂದು ಪ್ರಶ್ನಿಸಿದರು.

ವಯಸ್ಸಾದ ಗೋವುಗಳನ್ನು ವಧೆ ಮಾಡುವುದಕ್ಕೆ ಕೆಲವರು ಬೆಂಬಲ ಕೊಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಯಾವತ್ತೂ ಉಳಿಸುವ ಕಡೆ ಇದೆ. ವಧೆ ಮಾಡುವ ಸಂಸ್ಕೃತಿ ನಮ್ಮದಲ್ಲ. ಈ ವರ್ಷ ಕ್ಷೀರ ಕ್ರಾಂತಿ ಮಾಡಲು ಮುಂದಾಗಿದ್ದೇವೆ. ಇದರಿಂದ ಕ್ಷೀರ ಆರ್ಥಿಕ ಕ್ರಾಂತಿ ಆಗಲಿದೆ. 2,000 ಬೇರೆ ತಳಿಗಳ ಗೋವುಗಳನ್ನು ರೈತರಿಗೆ ಕೊಡುತ್ತಿದ್ದೇವೆ. ಹೈನುಗಾರಿಕೆ‌ ಇರುವ ರೈತನ ಕುಟುಂಬ ಬಹಳ ಚೆನ್ನಾಗಿದೆ. ಅವರು ಆರ್ಥಿಕವಾಗಿ ಸಬಲರಾಗಿದ್ದಾರೆ. ರೈತರ ತಲಾ ಆದಾಯ ಹೆಚ್ಚಿಸಲು ಹೈನುಗಾರಿಕೆ ಸಹಕಾರಿಯಾಗಿದೆ ಎಂದರು.

ಕರ್ನಾಟಕದ ಮಾದರಿ ಬೇರೆಡೆ ಅನುಸರಿಸಲಿ : ಇದೇ ವೇಳೆ ಮಾತನಾಡಿದ ಕೇಂದ್ರ ಪಶುಸಂಗೋಪನಾ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ ರೂಪಾಲಾ, ಮೋದಿ ಯೋಚನೆ, ಸಂಕಲ್ಪವನ್ನು ಕರ್ನಾಟಕ ಅನುಷ್ಠಾನಗೊಳಿಸಿದ ಮೊದಲ‌ ರಾಜ್ಯವಾಗಿದೆ. ಜಾನುವಾರುಗಳಿಗೆ ಗಾಯವಾದರೆ ಚಿಕಿತ್ಸೆ ನೀಡುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಆದರೆ, ಕರುಣಾಮಯಿ‌‌ ಮೋದಿ ಮೊಬೈಲ್ ಪಶು ಚಿಕಿತ್ಸಾಲಯ ಮಾಡಲು ನಿರ್ಧರಿಸಿದರು. ದೇಶದಲ್ಲಿ ಸುಮಾರು 4,000ಕ್ಕೂ ಹೆಚ್ಚು ಸಂಚಾರಿ ಗೋಚಿಕಿತ್ಸಾಲಯ ಕೊಡಲಾಗುತ್ತದೆ. ಆ ಪೈಕಿ 275 ಕರ್ನಾಟಕಕ್ಕೆ ಕೊಡಲಾಗಿದೆ. ಇದನ್ನು ಮೊದಲಿಗೆ ಅನುಷ್ಠಾನಗೊಳಿಸಿದ ಕರ್ನಾಟಕ ಸರ್ಕಾರ, ಅಧಿಕಾರಿಗಳಿಗೆ ನನ್ನ ಅಭಿನಂದನೆ. ಕರ್ನಾಟಕದ ಮಾದರಿಯನ್ನು ಇತರ ರಾಜ್ಯಗಳು ಅನುಸರಿಸುವಂತೆ ಮಾಡಲು ನಾನು ಯತ್ನಿಸುತ್ತೇನೆ ಎಂದರು.

ಇಲ್ಲಿ ಸಹಕಾರ ಆಂದೋಲನದಲ್ಲಿ ಕರ್ನಾಟಕ ಉತ್ತಮ ಪ್ರಗತಿ ಆಗುತ್ತಿದೆ. ತಂತ್ರಜ್ಞಾನವನ್ನು ಪಶುಸಂಗೋಪನೆಯಲ್ಲಿ ಅನುಷ್ಟಾನಗೊಳಿಸುವ ಕೆಲಸ ಆಗಬೇಕು. ಪಶುಪಾಲನೆ ಕ್ಷೇತ್ರದಲ್ಲಿ ಪಶುಪಾಲಕರಿಗೆ ಕೆಸಿಸಿ ಕಾರ್ಡ್ ಕೊಡಲು ನಿರ್ಣಯಿಸಲಾಗಿದೆ. ಅದನ್ನು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಮಾಡಬೇಕು. ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಲಿದೆ ಎಂಬುದು ನಮ್ಮ ವಿಶ್ವಾಸವಾಗಿದೆ. ರೈತರ ಆದಾಯ ಹೆಚ್ಚಿಸಲು ಈ ಕಾರ್ಯಕ್ರಮಗಳು ಪೂರಕವಾಗಲಿದೆ. ಪಶುಪಾಲಕರು, ರೈತರು ಸರ್ಕಾರಗಳ ಈ ಯೋಜನೆಗಳನ್ನು ಸದ್ಬಳಕೆ ಮಾಡಬೇಕು ಎಂದು ಕರೆ ನೀಡಿದರು.

ಸಂಚಾರ ಪಶುಚಿಕಿತ್ಸಾ ವಾಹನಗಳ ಲೋಕಾರ್ಪಣೆ : ರಾಜ್ಯದಲ್ಲಿ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಒಳಗೊಂಡಂತೆ ಒಟ್ಟು 289.97 ಲಕ್ಷ ಜಾನುವಾರುಗಳಿದ್ದು, ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಪಶು ಚಿಕಿತ್ಸಾ ವಾಹನದಂತೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಕಾರ್ಯಕ್ರಮ ಅಡಿಯಲ್ಲಿ ಕೇಂದ್ರ ಸರ್ಕಾರದ ಶೇ.100ರ ಸಹಾಯಧನದಲ್ಲಿ 44 ಕೋಟಿ ಅನುದಾನದಲ್ಲಿ ರಾಜ್ಯಕ್ಕೆ ಹೊಸದಾಗಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಮಂಜೂರು ಮಾಡಲಾಗಿದೆ. ಇಂದು ವಿಧಾನಸೌಧದ ಮುಂಭಾಗ 70 ಪಶುಚಿಕಿತ್ಸಾ ವಾಹನಗಳ ಲೋಕಾರ್ಪಣೆ ಮಾಡಲಾಯಿತು.

ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಪಶುಸಂಗೋಪನಾ ಚಟುವಟಿಕೆಗಳಲ್ಲಿ ತೊಡಗಿರುವ ರೈತಾಪಿ ವರ್ಗದ ಜಾನುವಾರುಗಳಿಗೆ ಅಗತ್ಯ ತುರ್ತು ಸೇವೆಯನ್ನು ರೈತರ ಮನೆ ಬಾಗಿಲಿಗೆ ಒದಗಿಸಲು ಬಳಸಲಾಗುವುದು. ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆಯನ್ನು ಇಲಾಖೆಯ ಅಧಿಕೃತ ಟೋಲ್ ಫ್ರೀ ದೂರವಾಣಿ ಸಂಖ್ಯೆ 1962ಕ್ಕೆ ಕರೆ ಮಾಡುವುದರ ಮೂಲಕ ಅಗತ್ಯ ಜಾನುವಾರು ಮಾಲೀಕರು ಪಶುವೈದ್ಯ ಸೇವೆಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಗೃಹ ಸಚಿವ ಮತ್ತು ಅಶ್ವತ್ಥ್​ ನಾರಾಯಣ​ ಮೂಗಿನ ಕೆಳಗೆ ಎಲ್ಲ ನಡೆಯುತ್ತಿದೆ : ಡಿಕೆಶಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.