ಬೆಂಗಳೂರು : ನೂತನ ಸಿಎಂ ಪದವಿ ಅವಧಿ ಇರುವವರೆಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಸೌಲಭ್ಯ ಒದಗಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗ ಶನಿವಾರ ಆದೇಶ ಹೊರಡಿಸಿದೆ. ರಾಜ್ಯಪಾಲರ ಆದೇಶದ ಅನುಸಾರ ಈ ಸೂಚನೆ ನೀಡಲಾಗಿದೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪರಿಗೆ ಸರ್ಕಾರಿ ಕಾರು, ನಿವಾಸ, 10-11 ಸಿಬ್ಬಂದಿ ಜೊತೆಗೆ ಸಚಿವರಿಗೆ ನೀಡುವ ಪ್ರೊಟೋಕಾಲ್ಗನ್ನು ಸಹ ಒದಗಿಸಲಾಗುತ್ತದೆ. ಸದ್ಯ ಮಾಜಿ ಸಿಎಂಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.
ಈಗಾಗಲೇ ಬಿಎಸ್ವೈ ಜಿಲ್ಲಾ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಸಂಪುಟ ದರ್ಜೆಯ ಸ್ಥಾನಮಾನ ಅವರಿಗೆ ಅನುಕೂಲವಾಗಲಿದೆ. ಪ್ರವಾಸದ ವೇಳೆ ಸಚಿವರುಗಳಿಗೆ ಲಭ್ಯವಾಗುವ ಪ್ರೊಟೋಕಾಲ್ ಇದೀಗ ಮಾಜಿ ಸಿಎಂ ಬಿಎಸ್ವೈಗೆ ಸಿಗಲಿದೆ.
ಆದರೆ, ಮಾಜಿ ಸಿಎಂಗೆ ಈ ಸ್ಥಾನಮಾನ ನೀಡಲು ಸಂವಿದಾನದಡಿಯಲ್ಲಿ ಅವಕಾಶ ಇದೆಯಾ, ಇದ್ದರೂ ಅದರ ಅಗತ್ಯತೆ ಏನು ಎಂಬ ಬಗ್ಗೆ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.