ETV Bharat / city

ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಸೋಲು: ಬೊಮ್ಮಾಯಿ ಬೆನ್ನಿಗೆ ನಿಂತ ಬಿಎಸ್‌ವೈ ಮತ್ತವರ ತಂಡ

author img

By

Published : Nov 2, 2021, 6:16 PM IST

Updated : Nov 2, 2021, 6:58 PM IST

ತವರು ಜಿಲ್ಲೆಯಲ್ಲೇ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸಿಎಂ ಬಸವರಾಜ ಬೊಮ್ಮಾಯಿ ಅವರ ಬೆಂಬಲಕ್ಕೆ ಮಾಜಿ ಸಿಎಂ ಬಿಎಸ್‌ವೈ ಹಾಗೂ ಅವರ ಆಪ್ತರು ನಿಂತಿದ್ದಾರೆ. ಸೋಲಿಗೆ ಮುಖ್ಯಮಂತ್ರಿ ಒಬ್ಬರನ್ನೇ ಹೊಣೆ ಮಾಡಲು ಸಾಧ್ಯವಿಲ್ಲ. ಸೋಲಾಗಲಿ, ಗೆಲುವಾಗಲಿ ಎಲ್ಲರಿಗೂ ಸಮಾನ ಹೊಣೆಗಾರಿಕೆ ಇರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

bjp loss hangal; Ex CM bsy support for CM Bommai
ತವರು ಜಿಲ್ಲೆಯಲ್ಲೇ ಸೋಲು:ಸಿಎಂ ಬೆನ್ನಿಗೆ ನಿಂತ ಮಾಜಿ ಸಿಎಂ ಬಿಎಸ್‌ವೈ ಮತ್ತವರ ತಂಡ!

ಬೆಂಗಳೂರು: ತವರು ಜಿಲ್ಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಮುಖಭಂಗಕ್ಕೊಳಗಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆನ್ನಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ‌ಸೇರಿದಂತೆ ಬಿಜೆಪಿ ನಾಯಕರು ನಿಲ್ಲುತ್ತಿದ್ದು, ಸಾಮೂಹಿಕ ನಾಯಕತ್ವ, ಸಿಎಂ ನೇತೃತ್ವದ ಮಂತ್ರ ಜಪಿಸುತ್ತಿದ್ದಾರೆ. ಆ ಮೂಲಕ ಸಿಎಂ ನಾಯಕತ್ವ ಅಬಾಧಿತ ಎನ್ನುವ ಸಂದೇಶ ರವಾನಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸವಾಲಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಡೆಗೂ ಸೋಲಿನ ರುಚಿ ಕಂಡಿದ್ದು, ನಾಯಕತ್ವ ಕುರಿತು ಚರ್ಚೆ ಹುಟ್ಟುವಂತೆ ಮಾಡಿದೆ. ಆದರೆ ಬೊಮ್ಮಾಯಿ ಪರ ಮಾಜಿ ಸಿಎಂ ಯಡಿಯೂರಪ್ಪ ಬ್ಯಾಟಿಂಗ್ ಮಾಡುವ ಮೂಲಕ ಶಿಷ್ಯನ ಪರ ವಕಾಲತ್ತು ವಹಿಸಿದ್ದಾರೆ. ಯಡಿಯೂರಪ್ಪ ಬೆನ್ನಲ್ಲೇ ಅವರ ನಿಷ್ಟರೂ ಕೂಡ ಬೊಮ್ಮಾಯಿ ಪರ ನಿಲುವ ವ್ಯಕ್ತಪಡಿಸಿ ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸುತ್ತಿದ್ದಾರೆ.

ಸೋಲಿಗೆ ಮುಖ್ಯಮಂತ್ರಿ ಒಬ್ಬರನ್ನೇ ಹೊಣೆ ಮಾಡಲು ಸಾಧ್ಯವಿಲ್ಲ, ಸೋಲಾಗಲಿ, ಗೆಲುವಾಗಲಿ ಎಲ್ಲರಿಗೂ ಸಮಾನ ಹೊಣೆಗಾರಿಕೆ ಇರಲಿದೆ. ಹಾಗಾಗಿ, ಹಾನಗಲ್ ಸೋಲನ್ನು ಯಾರೋ ಒಬ್ಬರ ತಲೆಗೆ ಕಟ್ಟುವುದನ್ನು ನಾನು ಒಪ್ಪುವುದಿಲ್ಲ ಎಂದು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಮಾಜಿ ಸಿಎಂ ಬಿಎಸ್‌ವೈ ಬ್ಯಾಟಿಂಗ್ ಮಾಡಿದ್ದಾರೆ.

ಇನ್ನು, ಸಿಎಂ ಬೆಂಬಲಕ್ಕೆ ಯಡಿಯೂರಪ್ಪ ನಿಲ್ಲುತ್ತಿದ್ದಂತೆ ಬಿಎಸ್‌ವೈ ಆಪ್ತರು ಕೂಡ ಅಖಾಡಕ್ಕಿಳಿದಿದ್ದಾರೆ. ಹಿರಿಯ ಸಚಿವ ವಿ.ಸೋಮಣ್ಣ ಮತ್ತು ಸಿ.ಸಿ.ಪಾಟೀಲ್ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬೊಮ್ಮಾಯಿ ಪರ ಮಾತನಾಡಿದ್ದಾರೆ. ನಮ್ಮ ವೋಟುಗಳು ಕೈತಪ್ಪಿಲ್ಲ. ನಮ್ಮ ಮತಗಳು ನಮ್ಮ ಅಭ್ಯರ್ಥಿಗೆ ಬಂದಿವೆ ಎಂದು ಸೋಲನ್ನೂ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಅಮಿತ್ ಶಾ ಈ ಬಗ್ಗೆ ಘೋಷಣೆಯನ್ನೂ ಮಾಡಿದ್ದು, ಅದರಂತೆ ಸಿಎಂ ನೇತೃತ್ವದಲ್ಲೇ ನಾವು 2023ರ ಸಾರ್ವತ್ರಿಕ ಚುನಾವಣೆಗೆ ಹೋಗಲಿದ್ದೇವೆ ಎಂದಿದ್ದಾರೆ.

ತವರು ಕ್ಷೇತ್ರದಲ್ಲಿ ಸೋಲಿನಿಂದ ಸಿಎಂ ವಿಚಲಿತ!

ಹಾನಗಲ್ ಸೋಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಚಲಿತರಾಗಿದ್ದಾರೆ. ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಹಾನಗಲ್ ಗೆಲುವು ಕಷ್ಟ ಎನ್ನುವ ವರದಿ ಬರುತ್ತಿದ್ದಂತೆ ಕ್ಷೇತ್ರದಲ್ಲೇ ಬೀಡುಬಿಟ್ಟು ಸಿಎಂ ಪ್ರಚಾರ ನಡೆಸಿದ್ದರು. ಅಷ್ಟು ಸಾಲದು ಎನ್ನುವಂತೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನೂ ಕರೆದುಕೊಂಡು ಜಂಟಿ ಪ್ರಚಾರ ನಡೆಸಿದ್ದರು. ಆದರೂ ಕ್ಷೇತ್ರ ಬಿಜೆಪಿ ಕೈತಪ್ಪಿದೆ. ಗೆಲುವಿಗಾಗಿ ಶತಾಯಗತಾಯ ಮಾಡಿದ ಎಲ್ಲಾ ಪ್ರಯತ್ನಗಳು ಫಲ ನೀಡಿಲ್ಲ. ಮುಖ್ಯಮಂತ್ರಿ ಆಗಿ ಎದುರಿಸಿದ ಮೊದಲ ಉಪ ಚುನಾವಣೆಯಲ್ಲಿ ತವರು ಜಿಲ್ಲೆಯ ಕ್ಷೇತ್ರವನ್ನೇ ಉಳಿಸಿಕೊಳ್ಳಲಾಗಲಿಲ್ಲ ಎಂದು ವಿಚಲಿತರಾಗಿದ್ದಾರೆ ಎನ್ನಲಾಗಿದೆ.

ಸಿಎಂ ಸೋಲಿನ ಪರಾಮರ್ಶೆ?

ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಬೆಂಗಳೂರಿಗೆ ಹಿಂದಿರುಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ರೇಸ್ ವ್ಯೂ ಕಾಟೇಜ್‌ನಲ್ಲಿದ್ದು, ಸೋಲಿನ ಪರಾಮರ್ಶೆಯಲ್ಲಿ ತೊಡಗಿದ್ದಾರೆ. ಆಪ್ತರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸುತ್ತಿದ್ದು ಸೋಲಿಗೆ ಬೇಸರ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

Last Updated :Nov 2, 2021, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.