ಬೆಂಗಳೂರು: ರಾತ್ರಿ ವೇಳೆ ಒಂಟಿಯಾಗಿ ವಾಹನದಲ್ಲಿ ಹೋಗುವವರನ್ನೇ ಗುರಿಯಾಗಿಸಿಕೊಂಡು ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮ್ಮದ್ ಯಾಸಿನ್ ಹಾಗೂ ಅಶೋಕ್ ಬಂಧಿತ ಆರೋಪಿಗಳು. ಕಳೆದ ನಂ. 27 ರ ರಾತ್ರಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕ್ಯಾಬ್ ಚಾಲಕ ರವಿಕುಮಾರ್ ಎಂಬುವರು ಹೋಗುತ್ತಿರುವಾಗ ಅವರನ್ನು ಅಡ್ಡಗಟ್ಟಿದ್ದ ಖದೀಮರು ಚಾಕು ತೋರಿಸಿ ಬೆದರಿಸಿ, ಹತ್ತು ಗ್ರಾಂ ಬೆಳ್ಳಿ, ಒಂದು ಮೊಬೈಲ್ ಹಾಗೂ ಪರ್ಸಿನಲ್ಲಿದ್ದ 30 ರೂ.ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದನ್ವಯ ನಿನ್ನೆ ರಾತ್ರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ಸಹ ದಾಖಲಾಗಿತ್ತು ಎಂದು ತಿಳಿದುಬಂದಿದೆ.