ETV Bharat / city

ಅಫ್ಘಾನಿಸ್ತಾನಿಕ್ಕೆ ತೆರಳಿ ಉಗ್ರ ಸಂಘಟನೆ ಸೇರಲು ಮುಂದಾಗಿದ್ದ ಬೆಂಗಳೂರಲ್ಲಿ ಸೆರೆಸಿಕ್ಕ ಶಂಕಿತ!

author img

By

Published : Jul 26, 2022, 7:10 AM IST

ಬೆಂಗಳೂರು ಪೊಲೀಸರು ಇತ್ತೀಚೆಗೆ ಬಂಧಿಸಿದ ಶಂಕಿತ ಉಗ್ರ ಭಯೋತ್ಪಾದಕ ಸಂಘಟನೆ ಸೇರಲು ಮುಂದಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

suspected terrorist arrested in Bengaluru
ಅಖ್ತರ್ ಹುಸೇನ್‌‌

ಬೆಂಗಳೂರು: ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ವಾಟ್ಸ್​​ಆ್ಯಪ್‌ ಮುಖಾಂತರ ಗ್ರೂಪ್ ರಚಿಸಿ ಜಿಹಾದ್ (ಧರ್ಮ) ಯುದ್ದಕ್ಕೆ ಪ್ರಚೋದನೆ ನೀಡುತ್ತಿದ್ದ ಗಂಭೀರ ಆರೋಪದಡಿ ಬಂಧಿತನಾಗಿರುವ ಅಖ್ತರ್ ಹುಸೇನ್‌‌ ಬಗ್ಗೆ ಮತ್ತಷ್ಟು ಮಾಹಿತಿ ದೊರೆತಿದೆ. ಚಿಕ್ಕ ವಯಸ್ಸಿನಿಂದಲೇ‌ ಭಯೋತ್ಪಾದಕ ಸಂಘಟನೆಗಳ ಪ್ರಮುಖ ನಾಯಕರ ಭಾಷಣದ ವಿಡಿಯೋ ನೋಡುತ್ತಾ ಈತ ಪ್ರೇರಣೆಗೊಂಡಿದ್ದ. ಅಲ್ಲದೇ ಭಾರತದಲ್ಲಿ ಮುಸ್ಲಿಮರ ಮೇಲೆ‌ ದೌರ್ಜನ್ಯ ನಡೆಯುತ್ತಿದೆ ಎಂದು ಸದಾ ಕಿಡಿ ಕಾರುತ್ತಿದ್ದನಂತೆ.

ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ: ತನ್ನ ಸಮುದಾಯದವರು ಶೋಷಣೆಗೆ ಒಳಗಾಗಿದ್ದಾರೆಂದು ಹೇಳುತ್ತಾ ಧರ್ಮ ಯುದ್ಧದಲ್ಲಿ ಭಾಗಿಯಾಗುವಂತೆ ಯುವಕರನ್ನು ಹುರಿದುಂಬಿಸುತಿದ್ದ. ಉಗ್ರ ಸಂಘಟನೆಗಳ ಮೇಲೆ‌ ಅಪಾರ ಒಲವು ಹೊಂದಿದ್ದ ಅಖ್ತರ್ ಇದೇ ವರ್ಷದಲ್ಲಿ ಅಫ್ಘಾನಿಸ್ತಾನಕ್ಕೆ ಹೋಗಲು ಸಿದ್ದತೆ ನಡೆಸಿಕೊಂಡಿದ್ದ ಎಂದು ತಿಳಿದುಬಂದಿದೆ.


ಧರ್ಮದ ಉಳಿವಿಗಾಗಿ 'ಜಿಹಾದ್' ಯುದ್ಧ ಮಾಡಬೇಕು. ಈ ಮೂಲಕ ಶೋಷಣೆಯಾಗುವುದನ್ನು ತಪ್ಪಿಸಬೇಕೆಂದು ಸಾಮಾಜಿಕ ಜಾಲತಾಣಗಳ ಗುಂಪಿನ ಸದಸ್ಯರಿಗೆ ಆರೋಪಿ ಕರೆ ನೀಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈತ ಈವರೆಗೆ ಯಾವುದೇ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ ಸಂಘಟನೆಗೆ ಸೇರುವತ್ತ ಭಾರಿ ಉತ್ಸುಕತೆ ತೋರಿದ್ದಾನೆ.‌ ಇದರಂತೆ ಕೋಲ್ಕತ್ತಾದ ಓರ್ವ, ಬಾಂಗ್ಲಾದೇಶದ ಇಬ್ಬರು ಹಾಗೂ ತಾನು‌ ಸೇರಿ ಒಟ್ಟು ನಾಲ್ವರು ಅಫ್ಫಾನಿಸ್ತಾನಕ್ಕೆ ತೆರಳಲು ಯೋಜನೆ ರೂಪಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಅಖ್ತರ್ ಹುಸೇನ್ ಯಾರು?: ಅಸ್ಸಾಂ ಮೂಲದ ಆತ 2015ರಲ್ಲಿ ಕೆಲಸ ಅರಸಿ ಬೆಂಗಳೂರಿಗೆ ಕಾಲಿಟ್ಟಿದ್ದಾಗ ಆತನಿಗೆ 17 ವರ್ಷ. 10ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ ಈ ಶಂಕಿತ ಉಗ್ರ, ನಗರದ ಮಯ್ಯಾಸ್ ಹೋಟೆಲ್‌ಗೆ ಕೆಲಸಕ್ಕೆ‌‌‌‌ ಸೇರಿಕೊಳ್ಳಲು ಮುಂದಾಗಿದ್ದ. ಬಾಲಕನಾಗಿದ್ದರಿಂದ‌ ಕೆಲಸ ನೀಡಲು ಮಾಲೀಕರು ನಿರಾಕರಿಸಿದ್ದರಂತೆ.

ಇದಾದ ಬಳಿಕ ಮೆಡಿಸಿನ್ ಕಂಪನಿಯೊಂದರಲ್ಲಿ ಎರಡು-ಮೂರು ತಿಂಗಳ ಕೆಲಸ ಮಾಡಿದ್ದಾನೆ. ಅನಾರೋಗ್ಯ ಕಾಡಿದ ಕಾರಣಕ್ಕೆ ಕೆಲಸ ತೊರೆದಿದ್ದ. ದ್ವಿತೀಯ ಪಿಯುಸಿಯಾದರೆ ಕೆಲಸ‌ ಸಿಗಬಹುದೆಂದು 2015 ರಲ್ಲಿ ಅಸ್ಸಾಂಗೆ ತೆರಳಿ ಎರಡು ವರ್ಷದ ಬಳಿಕ 2017ರಲ್ಲಿ ಮತ್ತೆ ಬೆಂಗಳೂರಿಗೆ ಬಂದಿದ್ದ.

ಗಾರ್ಮೆಂಟ್ಸ್, ಸೆಕ್ಯೂರಿಟಿ ಗಾರ್ಡ್ ಹೀಗೆ ವಿವಿಧ ವೃತ್ತಿಗಳಲ್ಲಿ ಕೆಲಸ‌ ಮಾಡಿದ್ದಾನೆ. ಕೆಲ ತಿಂಗಳ ಹಿಂದೆ ಆತನ ತಾಯಿ ನಿಧನವಾಗಿದ್ದು ಅಸ್ಸಾಂಗೆ ಹೋಗಿ ಬಂದಿದ್ದ. ಬಳಿಕ ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು‌ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜಿಹಾದ್​ ಯುದ್ದಕ್ಕೆ ಪ್ರಚೋದನೆ.. ಶಂಕಿತ ಉಗ್ರನನ್ನ ವಶಕ್ಕೆ ಪಡೆದ ಸಿಸಿಬಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.