ETV Bharat / city

ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ

author img

By

Published : Nov 14, 2021, 12:00 PM IST

ಬಿಟ್ ಕಾಯಿನ್ ಪ್ರಕರಣ (Bitcoin case) ಬಯಲಿಗೆ ತಂದಿದ್ದೇ ನಾವು. ತನಿಖೆಯನ್ನು ಇಡಿ, ಸಿಬಿಐಗೆ ವಹಿಸಿದ್ದೇವೆ. ಅಧಿಕಾರಿಗಳು ಈ ಕುರಿತು ಹಲವು ಮಾಹಿತಿ ಕೇಳಿದ್ದರು. ಅದನ್ನು ಅವರಿಗೆ ಕೊಟ್ಟಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Bitcoin
ಬಿಟ್ ಕಾಯಿನ್ ಪ್ರಕರಣ ಕುರಿತು ಸಿಎಂ ಪ್ರತಿಕ್ರಿಯೆ

ಬೆಂಗಳೂರು: ಬಿಟ್ ಕಾಯಿನ್ (Bitcoin) ಪ್ರಕರಣ ಬಯಲಿಗೆ ತಂದು ಇದರ ತನಿಖೆ ಮಾಡಿದ್ದೇ ನಾವು. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ರೂ ಬಿಡಲ್ಲ, ಬಲಿ ಹಾಕ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ) ಖಡಕ್​ ಆಗಿ ಹೇಳಿದ್ದಾರೆ.

ವಿಧಾನಸೌಧದ ಮುಂದೆ ನೆಹರು ಪುತ್ಥಳಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣ ಬಯಲಿಗೆ ತಂದಿದ್ದೇ ನಾವು. ತನಿಖೆಯನ್ನು ಇಡಿ, ಸಿಬಿಐಗೆ ವಹಿಸಿದ್ದೇವೆ. ಅಧಿಕಾರಿಗಳು ಈ ಕುರಿತು ಹಲವು ಮಾಹಿತಿ ಕೇಳಿದ್ದರು. ಅದನ್ನು ಅವರಿಗೆ ಕೊಟ್ಟಿದ್ದೇವೆ. ನಾವೇ ಬಿಟ್ ಕಾಯಿನ್ ಪ್ರಕರಣವನ್ನು ಬಯಲಿಗೆಳೆದಿದ್ದು ಎಂದು ಕಾಂಗ್ರೆಸ್ ಆರೋಪಕ್ಕೆ ಸಿಎಂ ಉತ್ತರ ನೀಡಿದರು.

2018 ರಲ್ಲಿ ಕಾಂಗ್ರೆಸ್, ಶ್ರೀಕಿಯನ್ನು ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗ ಆಗುತ್ತಿತ್ತು. ನಾವು ಹಗರಣದ ಬಗ್ಗೆ ಬಹಳ ಮುಕ್ತವಾಗಿದ್ದೇವೆ. ಇದನ್ನು ಬಯಲು ಮಾಡಿದವರೇ ನಾವು. ಈ ಪ್ರಕರಣದಲ್ಲಿ ಯಾರಿಗಾದರು ಮೋಸ ಆಗಿದ್ರೆ ಕ್ರಮ ಜರುಗಿಸ್ತೇವೆ. ಒಂದು ಟ್ವಿಟರ್ ಆಧಾರದ ಮೇಲೆ ಐದು ಸಾವಿರ ಬಿಟ್ ಕಾಯಿನ್ ವರ್ಗಾಯಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಒಂದು ಟ್ವಿಟರ್ ಇಟ್ಟುಕೊಂಡು ಕಾಂಗ್ರೆಸ್​ನವರು ಆರೋಪ ಮಾಡ್ತಾರೆ ಅಂದ್ರೆ, ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ. ಆ ಟ್ವಿಟರ್​ಗೆ ದಾಖಲೆ, ಸಾಕ್ಷಿ ಇಟ್ಟು ಮಾತನಾಡಿ. ಟ್ವಿಟರ್ ಮೇಲೆ ಆರೋಪ ಮಾಡುವುದು ರಾಷ್ಟ್ರೀಯ ಪಕ್ಷದ ವಕ್ತಾರರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ ಸಿಎಂ ತಿರುಗೇಟು ನೀಡಿದ್ರು.

ಬಿಟ್ ಕಾಯಿನ್ ಪ್ರಕರಣ ಕುರಿತು ಸಿಎಂ ಪ್ರತಿಕ್ರಿಯೆ

2016 ರಿಂದ ಪ್ರಕರಣ ಇದೆ ಅಂತಾರೆ, ಆಗಿನಿಂದಲೂ ಇದ್ದ ಮೇಲೆ ಕಾಂಗ್ರೆಸ್ ಯಾಕೆ ಅದರ ಮೇಲೆ ಗಮನ ಹರಿಸಲಿಲ್ಲ?. 2018 ರಲ್ಲಿ ಶ್ರೀಕಿ ಬಂಧಿಸಿದ್ರಿ, ನಂತರ ಬಿಟ್ರಿ. ಆತನ ಹಿನ್ನೆಲೆ ಬಗ್ಗೆ ಯಾಕೆ ಆಗಲೇ ವಿಚಾರಣೆ ಮಾಡಲಿಲ್ಲ​?. 2018 ರಲ್ಲಿ ಕಾಂಗ್ರೆಸ್ ಶ್ರೀಕಿಯನ್ನು ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು. ಆತನ ವಿಚಾರಣೆಯನ್ನೇ ಕಾಂಗ್ರೆಸ್ ಮಾಡಲಿಲ್ಲ. ನಾವು ಆತನನ್ನು ಹಿಡಿದಿದ್ದು ಡ್ರಗ್ ಕೇಸ್​ನಲ್ಲಿ. ನೀವು ಎಲ್ಲವನ್ನೂ ಮುಕ್ತವಾಗಿ ಬಿಟ್ಟು ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣರಾಗಿದ್ದೀರಿ. ನಾವು ಆತನನ್ನು ಡ್ರಗ್ ಕೇಸ್​ನಲ್ಲಿ ಹಿಡಿದು ವಿಚಾರಣೆ ಮಾಡಿ ಎಲ್ಲ ಬಹಿರಂಗಗೊಳಿಸಿದ್ರೆ, ನಮಗೇ ಪ್ರಶ್ನೆ ಮಾಡ್ತೀರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್​​ನವರು ತಮ್ಮದನ್ನು ಮುಚ್ಚಿಕೊಳ್ಳಲು ಹಿಂದೆಮುಂದೆ ಇಲ್ಲದವರ ಹೆಸರು ಹೇಳ್ತಿದ್ದಾರೆ. ಪ್ರಕರಣದಲ್ಲಿ ಇಲ್ಲದವರ ಮೇಲೆ ಕಾಂಗ್ರೆಸ್ ಆರೋಪ ಮಾಡ್ತಿದೆ. ಇಬ್ಬರು ಪ್ರಭಾವಿಗಳು ಭಾಗಿಯಾಗಿದ್ರೆ, ಅವರ ಹೆಸರನ್ನು ಕಾಂಗ್ರೆಸ್ ಹೇಳಲಿ. ನಾವು ಯಾರೇ ಆದ್ರೂ ತನಿಖೆ ಮಾಡ್ತೀವಿ. ಈ ಪ್ರಕರಣದಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ, ಕೆಲವು ವ್ಯಕ್ತಿಗಳಿಗೆ ಮೋಸವಾಗಿದ್ರೆ, ಮೋಸ ಮಾಡಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ. ನಾವೇ ಶ್ರೀಕಿ ಬಂಧಿಸಿ, ಆತನ ಮೇಲೆ ಎಫ್ ಐಆರ್ ಹಾಕಿದ್ದು. ಶ್ರೀಕಿಯನ್ನು ಬಿಟ್ಟುಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ಬಳಿ ಮಾಹಿತಿ, ದಾಖಲೆ ಇದ್ರೆ ನಮಗಾದರೂ ತಿಳಿಸಲಿ, ಇಡಿ ಗಾದರೂ ಕೊಡಲಿ. ಅವರು ದಾಖಲೆ ಕೊಟ್ರೆ ಅದರ ತನಿಖೆಯನ್ನು ಮಾಡ್ತೀವಿ ಎಂದು ಸಿಎಂ ಸ್ಪಷ್ಟಪಡಿಸಿದರು.

ಪೊಲೀಸರಿಗೆ ಶ್ರೀಕಿ ಯಾಮಾರಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಆತ ತನ್ನ ಅಕೌಂಟ್ ಅಂತ ಯಾವುದೋ ಎಕ್ಸೇಂಜ್ ಅಕೌಂಟ್ ತೋರಿಸಿದ್ದಾನೆ. ಎಕ್ಸೇಂಜ್ ಅಕೌಂಟ್ ತೋರಿಸಿ ನನ್ನ ಅಕೌಂಟ್ ಅಂತ ಹೇಳಿದ್ದಾನೆ. ಯಾರಿಗೂ ವೈಯಕ್ತಿಕವಾಗಿ ಎಕ್ಸೇಂಜ್ ಅಕೌಂಟ್ ಇರಲ್ಲ. ಇಷ್ಟೇ ಆಗಿರೋದು ಎಂದು ಸ್ಪಷ್ಟನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.