ETV Bharat / city

ರಾಜ್ಯ 'ಕೈ' ನಾಯಕರ ನಿರ್ಲಕ್ಷ್ಯ: ನೋವನ್ನು ಹೈಕಮಾಂಡ್​ಗೆ ತಲುಪಿಸಲು 'ಅಖಂಡ' ಸಿದ್ಧತೆ!

author img

By

Published : Nov 14, 2020, 6:50 PM IST

ನಾನು ಕಾಂಗ್ರೆಸ್​​ ಶಾಸಕನೆಂದು ಪರಿಗಣನೆಗೆ ತೆಗೆದುಕೊಳ್ಳದೇ ಕೈ ನಾಯಕರು ಬೇಜಾವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಹೈಕಮಾಂಡ್​​ಗೆ ಪತ್ರ ಬರೆಯುವುದಾಗಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೋವು ತೋಡಿಕೊಂಡಿದ್ದಾರೆ.

AKANDA SRINIVASMURTHY letter to congress high command
ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು: ತಮ್ಮನ್ನು ಒಬ್ಬ ಶಾಸಕನೆಂದು ಪರಿಗಣನೆಗೂ ತೆಗೆದುಕೊಳ್ಳದೇ ರಾಜ್ಯ ಕಾಂಗ್ರೆಸ್ ನಾಯಕರು ನಡೆದುಕೊಳ್ಳುತ್ತಿದ್ದಾರೆ ಎಂದು ಆಪ್ತರ ಬಳಿ ಬೇಸರ ತೋಡಿಕೊಂಡಿರುವ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಹೈಕಮಾಂಡ್​ಗೆ ತಮ್ಮ ನೋವನ್ನು ಹೇಳಿಕೊಳ್ಳಲು ಮುಂದಾಗಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದ ಕಾಂಗ್ರೆಸ್ ಶಾಸಕರಾಗಿರುವ ಅಖಂಡ ಶ್ರೀನಿವಾಸಮೂರ್ತಿ ಜೆಡಿಎಸ್​​ ಅಭ್ಯರ್ಥಿ ಪ್ರಸನ್ನ ಕುಮಾರ್ ವಿರುದ್ಧ 81626 ಮತಗಳ ಅಂತರದ ಗೆಲುವು ಸಾಧಿಸಿದ್ದರಲ್ಲದೆ ಚಲಾವಣೆಯಾದ ಮತಗಳಲ್ಲಿ ಶೇ. 77ರಷ್ಟನ್ನು ಬಾಚಿದ್ದರು. ಆದರೆ ಎರಡು ವರ್ಷ ಕಳೆಯುವುದರಲ್ಲಿ ಅವರು ಪಕ್ಷಕ್ಕೆ ಬೇಡವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆದರೆ ಇದಕ್ಕಿಂತ ಹೆಚ್ಚಾಗಿ ಪಕ್ಕದ ಕ್ಷೇತ್ರ ಸಿವಿ ರಾಮನ್ ನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್ ಸಂಪತ್​ ರಾಜ್​ ತಮ್ಮ ವಿರುದ್ಧ ಹತ್ಯೆ ಹತ್ನ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರ ಪರ ವಹಿಸಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ಅಖಂಡ ತೀವ್ರ ಬೇಸರಗೊಂಡಿದ್ದಾರೆ.

ಈಗಾಗಲೇ ಸಂಪತ್​ ರಾಜ್​ ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತ ಎನಿಸಿಕೊಂಡಿದ್ದಾರೆ. ಇದರ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಸಂಪತ್ ಪರವಾಗಿ ವಾದ ಮಾಡುತ್ತಿದ್ದಾರೆ. ಕಾಂಗ್ರೆಸ್​​ನ ಯಾವೊಬ್ಬ ನಾಯಕರೂ ದಲಿತ ಶಾಸಕನೊಬ್ಬನ ಮೇಲೆ ನಡೆದ ದೌರ್ಜನ್ಯಕ್ಕೆ ದನಿಯಾಗದೆ, ಕೃತ್ಯ ನಡೆಸಿದವರ ಪರವಾಗಿದ್ದಾರೆ. ತಮ್ಮ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ ಎಂಬ ಬೇಸರವನ್ನು ಅಖಂಡ ಶ್ರೀನಿವಾಸಮೂರ್ತಿ ಆಪ್ತರ ಬಳಿ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಏನಾದರಾಗಲಿ ತಾವು ಈ ವಿಚಾರವನ್ನು ಹೈಕಮಾಂಡ್ ಮುಂದೆ ತರಲು ಅವರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೈಕಮಾಂಡ್​ಗೆ ಪತ್ರ ಇಲ್ಲವೇ ಭೇಟಿ

ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಿ ದಲಿತ ಶಾಸಕನಿಗೆ ಆಗಿರುವ ಅನ್ಯಾಯ ತಿಳಿಯುತ್ತಿಲ್ಲ. ನಾನು 2013ರ ಚುನಾವಣೆಯಲ್ಲಿ ಜೆಡಿಎಸ್​​ನಿಂದ ಗೆದ್ದಿದ್ದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭಾರೀ ಮತಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿದ್ದೆ. ಆದರೆ ಪಕ್ಷದ ರಾಜ್ಯ ನಾಯಕರು ಕಡೆಗಣಿಸುತ್ತಿದ್ದಾರೆ. ಇದರಿಂದ ನನ್ನ ನೋವನ್ನು ಇಲ್ಲಿ ಕೇಳುವವರಿಲ್ಲ. ಅದಕ್ಕಾಗಿ ಪಕ್ಷದ ಹೈಕಮಾಂಡ್ ನಾಯಕರಿಗೆ ವಿಸ್ತೃತ ಪತ್ರ ಬರೆಯುತ್ತೇನೆ, ಅವಕಾಶ ಸಿಕ್ಕರೆ ಭೇಟಿಯನ್ನೂ ಮಾಡುತ್ತೇನೆ ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಲು ಅವಕಾಶ ಸಿಗುವುದು ಕಷ್ಟ. ಆದರೆ ಅವರಿಗೆ ನನ್ನ ನೋವನ್ನು ತಲುಪಿಸುವ ವ್ಯಕ್ತಿಗಳಿಗೆ ಮನವಿ ಮಾಡುತ್ತೇನೆ. ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದೇ ರಾಹುಲ್ ಗಾಂಧಿಯವರು. ಹೀಗಾಗಿ ಅವರಿಗೆ ನನ್ನ ನೋವು ಅರ್ಥವಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.