ಬಳ್ಳಾರಿ: ಗಣಿ ಜಿಲ್ಲೆಯ ನಾನಾ ಕಡೆಗಳಲ್ಲಿ ಏಕಕಾಲಕ್ಕೆ ನಡೆಯಬೇಕಿದ್ದ 7 ಬಾಲ್ಯ ವಿವಾಹಗಳನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆಹಿಡಿದಿದ್ದಾರೆ.
![Officers stopped 7 Child Marriages in Bellary](https://etvbharatimages.akamaized.net/etvbharat/prod-images/kn-bly-1-seven-child-marriage-stopped-7203310_27052020063719_2705f_1590541639_145.jpg)
ಬಾಲ್ಯ ವಿವಾಹಕ್ಕೆ ತಯಾರಿ ನಡೆಸಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಿವಾಹಗಳನ್ನ ತಡೆಹಿಡಿದಿದ್ದಾರೆ. ಬಳ್ಳಾರಿಯ ವಿನಾಯಕ ನಗರದಲ್ಲಿ ಬಾಲಕಿಗೆ ನಡೆಯುತ್ತಿದ್ದ ನಿಶ್ಚಿತಾರ್ಥ ಹಾಗೂ ಬಳ್ಳಾರಿ ತಾಲ್ಲೂಕಿನ ಬೆಳಗಲ್ಲು ತಾಂಡಾ 1, ಕಕ್ಕಬೇವಿನಹಳ್ಳಿ 1, ಶಂಕರ ಬಂಡೆಯಲ್ಲಿ 2, ಕುರುಗೋಡು ತಾಲೂಕಿನ ಬಸಾಪುರ 1, ಸಿರುಗುಪ್ಪ ತಾಲೂಕಿನ ಹಾಗಲೂರು ಹೊಸಳ್ಳಿಯ ಬಾಲಕಿ ಮತ್ತು ಸಿಂಧಿಗೇರಿಯ ಯುವಕನೊಂದಿಗೆ ನಡೆಯುತ್ತಿದ್ದ ಒಟ್ಟು 7 ಬಾಲ್ಯ ವಿವಾಹಗಳನ್ನ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಲ್ಲಿ ಬಳ್ಳಾರಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಲಾಲಪ್ಪ, ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾರಾಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್ ಪಾಷಾ, ಸಿಬ್ಬಂದಿಯಾದ ಈಶ್ವರ್ ರಾವ್, ಉಮೇಶ್, ನಗರ ಅಂಗನವಾಡಿ ಮೇಲ್ವಿಚಾರಕಿ, ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಆರ್.ನಾಗರಾಜ ತಿಳಿಸಿದ್ದಾರೆ.