ETV Bharat / city

ಕಲಾಪದಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಚರ್ಚೆ : ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ

author img

By

Published : Dec 22, 2021, 11:53 AM IST

ಇಂದು ವಿಧಾನಸಭೆ ಕಲಾಪದಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಕುರಿತು ಚರ್ಚೆ ನಡೆಯಲಿರುವ ಹಿನ್ನೆಲೆ ಸುವರ್ಣಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಮಾಧ್ಯಮ ಪ್ರತಿನಿಧಿಗಳು ಸುವರ್ಣಸೌಧದ ಪಶ್ಚಿಮ‌ ದ್ವಾರದ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು..

Suvarna soudha
ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ

ಬೆಳಗಾವಿ : ವಿವಾದಿತ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಕುರಿತು ಇಂದು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯಲಿರುವ ಹಿನ್ನೆಲೆ ಸುವರ್ಣಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಲಾಗಿದೆ.

ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಪೊಲೀಸ್ ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಎಸ್​ಪಿ ಸೂಚನೆ ಮೇರೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಸುವರ್ಣಸೌಧ ನಿಯೋಜಿತ ಪೊಲೀಸರು ಹೇಳಿದ್ದಾರೆ.

ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳಿಗೆ ಸುವರ್ಣಸೌಧ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮಾಧ್ಯಮ‌ ಪ್ರತಿನಿಧಿಗಳು ಕಾರಿಡಾರ್​, ಲಾಂಜ್​ಗಳಲ್ಲಿ ಓಡಾಡದಂತೆ ನಿರ್ಬಂಧಿಸಲಾಗಿದೆ. ಸುವರ್ಣಸೌಧದ ಮುಂಭಾಗ ಬಿಟ್ಟು ಬೇರೆ ಎಲ್ಲೂ ಹೋಗದಂತೆ ನಿರ್ಬಂಧಿಸಲಾಗಿದೆ.

ಕ್ಯಾಮೆರಾಗಳು ಸುವರ್ಣ ವಿಧಾನಸೌಧ ಪ್ರವೇಶ ಮಾಡುವಂತಿಲ್ಲ. ವಿಧಾನಸಭಾ ಲಾಂಜ್ ಮತ್ತು ವಿರೋಧ ಪಕ್ಷದ ಕೊಠಡಿಗಳ ಬಳಿ ಕ್ಯಾಮೆರಾ ಹಾಕಲು ನಿರ್ಬಂಧಿಸಲಾಗಿದೆ. ಯಾವುದೇ ಗೇಟ್​ನಿಂದಲೂ ಕ್ಯಾಮೆರಾ ಒಳ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆ ಮಾಧ್ಯಮ ಪ್ರತಿನಿಧಿಗಳು ಸುವರ್ಣಸೌಧದ ಪಶ್ಚಿಮ‌ ದ್ವಾರದ ಮುಂದೆ ಕೂತು ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಾನು ನಿರ್ಬಂಧ ಹೇರಿ ಎಂದು ಯಾರಿಗೂ ಸೂಚನೆ ನೀಡಿಲ್ಲ. ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರಗೂ ಈ ಬಗ್ಗೆ ಮಾಹಿತಿ ಕೇಳಿದ್ದೇನೆ‌.

ಅವರು ನಮ್ಮ ಕಡೆಯಿಂದ ಯಾವುದೇ ರೀತಿಯ ಸೂಚನೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಈ ನಿರ್ಬಂಧದ ಸೂಚನೆ ಹಿಂದೆ ಯಾರಿದ್ದಾರೆ ಎಂಬ ಸತ್ಯಾಸತ್ಯತೆ ತಿಳಿದುಕೊಳ್ಳುತ್ತೇನೆ. ಎಂದಿನಂತೆ ಮಾಧ್ಯಮ ಪ್ರತಿನಿಧಿಗಳು ಓಡಾಡಬಹುದು ಎಂದು ತಿಳಿಸಿದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.