ETV Bharat / city

ಬೆಳಗಾವಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಓರ್ವನ ಕೊಲೆ, ಹತ್ತಾರು ವಾಹನಗಳಿಗೆ ಬೆಂಕಿ

author img

By

Published : Jun 19, 2022, 7:00 AM IST

ಬೆಳಗಾವಿ ಹೊರವಲಯದ ಗೌಂಡವಾಡ ಗ್ರಾಮದಲ್ಲಿ ಕಳೆದ ರಾತ್ರಿ ಭಾರಿ ಹಿಂಸಾಚಾರ ನಡೆದಿದೆ. ಕಾರು ಪಾರ್ಕಿಂಗ್ ವಿಷಯಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಹತ್ತಾರು ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಬೆಳಗಾವಿ
ಬೆಳಗಾವಿ

ಬೆಳಗಾವಿ: ಕಾರು ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ‌ತಿರುಗಿದ್ದು ಓರ್ವನ ಕೊಲೆಯಲ್ಲಿ ಮುಗಿದಿದೆ. ಬಳಿಕ ನಡೆದ ಹಿಂಸಾಚಾರದಲ್ಲಿ ಹತ್ತಾರು ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆ ಬೆಳಗಾವಿ ಹೊರವಲಯದ ಗೌಂಡವಾಡ ಗ್ರಾಮದಲ್ಲಿ ನಡೆಯಿತು.

ಇದೇ ಗ್ರಾಮದ‌ ಸತೀಶ ಪಾಟೀಲ (37) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ನಸುಕಿನ ಜಾವ ಪೊಲೀಸರು 20 ಆರೋಪಿಗಳನ್ನು ಬಂಧಿಸಿದ್ದಾರೆ. ಗ್ರಾಮದ ಬೈರೋನಾಥ ದೇವಸ್ಥಾನಕ್ಕೆ ಸೇರಿದ ಜಮೀನು ಉಳಿಸಲು ಸತೀಶ ಪಾಟೀಲ (37) ಹೋರಾಟ ನಡೆಸಿದ್ದರು ಎಂದು ತಿಳಿದುಬಂದಿದೆ.

ಶನಿವಾರ ತಡರಾತ್ರಿ ಅವರ ಕೊಲೆಯಾದ ಕಾರಣ ಹಿಂಸಾಚಾರ ಉಂಟಾಗಿದೆ. ನಾಲ್ಕು ಕಾರು, ಒಂದು ಟ್ರ್ಯಾಕ್ಟರ್, ಎರಡು ಟೆಂಪೊ ಹಾಗೂ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ‌ಸಿಬ್ಬಂದಿ ಇಂದು ಬೆಳಗಿನ ಜಾವದವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮದ ಹಲವು ಮನೆಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಹಿಂಸಾಚಾರದಿಂದ ಬೆಚ್ಚಿಬಿದ್ದ ಕೆಲವು ಗ್ರಾಮಸ್ಥರು ರಾತ್ರಿಯೇ ಊರು ತೊರೆದ ಮಾಹಿತಿ ಇದೆ. ಇನ್ನೂ ಕೆಲವರು ಮನೆಗಳಿಗೆ ಒಳಗಿನಿಂದಲೇ ಬೀಗ ಹಾಕಿಕೊಂಡಿದ್ದಾರೆ.

ಪೊಲೀಸರು ಗಸ್ತಿಗೆ ಬಂದಾಗ ಕೆಲ ಯುವಕರು ಅವರ ಮೇಲೂ ಹರಿಹಾಯ್ದರು. "ನಮ್ಮ ಸಮುದಾಯದ ಜಾಗಕ್ಕೆ ಬಂದು ನಮ್ಮನ್ನು ಹೊಡೆದಿದ್ದಾರೆ. ತುಳಿತಕ್ಕೊಳಗಾದ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪೊಲೀಸರು ಕೂಡ ನಮ್ಮವರನ್ನೇ ಹೊಡೆದು ಹೋಗಿದ್ದಾರೆ. ಬೆಳಗ್ಗೆ ಎಲ್ಲರಿಗೂ ಉತ್ತರ ಕೊಡುತ್ತೇವೆ" ಎಂದು ಯುವಕರ ಗುಂಪೊಂದು ಕೂಗಾಡಿತು.


ಗೌಂಡವಾಡದಲ್ಲಿ ಪರಿಸ್ಥಿತಿ ನಿಯಂತ್ರಣ: ನಗರ ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ಪ್ರತಿಕ್ರಿಯಿಸಿ, "ಗೌಂಡವಾಡ ಗ್ರಾಮದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆಗೆ ಸಂಬಂಧಿಸಿದಂತೆ ಐವರು ಆರೋಪಿಗಳು ಹಾಗೂ ದೊಂಬಿ ನಡೆಸಿದ 15 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಶನಿವಾರ ರಾತ್ರಿ ನಡೆದ ಕೊಲೆ ಇಬ್ಬರು ವ್ಯಕ್ತಿಗಳ ಮಧ್ಯೆ ಕಾರು ಪಾರ್ಕಿಂಗ್ ಮಾಡುವುದಕ್ಕೆ ಸಂಬಂಧಿಸಿದೆ. ಮೇಲ್ನೋಟಕ್ಕೆ ಇದು ಹಳೇ ದ್ವೇಷಕ್ಕೆ ನಡೆದಿದೆ ಎಂಬ ಅನುಮಾನ ಬಂದಿದೆ. ಕೂಲಂಕಷವಾಗಿ ಪರಿಶೀಲಿಸಲಾಗುವುದು" ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ: ಗ್ರಾಮದ‌ ಬೋರೇನಾಥ ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ ವ್ಯಕ್ತಿಯೊಬ್ಬರು ಮನೆ ಕಟ್ಟಿದ್ದಾರೆ ಎಂದು ಆರೋಪಿಸಿ, ಇದೇ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ಜಗಳ ನಡೆದಿತ್ತು. ಈ ಒಳಜಗಳ ಮುಂದೆ ಎರಡು ಸಮುದಾಯಗಳ ನಡುವಿನ ವೈಷಮ್ಯವಾಗಿ ಮಾರ್ಪಟ್ಟಿತ್ತು. ಆದರೆ, ಗ್ರಾಮದ ಹಿರಿಯರು ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ. ಇತ್ತೀಚೆಗೆ ಮತ್ತೆ ಸಮಸ್ಯೆ ತಲೆದೋರಿದೆ.

ಹಿಂಸಾಚಾರ ಘಟನೆಯಲ್ಲಿ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ. ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಯಾರಿಗೂ ಪ್ರಾಣಾಪಾಯ ಇಲ್ಲ. ಪೊಲೀಸ್ ತುಕಡಿಗಳು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಸರ್ಪಗಾವಲಿದೆ. ಜನ ಭಯಪಡಬೇಕಿಲ್ಲ. ಬೆಳಗಾವಿ ನಗರ ಹಾಗೂ ಸುತ್ತಲಿನ ಜನರು ಗಾಳಿ ಮಾತಿಗೆ ಕಿವಿಗೊಡದೆ ಸಂಯಮದಿಂದ ವರ್ತಿಸಬೇಕು ಎಂದು ಕಮಿಷನರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ 12 ಬಿಜೆಪಿ ನಾಯಕರಿಗೆ 'ವೈ' ಶ್ರೇಣಿ ಭದ್ರತೆ: 138 ಎಫ್‌ಐಆರ್‌ ದಾಖಲು, 716 ಜನರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.