ಬೆಳಗಾವಿ: ಬೆಳಗಾವಿ ಬೇಕಾ ಅಂತಾ ಪ್ರಶ್ನಿಸಿ ಎಂಇಎಸ್ ಮುಖಂಡ ದೀಪಕ್ ಧಳವಿ ಮೈಮೇಲೆ ಕಪ್ಪು ಮಸಿ ಬಳಿದ ಕನ್ನಡಪರ ಸಂಘಟನೆಯ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಂಇಎಸ್ ಮುಖಂಡ ದೀಪಕ್ ಧಳವಿ ನಾಳೆ ಬೆಳಗಾವಿ ಬಂದ್ಗೆ ಕರೆ ಕೊಟ್ಟಿದ್ದಾರೆ. ಆದ್ರೆ ಇದಕ್ಕೆ ಪೊಲೀಸರು ಅನುಮತಿ ನೀಡಿಲ್ಲ.
ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಬಳಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ವಿರೋಧಿಸಿ ಎಂಇಎಸ್ ಮುಖಂಡರು ನಡು ರಸ್ತೆಯಲ್ಲಿಯೇ ವೇದಿಕೆ ನಿರ್ಮಿಸಿ ಮಹಾಮೇಳಾವ್ ಕಾರ್ಯಕ್ರಮ ನಡೆಸುತ್ತಿದ್ದರು. ಇದನ್ನು ಬೆಳಗಾವಿಯ ಕನ್ನಡಪರ ಸಂಘಟನೆಗಳು ಖಂಡಿಸಿದರು. ಆದ್ರೆ, ಇದ್ಯಾವದಕ್ಕೂ ಕ್ಯಾರೆ ಎನ್ನದ ಎಂಇಎಸ್ ಮುಖಂಡರು ಇಂದು ಬೆಳಿಗ್ಗೆಯಿಂದ ಮಹಾಮೇಳಾವ್ ನಡೆಸುತ್ತಿದ್ದರು.
ಈ ವೇಳೆ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಎಂಇಎಸ್ ಮುಖಂಡರನ್ನು ಮನವೊಲಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೂ ಎಂಇಎಸ್ ಮುಖಂಡರು, ಕಾರ್ಯಕರ್ತರು ತಮ್ಮ ದರ್ಪವನ್ನು ತೋರಿಸುವ ಮೂಲಕ ಪುಂಡಾಟ ಪ್ರದರ್ಶನ ಮಾಡಿದ್ರು. ಇದೇ ವೇಳೆ ಮಹಾಮೇಳಾವ್ ನಡೆಯುತ್ತಿರುವ ಸ್ಥಳಕ್ಕೆ ನುಗ್ಗಿದ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್ಕುಮಾರ್ ದೇಸಾಯಿ ಎಂಬುವವರು ಎಂಇಎಸ್ ಮುಖಂಡನ ಮೇಲೆ ಮಸಿ ಎರಚಿದ್ದಾರೆ.
ಈ ವೇಳೆ ಎಂಇಎಸ್ ಮುಖಂಡ ದೀಪಕ್ ಧಳವಿ ಎದುರಿಗೆ ಬಂದು ನಿನಗೆ ಬೆಳಗಾವಿ ಬೇಕಾ ಅಂತಾ ಪ್ರಶ್ನಿಸಿ ಎಂಇಎಸ್ ಮುಖಂಡ ದೀಪಕ್ ಧಳವಿ ಮೇಲೆ ಕಪ್ಪು ಮಸಿ ಬಳಿದಿದ್ದಾರೆ. ತಕ್ಷಣವೇ ಪೊಲೀಸರು ಕನ್ನಡಪರ ಸಂಘಟನೆಯ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಎಂಇಎಸ್ ಮುಖಂಡರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡರು.
ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ನಡೆಯುತ್ತಿದ್ದ ಎಂಇಎಸ್ ಪುಂಡರ ಮಹಾಮೇಳಾವ ಮುಕ್ತಾಯ:
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಇಡೀ ಸರ್ಕಾರ ಬೆಳಗಾವಿಯಲ್ಲಿದೆ. ಆದ್ರೆ, ಸರ್ಕಾರಕ್ಕೆ ಸೆಡ್ಡು ಹೊಡೆದ ಎಂಇಎಸ್ ಮುಖಂಡರು ಮಹಾಮೇಳಾವ್ ಮಾಡಿದರು. ಇತ್ತ ಮಹಾಮೇಳಾವ್ ಮುಕ್ತಾಯ ಆಗುತ್ತಿದ್ದಂತೆ ಟೀಳಕವಾಡಿ ಪೊಲೀಸರು ಠಾಣೆಯತ್ತ ಆಗಮಿಸಿದರು. ಈ ವೇಳೆ ಮಾರ್ಗದಲ್ಲಿ ತಡೆಯಲು ಬಂದ ಡಿಸಿಪಿ ಡಾ.ವಿಕ್ರಮ ಆಮಟೆ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನೇ ತಳಿ ಪುಂಡಾಟ ಪ್ರದರ್ಶನ ಮಾಡಿದರು.
ಬಳಿಕ ಶಾಂತಿಯುತವಾಗಿ ಮೆರವಣಿಗೆಯಲ್ಲಿ ತೆರಳುವಂತೆ ಡಿಸಿಪಿ ಡಾ.ವಿಕ್ರಮ್ ಆಮಟೆ ಸೂಚನೆ ನೀಡಿದರು. ಬಳಿಕ ವ್ಯಾಕ್ಸಿನ್ ಡಿಪೋ ಮಹಾಮೇಳಾವ್ ವೇದಿಕೆಯಿಂದ ಟಿಳಕವಾಡಿ ಪೊಲೀಸ್ ಠಾಣೆವರೆಗೂ ತೆರಳಿ ಮಸಿ ಬಳಿದಿದ್ದ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತನ ವಿರುದ್ಧ ದೂರು ನೀಡಿದರು. ಮೆರವಣಿಗೆಯಲ್ಲಿ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆಗಳನ್ನು ಕೂಗಿದರು. ಟಿಳಕವಾಡಿ ಪೊಲೀಸ್ ಠಾಣೆಗೆ ತೆರಳಿ ಡಿಸಿಪಿ ಡಾ.ವಿಕ್ರಮ್ ಆಮಟೆ ನೇತೃತ್ವದಲ್ಲಿ ಎಂಇಎಸ್ ಮುಖಂಡರು ದೂರು ಕೊಟ್ಟರು.
ಎಂಇಎಸ್ ಮುಖಂಡನ ಮೇಲೆ ಮಸಿ ಎರಚಿದ ಯುವಕನ: ಬೆಳಗಾವಿ ಬಂದ್ಗೆ ಅವಕಾಶ ಇಲ್ಲ
ಎಂಇಎಸ್ ಮುಖಂಡರ ಮೇಲೆ ಮಸಿ ಎರಚಿದ ಯುವಕನನ್ನು ಈಗಾಗಲೇ ಬಂಧನ ಮಾಡಲಾಗಿದೆ. ಘಟನೆ ಸಂಬಂಧ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಮಹಾಮೇಳಾವ್ ಆಯೋಜನೆಗೆ ಮಾಡಲು ಅನುಮತಿ ನೀಡಿರಲಿಲ್ಲ ಎಂದು ಮಹಾನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಹೇಳಿದರು.
ಮಹಾನಗರ ಪಾಲಿಕೆ ಸಿಬ್ಬಂದಿಗೆ ಎಂಇಎಸ್ ಮುಖಂಡರ ಆವಾಜ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮಹಾನಗರ ಪಾಲಿಕೆ ಸಿಬ್ಬಂದಿ ದೂರು ನೀಡಿದ್ರೆ ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಳ್ಳಲಾಗುವುದು. ಅಧಿವೇಶನ ಇರುವ ಹಿನ್ನೆಲೆ ನಾಳೆ ಬೆಳಗಾವಿ ಬಂದ್ಗೆ ನಾವು ಅವಕಾಶ ನೀಡೊದಿಲ್ಲ. ಬಂದ್ಗೆ ಕರೆ ನೀಡಿದವರ ಜೊತೆ ಮಾತನಾಡಿ ಮನವೊಲಿಸುತ್ತೇವೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.