ಬೆಳಗಾವಿ: ಸರ್ಕಾರದ ಕೋವಿಡ್ ಮಾರ್ಗಸೂಚಿಗಳ ಅನ್ವಯ ಕುಂದಾನಗರಿಯಲ್ಲಿ ಗಣೇಶ ಮೂರ್ತಿಯ ನಿಮಜ್ಜನ ಮಹೋತ್ಸವಕ್ಕೆ ಜಿಲ್ಲಾಡಳಿತ ನಿಗದಿ ಮಾಡಿದ ಸಮಯದೊಳಗೆ ಯಾವುದೇ ಅದ್ಧೂರಿ ಆಚರಣೆ, ಮೆರವಣಿಗಳು, ಕಾರ್ಯಕ್ರಮಗಳಿಲ್ಲದೇ ಸರಳವಾಗಿ ನೆರವೇರಿತು.
ನಗರವೊಂದರಲ್ಲಿಯೇ 380ಕ್ಕೂ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಟಾಪಿಸಿದ್ದ ಬಹುತೇಕ ಎಲ್ಲ ಗಣಪತಿ ಮೂರ್ತಿ ನಿಮಜ್ಜನ ಸರಳವಾಗಿ ಜರುಗಿತು. ಕೋವಿಡ್ ಇರುವ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಭಕ್ತರು, ಹತ್ತು ದಿನಗಳ ಕಾಲ ನಗರದಲ್ಲಿ ಸರಳವಾಗಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕೊನೆಯ ದಿನವಾದ ಇಂದು ಸಂಜೆ 5 ಗಂಟೆಯೊಳಗಡೆ ನಿಮಜ್ಜನ ಮಾಡುವಂತೆ ಗಣೇಶ ಮಂಡಳಿಗಳಿಗೆ ತಾಕೀತು ಮಾಡಿ ಕೇವಲ ಹತ್ತು ಜನರಿಗೆ ಮಾತ್ರ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಿತ್ತು.
ಹೀಗಾಗಿ ಭಕ್ತರು ಕಪಿಲೇಶ್ವರ ಮಂದಿರ ಆವರಣದಲ್ಲಿ ಪಾಲಿಕೆ ವತಿಯಿಂದ ತೆರೆಯಲಾಗಿದ್ದ ನೀರಿನ ಹೊಂಡದಲ್ಲಿ ಗಣೇಶ ಮೂರ್ತಿಯ ನಿಮಜ್ಜನೆ ಮಾಡಲಾಯಿತು.
ಪೊಲೀಸ್ ಸರ್ಪಗಾವಲು:
ಮಹಾನಗರ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಎಚ್ಚರಿಕೆ ವಹಿಸಲಾಗಿದೆ.1,200 ಪೊಲೀಸ್ ಸಿಬ್ಬಂದಿಗಳು, 60 ಪಿಎಸ್ಐ, 40 ಇನ್ಸ್ಪೆಕ್ಟರ್ಗಳು, 8ಎಸಿಪಿಗಳು, 8 ಕೆಎಸ್ಆರ್ಪಿ ತುಕಡಿಗಳು, 10 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಮೂರ್ತಿಗಳ ನಿಮಜ್ಜನಾ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರು ನಿಯೋಜಿಸಲಾಗಿದೆ.
ಕೊರೊನಾ ಕಾಲದ ಮುಂಚೆ ಬೆಳಗಾವಿ ನಗರದಲ್ಲಿ ಮಹಾರಾಷ್ಟ್ರದ ಮಾದರಿಯಲ್ಲಿಯೇ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿತ್ತು.ಆದ್ರೆ, ಈ ವರ್ಷವೂ ಕೋವಿಡ್ ನಿಂದ ಅದ್ಧೂರಿ ಆಚರಣೆಗೆ ಬ್ರೇಕ್ ಬಿದ್ದಿದ್ದು, ಗಣೇಶ ಮಂಡಳಿಗಳು ಕೂಡ ಸರಳವಾಗಿ ಮೂರ್ತಿ ನಿಮಜ್ಜನೆ ಮಾಡಿದ್ದು, ಕಂಡುಬಂದ್ರೆ ಕೆಲವರು ಸಣ್ಣಪುಟ್ಟ ಜ್ಯಾಂಜ್ ಮೇಳಗಳನ್ನು ಹಚ್ಚಿಕೊಂಡು ಒಬ್ಬರಿಗೊಬ್ಬರು ಮುಖಕ್ಕೆ ಗುಲಾಲ್ ಎರಚಿಕೊಂಡು ಡ್ಯಾನ್ಸ್ ಮಾಡುತ್ತಾ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಕುಟುಂಬ ಸಮೇತರಾಗಿ ಆಗಮಿಸಿ ಗಣೇಶ ಮೂರ್ತಿಗಳ ವಿಸರ್ಜನೆಯಲ್ಲಿ ಪಾಲ್ಗೊಂಡರು.