ETV Bharat / city

ಗಣೇಶೋತ್ಸವಕ್ಕೆ 5 ದಿನ ಮಿತಿಗೆ ಮಹಾಮಂಡಳಿಗಳ ವಿರೋಧ; ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ಬೆಳಗಾವಿ ಡಿಸಿ ಸ್ಪಷ್ಟನೆ

author img

By

Published : Sep 7, 2021, 4:10 PM IST

ಬೆಳಗಾವಿಯಲ್ಲಿ ಗಣೇಶೋತ್ಸವಕ್ಕೆ 5 ದಿನಗಳ ಅವಕಾಶ ನೀಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಇಂದು ವಿವಿಧ ಗಣೇಶೋತ್ಸವ ಮಹಾಮಂಡಳಿಗಳ ಜೂತೆ ಜಿಲ್ಲಾಧಿಕಾರಿ ಸಭೆ ನಡೆಸಿದರು.

Belgavi dc MG_Hiremath meeting
ಗಣೇಶೋತ್ಸವಕ್ಕೆ 5 ದಿನಗಳ ಮಿತಿಗೆ ಮಹಾಮಂಡಳಿಗಳ ವಿರೋಧ; ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ಬೆಳಗಾವಿ ಡಿಸಿ ಸ್ಪಷ್ಟನೆ

ಬೆಳಗಾವಿ: ಮಹಾನಗರದ ಗಣೇಶೋತ್ಸವ ಮಹಾಮಂಡಳಿಗಳ ಒಕ್ಕೊರಲಿನ ಕೋರಿಕೆಯಂತೆ ಗಣೇಶೋತ್ಸವವನ್ನು ಐದು‌ ದಿನಗಳ ಬದಲಾಗಿ ಹತ್ತು ದಿನಗಳ ಉತ್ಸವಕ್ಕೆ ಅವಕಾಶ ಕಲ್ಪಿಸುವ ಬೇಡಿಕೆ ಸಂಬಂಧ ಸರ್ಕಾರಕ್ಕೆ ‌ತಕ್ಷಣ ವರದಿ ಕಳುಹಿಸಲಾಗುವುದು. ಈ ಕುರಿತು ಅಂತಿಮವಾಗಿ ಸರ್ಕಾರ ‌ನೀಡುವ ನಿರ್ದೇಶನವನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಗಣೇಶೋತ್ಸವ ಮಹಾಮಂಡಳಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಗಣೇಶೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಗಣೇಶೋತ್ಸವ ಮಂಡಳಿಗಳಿಗೆ ಅಗತ್ಯ ಅನುಮತಿ ನೀಡಲು ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಚರ್ಚಿಸಿ ಕೂಡಲೇ ಏಕ‌ಗವಾಕ್ಷಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಗಣೇಶೋತ್ಸವ ಆಚರಣೆಗೆ ಸರ್ಕಾರದಿಂದ ಮಾರ್ಗಸೂಚಿ

ಸಾರ್ವಜನಿಕ ಗಣೇಶೋತ್ಸವದ ವೇಳೆ ಕೋವಿಡ್ ನಿಯಮಾವಳಿ ಪಾಲಿಸುವುದು ಕಡ್ಡಾಯ. 20ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಬಾರದು. ಆಯೋಜಕರು ಲಸಿಕೆ ಹಾಕಿಸಿಕೊಳ್ಳಬೇಕು. ಒಂದು ವೇಳೆ ಲಸಿಕೆ ಹಾಕಿಸಿಕೊಳ್ಳದಿದ್ದರೆ ಆರೋಗ್ಯ ಇಲಾಖೆ ವತಿಯಿಂದ ಲಸಿಕೆ‌ ವ್ಯವಸ್ಥೆ ಮಾಡಲಾಗುವುದು ಎಂದರು.

ಸಾಂಸ್ಕೃತಿಕ-ಮನರಂಜನಾ ಕಾರ್ಯಕ್ರಮ ನಿಷೇಧ

ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿಜೆ, ನೃತ್ಯ ಮತ್ತಿತರ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು. ಗಣೇಶ ಪ್ರತಿಷ್ಠಾನ ಹಾಗೂ ನಿಮಜ್ಜನೆಯ ವೇಳೆ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಪಾಲಿಕೆ‌ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಮಜ್ಜನೆಗೆ ಅವಕಾಶವಿದೆ. ಬಡಾವಣೆಗಳಿಗೆ ಮೊಬೈಲ್ ಟ್ಯಾಂಕ್‌ಗಳನ್ನು ಕೂಡ‌ ಒದಗಿಸಲಾಗುತ್ತದೆ. ಕೃತಕ ಹೊಂಡಗಳನ್ನು ಕೂಡ ಪಾಲಿಕೆ ವತಿಯಿಂದ ನಿರ್ಮಿಸಲಾಗುವುದು.

ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ: ಆದ್ರೆ, ಕಂಡಿಷನ್ಸ್‌ ಅಪ್ಲೈ

ಗಣೇಶೋತ್ಸವ ನಡೆಯುವ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಜನಸಂದಣಿ ಉಂಟಾಗದಂತೆ ಆಯೋಜಕರು ಕ್ರಮ ಕೈಗೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್‌ ಕಡ್ಡಾಯಗೊಳಿಸಬೇಕು. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲು‌ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ‌. ಇದಕ್ಕೆ ಎಲ್ಲ ಗಣೇಶೋತ್ಸವ ಮಹಾಮಂಡಳಿಗಳು ಸಹಕರಿಸಬೇಕು. ನೆರೆಯ ಮಹಾರಾಷ್ಟ್ರದಲ್ಲಿ ಎರಡು ದಿನಗಳಿಂದ ಕೋವಿಡ್ ಪ್ರಮಾಣ ಏರಿಕೆಯಾಗಿದೆ.

ಕೋವಿಡ್ ನಿಯಂತ್ರಣ ದೃಷ್ಟಿಯಿಂದ ‌ಮಾತ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಆದ್ದರಿಂದ ಎಲ್ಲರೂ ‌ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿದ್ದಾರೆ.

ಐದು ದಿನಗಳ ಮಿತಿಗೆ ವಿರೋಧ:

ಈ ಸಭೆಯಲ್ಲಿ ಮಾತನಾಡಿದ ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳಿ ಅಧ್ಯಕ್ಷ ವಿಜಯ ಜಾಧವ, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಎರಡು ವರ್ಷಗಳಿಂದ ಪಾಲಿಸಲಾಗಿದೆ. ಆದರೆ ಈ‌ ಬಾರಿ ಐದು ದಿನಗಳಿಗೆ ಮಾತ್ರ ‌ಉತ್ಸವ ಮಿತಿಗೊಳಿಸಿರುವುದಕ್ಕೆ ತಮ್ಮ ವಿರೋಧವಿದೆ. ಇನ್ನುಳಿದಂತೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಲಾಗುವುದು. ಆದರೆ ಸಂಪ್ರದಾಯ ಪ್ರಕಾರ, ಹತ್ತು ದಿನಗಳ ಉತ್ಸವ ಆಚರಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಶೇ 0.4ರಷ್ಟು ಕೋವಿಡ್ ರೇಟ್ : ಜಿಲ್ಲಾಧಿಕಾರಿ ಎಂ ಜಿ ಹಿರೇಮಠ

ಶಹಾಪುರ ವಿಭಾಗದ ನೇತಾಜಿ ಜಾಧವ ಮಾತನಾಡಿ, ಗಣೇಶೋತ್ಸವಕ್ಕೆ ಐದು ದಿನಗಳಿಗೆ ಮಿತಿಗೊಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಉತ್ಸವಕ್ಕೆ ಕೆಲವೇ ದಿನಗಳಿರುವಾಗ ಈ ರೀತಿಯ ಮಿತಿ‌ ವಿಧಿಸುವ ಮೂಲಕ ಸಂಪ್ರದಾಯಕ್ಕೆ ನಿರ್ಬಂಧ ವಿಧಿಸಿದಂತಾಗಿದೆ. ಆದ್ದರಿಂದ ಈ ಬಗ್ಗೆ ಶೀಘ್ರ ಸೂಕ್ತ ನಿರ್ಧಾರ ಪ್ರಕಟಿಸುವ ಮೂಲಕ ಉಳಿದ‌ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಉತ್ಸವ ಆಚರಣೆಗೆ ಅನುಕೂಲ ಕಲ್ಪಿಸಬೇಕು. ಏಕಗವಾಕ್ಷಿ ವ್ಯವಸ್ಥೆ ಮೂಲಕ ‌ಗಣೇಶೋತ್ಸವಕ್ಕೆ‌ ಅಗತ್ಯ ಅನುಮತಿಗಳನ್ನು ನೀಡಲು ವಿವಿಧ ಮಹಾಮಂಡಳಿಗಳ ಪದಾಧಿಕಾರಿಗಳು ಮನವಿ ಮಾಡಿಕೊಂಡರು.

ಹಿಂದೂ ಭಕ್ತಾಧಿಗಳ ಸಂಪ್ರದಾಯ ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಂಡು ಐದು ದಿನಗಳ ಬದಲಾಗಿ ಹತ್ತು ದಿನಗಳ ಉತ್ಸವಕ್ಕೆ ಅವಕಾಶ ಕಲ್ಪಿಸಬೇಕು ಎಂದು ‌ಎಲ್ಲರೂ ಆಗ್ರಹಿಸಿದರು.

ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಬೆಳಗಾವಿ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಮ್ ಆಮ್ಟೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ್ ಘಾಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.