ETV Bharat / business

ಸ್ಟಾಕ್​ ಮಾರ್ಕೆಟ್​ನಲ್ಲಿ 'ಹೂಡಿಕೆ ಮಾಡಿ ನಿಶ್ಚಿಂತೆಯಿಂದಿರಿ' ಧೋರಣೆ ನಡೆಯಲ್ಲ: ಯಾಕೆ ಗೊತ್ತಾ?

author img

By

Published : Oct 21, 2022, 3:37 PM IST

ಯುವ ಪೀಳಿಗೆ ತಮ್ಮ ಹೂಡಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿಲ್ಲ ಮತ್ತು ಸಮತೋಲನ ಸಾಧಿಸಲು ಕೂಡ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇಂಥ ಪ್ರವೃತ್ತಿಗಳಿಂದ ಕೊನೆಯಲ್ಲಿ ಅವರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ.

ಸ್ಟಾಕ್​ ಮಾರ್ಕೆಟ್​ನಲ್ಲಿ 'ಹೂಡಿಕೆ ಮಾಡಿ ನಿರಾಳವಾಗಿರಿ' ಧೋರಣೆ ನಡೆಯಲ್ಲ.. ಯಾಕೆ ಗೊತ್ತಾ?
Invest and relax attitude won't work in stock markets? Find out why

ಹೂಡಿಕೆದಾರರು ತಮ್ಮ ಹೂಡಿಕೆಯಲ್ಲಿ ಸಮತೋಲನ ಸಾಧಿಸಲು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೂಡಿಕೆ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ನಿಶ್ಚಿತ ಠೇವಣಿ ಮತ್ತು ಚಿನ್ನದ ಮೇಲಿನ ಠೇವಣಿಗಳು ಖಚಿತವಾಗಿ ಆದಾಯ ತರುವುದು ಹೌದಾದರೂ, ಇವು ಈಗ ಹಳತಾಗಿವೆ. ಹೀಗಾಗಿ ಈಗಿನ ಯುವಜನತೆ ಇಂಥ ಖಚಿತ ಆದಾಯದ ಯೋಜನೆಗಳ ಬಗ್ಗೆ ಅಷ್ಟೊಂದು ಒಲವು ತೋರಿಸುತ್ತಿಲ್ಲ. ತ್ವರಿತ ಆದಾಯ ಪಡೆಯುವ ಆಸೆಯಲ್ಲಿ ಅವರು ಆತುರದ ಮತ್ತು ಅಪಾಯಕಾರಿ ಹೂಡಿಕೆ ಯೋಜನೆಗಳ ಮೊರೆ ಹೋಗುತ್ತಿದ್ದಾರೆ.

ಯುವ ಪೀಳಿಗೆ ತಮ್ಮ ಹೂಡಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿಲ್ಲ ಮತ್ತು ಸಮತೋಲನ ಸಾಧಿಸಲು ಕೂಡ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇಂಥ ಪ್ರವೃತ್ತಿಗಳಿಂದ ಕೊನೆಯಲ್ಲಿ ಅವರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಕೋವಿಡ್ -19 ರ ನಂತರ ಷೇರು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆದಾರರ ಸಂಖ್ಯೆ ಬಹುಪಟ್ಟು ಹೆಚ್ಚಾದ ನಂತರದ ಸಮಯದಲ್ಲಿ ಇಂಥದೊಂದು ಸನ್ನಿವೇಶ ಕಂಡುಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ಎರಡು ವರ್ಷಗಳಲ್ಲಿ 'ಡಿಮ್ಯಾಟ್ ಖಾತೆಗಳ' ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ.

ಹಿಂದಿನವರಿಗೆ ಹೋಲಿಸಿದರೆ ಇಂದಿನ ಯುವಕರ ಹಣಕಾಸು ಗುರಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಯುವ ಪೀಳಿಗೆ ತ್ವರಿತ ಆರ್ಥಿಕ ಸ್ವಾತಂತ್ರ್ಯವನ್ನು ಬಯಸುತ್ತಿದೆ. ಅದಕ್ಕಾಗಿಯೇ ಅವರು ಹೆಚ್ಚಿನ ಆದಾಯ ನೀಡುವ ಯೋಜನೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಅವು ಒಳಗೊಂಡಿರುವ ಅಪಾಯದ ಪ್ರಮಾಣವನ್ನು ಕೂಡ ಲೆಕ್ಕಿಸದೆ ಅವರು ಅವುಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಹೂಡಿಕೆ ಮಾಡುವಾಗ ಹಣದುಬ್ಬರ ಮೀರಿದ ಆದಾಯದ ಗುರಿಯನ್ನು ಹೊಂದಿರುವುದರಲ್ಲಿ ತಪ್ಪೇನಿಲ್ಲ. ಅದೇ ಸಮಯದಲ್ಲಿ ಹೂಡಿಕೆದಾರನೊಬ್ಬ ಕೆಲ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ಅದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಯುವ ಹೂಡಿಕೆದಾರರು ಹೆಚ್ಚಿನ ರಿಸ್ಕ್ ತಡೆದುಕೊಳ್ಳುವ ಅಂತರ್ಗತ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅವರ ಹೂಡಿಕೆಗಳು ಹೆಚ್ಚಾಗಿ ಈಕ್ವಿಟಿ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಆದರೆ, ಶೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯನ್ನು ಪರಿಗಣಿಸಿದರೆ, ಈಕ್ವಿಟಿಗಳ ಜೊತೆಗೆ ಇತರ ಹೂಡಿಕೆ ಯೋಜನೆಗಳತ್ತ ಗಮನ ಹರಿಸಬೇಕು. ನಮ್ಮ ಎಲ್ಲಾ ಹಣವನ್ನು ಈಕ್ವಿಟಿಗಳಲ್ಲಿ ತೊಡಗಿಸಿದರೆ ಶೇರು ಮಾರುಕಟ್ಟೆಗಳ ಕುಸಿತದ ಸಮಯದಲ್ಲಿ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ, ಹೂಡಿಕೆ ಮಾಡುವಾಗ ಅಪಾಯಕಾರಿ ಮತ್ತು ಖಾತರಿದಾಯಕ ಯೋಜನೆಗಳ ನಡುವೆ ಸಮತೋಲನ ಸಾಧಿಸಲು ಸರಿಯಾದ ಸಲಹೆಗಳನ್ನು ಅನುಸರಿಸಬೇಕು.

ನಿಮ್ಮ ಹಣಕಾಸಿನ ಗುರಿಗಳನ್ನು ಮೊದಲು ನಿರ್ಧರಿಸಿ ನಂತರ ಅದಕ್ಕೆ ಅನುಗುಣವಾಗಿ ಹೂಡಿಕೆ ಮಾಡಿ. ಈಕ್ವಿಟಿಗಳು, ಸಾಲ, ಸ್ಥಿರ ಆದಾಯ, ಚಿನ್ನ ಮತ್ತು ಅಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ವೈವಿಧ್ಯಮಯ ಹೂಡಿಕೆಗಳನ್ನು ಗುರಿಯಾಗಿರಿಸಿಕೊಳ್ಳಿ. ದೀರ್ಘಾವಧಿಯ ಕಾರ್ಯತಂತ್ರದೊಂದಿಗೆ ಸ್ಥಿರವಾದ ಕ್ರಮಬದ್ಧತೆಯೊಂದಿಗೆ ಹೂಡಿಕೆಗಳನ್ನು ಮುಂದುವರಿಸಿ. ಈ ಕೆಲ ಯೋಜನೆಗಳು ತುರ್ತು ಪರಿಸ್ಥಿತಿಗಳಲ್ಲಿ ಸುಲಭ ನಗದೀಕರಣ ಸೌಲಭ್ಯವನ್ನು ಒದಗಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೂಡಿಕೆಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಪ್ರತಿ ವರ್ಷ ಅವುಗಳಿಂದ ಬರುವ ಆದಾಯವನ್ನು ಪರಿಶೀಲಿಸಿ.

ಹೂಡಿಕೆಯು ನಿರೀಕ್ಷಿತ ಆದಾಯವನ್ನು ನೀಡಿದ ನಂತರ, ಅದರಿಂದ ಭಾಗಶಃ ಮೊತ್ತವನ್ನು ಹಿಂಪಡೆಯಿರಿ. ನಿಮ್ಮ ಒಟ್ಟಾರೆ ಹೂಡಿಕೆ ಪೋರ್ಟ್‌ಫೋಲಿಯೊದಲ್ಲಿ ಸಮತೋಲನವನ್ನು ಸಾಧಿಸಬೇಕಾದರೆ ಹೀಗೆ ಮಾಡುವುದು ಅಗತ್ಯ. ಹೂಡಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ಹಣಕಾಸಿನ ಗುರಿಗಳನ್ನು ಸಾಧಿಸುವಲ್ಲಿ ನಾವು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇವೆಯೇ ಎಂದು ಸುಲಭವಾಗಿ ಕಂಡುಹಿಡಿಯಬಹುದು. ಬದಲಾಗುತ್ತಿರುವ ಕಾಲದ ಬೇಡಿಕೆಗಳಿಗೆ ನಮ್ಮ ಹೂಡಿಕೆ ಯೋಜನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ‘ಹೂಡಿಕೆ ಮತ್ತು ವಿಶ್ರಾಂತಿ’ ಧೋರಣೆ ಈ ನಿಟ್ಟಿನಲ್ಲಿ ಸಹಾಯ ಮಾಡುವುದಿಲ್ಲ.

ಇದನ್ನೂ ಓದಿ: ಎಫ್​ಡಿ ಮೇಲೆ ಅತಿ ಹೆಚ್ಚು ಬಡ್ಡಿ ಆಸೆ ಬೇಡ.. ಅಸಲೂ ಹೋದೀತು ಜೋಕೆ!

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.