ETV Bharat / business

ರೈಲು ದುರಂತ ಸಂತ್ರಸ್ತರ ಕ್ಲೈಮ್​ ತ್ವರಿತವಾಗಿ ಇತ್ಯರ್ಥಪಡಿಸುವಂತೆ ವಿಮಾ ಕಂಪನಿಗಳಿಗೆ ಸೂಚನೆ

author img

By

Published : Jun 5, 2023, 1:50 PM IST

ಒಡಿಶಾ ರೈಲು ದುರಂತದ ಸಂತ್ರಸ್ತರ ವಿಮಾ ಕ್ಲೈಮ್​ಗಳನ್ನು ಕನಿಷ್ಠ ದಾಖಲೆಗಳನ್ನು ಆಧರಿಸಿ ಆದಷ್ಟು ತ್ವರಿತವಾಗಿ ಇತ್ಯರ್ಥ ಪಡಿಸುವಂತೆ ಐಆರ್​ಡಿಎಐ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ.

IRDAI instructs insurers to quickly settle Odisha train accident claims
IRDAI instructs insurers to quickly settle Odisha train accident claims

ಚೆನ್ನೈ : ಜೂನ್ 2 ರಂದು ಸಂಭವಿಸಿದ ಒಡಿಶಾ ರೈಲು ಅಪಘಾತ ಸಂತ್ರಸ್ತರ ವಿಮಾ ಕ್ಲೈಮ್‌ಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ. ಜೂನ್ 2 ರ ಒಡಿಶಾ ರೈಲು ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದು, ಸುಮಾರು 1,000 ಜನ ಗಾಯಗೊಂಡಿದ್ದಾರೆ.

"ರೈಲು ಅಪಘಾತದ ಸಂತ್ರಸ್ತರಿಗೆ ಕನಿಷ್ಠ ದಾಖಲೆಗಳನ್ನು ಆಧರಿಸಿ ಅಥವಾ ಪರ್ಯಾಯ ದಾಖಲೆಗಳನ್ನು ಆಧರಿಸಿ ಜೀವ ಮತ್ತು ಅಪಘಾತ ವಿಮೆಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಐಆರ್​ಡಿಎಐ ಸೂಚನೆ ಕಳುಹಿಸಿದೆ" ಎಂದು ಐಆರ್​ಡಿಎಐ ಅಧ್ಯಕ್ಷ ದೇಬಾಶಿಶ್ ಪಾಂಡಾ ಮಾಧ್ಯಮಗಳಿಗೆ ತಿಳಿಸಿದರು. ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್‌ನ (IRCTC) ಆನ್‌ಲೈನ್ ಪೋರ್ಟಲ್‌ನಲ್ಲಿ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿದ ಪ್ರಯಾಣಿಕರಿಗೆ ವಿಮೆ ನೀಡುವಲ್ಲಿ ಎರಡು ಖಾಸಗಿ ಜೀವೇತರ ವಿಮಾದಾರ ಕಂಪನಿಗಳು ನೇರವಾಗಿ ತೊಡಗಿಸಿಕೊಂಡಿವೆ.

ದೃಢೀಕರಿಸಿದ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಮತ್ತು ಟಿಕೆಟ್​ ಕಾಯ್ದಿರಿಸುವಾಗ 0.35 ಪೈಸೆಯ ಅತ್ಯಲ್ಪ ಮೊತ್ತವನ್ನು ಪಾವತಿಸಿದವರಿಗೆ 10 ಲಕ್ಷ ರೂಪಾಯಿಗಳ ಮರಣ/ ಶಾಶ್ವತ ಅಂಗವೈಕಲ್ಯ ವಿಮಾ ರಕ್ಷಣೆಯನ್ನು ಒದಗಿಸಲಾಗಿದೆ. ಶಾಶ್ವತ ಭಾಗಶಃ ಅಂಗವೈಕಲ್ಯ ಉಂಟಾಗಿರುವ ಸಂದರ್ಭದಲ್ಲಿ ರೂ 7,50,000 ವಿಮಾ ಮೊತ್ತ ಮತ್ತು ರೂ 2 ಲಕ್ಷದವರೆಗಿನ ವೈದ್ಯಕೀಯ ವೆಚ್ಚಗಳನ್ನು ಸಹ ಕ್ಲೈಮ್ ಮಾಡಬಹುದಾಗಿದೆ.

ಎಸ್​ಬಿಐ ಜನರಲ್ ಇನ್ಶೂರೆನ್ಸ್ ಮತ್ತು ಲಿಬರ್ಟಿ ಜನರಲ್ ಇನ್ಶುರೆನ್ಸ್ ಕಂಪನಿಗಳು ಐಆರ್​ಸಿಟಿಸಿ ಪೋರ್ಟಲ್​ನಲ್ಲಿ ಟಿಕೆಟ್​ ಖರೀದಿಸಿದವರಿಗೆ ವಿಮಾ ರಕ್ಷಣೆ ನೀಡುತ್ತವೆ. ಮರಣದ ಕ್ಲೈಮ್ ಪ್ರಕರಣದಲ್ಲಿ ನಾಮಿನಿ ಅಥವಾ ಕಾನೂನಾತ್ಮಕ ಉತ್ತರಾಧಿಕಾರಿಯು ರೈಲಿನ ಅಪಘಾತ ದೃಢೀಕರಿಸುವ ರೈಲ್ವೆ ಪ್ರಾಧಿಕಾರದ ವರದಿ ಸಲ್ಲಿಸಬೇಕಾಗುತ್ತದೆ. NEFT ವಿವರಗಳು, ಕ್ಯಾನ್ಸಲ್ ಮಾಡಲಾದ ಚೆಕ್, ನಾಮಿನಿಯ ಫೋಟೋ ಗುರುತಿನ ಪುರಾವೆ, ಹಕ್ಕು ಪತ್ರದ ಜೊತೆಗೆ ಕಾನೂನುಬದ್ಧ ಉತ್ತರಾಧಿಕಾರಿ ಪ್ರಮಾಣಪತ್ರ ಹಾಗೂ ಮರಣ ಪ್ರಮಾಣಪತ್ರಗಳನ್ನು ಕ್ಲೈಮ್ ಮಾಡುವಾಗ ಸಲ್ಲಿಸಬೇಕಾಗುತ್ತದೆ.

ವ್ಯಕ್ತಿಯೊಬ್ಬರು ರೈಲ್ವೆ ಪ್ರಾಧಿಕಾರದಿಂದ ಎರಡು ವರದಿಗಳನ್ನು ಹೇಗೆ ಪಡೆಯಬಹುದು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಉದ್ಭವಿಸುತ್ತದೆ. ಪಾಲಿಸಿ ಷರತ್ತಿನ ಪ್ರಕಾರ, ಅಪಘಾತದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ಕ್ಲೈಮ್ ಸಲ್ಲಿಸಬೇಕು. ಐಆರ್​ಸಿಟಿಸಿ ಪೋರ್ಟಲ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿರುವುದರಿಂದ ಐಆರ್​ಸಿಟಿಸಿ ಮತ್ತು ವಿಮಾ ವಿಮಾ ಕಂಪನಿ ಎರಡೂ ಪ್ರಯಾಣಿಕರ ವಿವರಗಳನ್ನು ಹೊಂದಿರುತ್ತವೆ. ಸಂಬಂಧಪಟ್ಟ ರೈಲ್ವೆ ಪ್ರಾಧಿಕಾರವು ಐಆರ್​ಸಿಟಿಗೆ ವರದಿಗಳನ್ನು ನೀಡಬಹುದು ಮತ್ತು ಎರಡೂ ವಿಮಾದಾರರು ಹಕ್ಕುದಾರರಿಂದ ಇತರ ದಾಖಲೆಗಳ ಸ್ವೀಕೃತಿಯ ಮೇಲೆ ಕ್ಲೈಮ್ ಇತ್ಯರ್ಥಪಡಿಸಬಹುದು ಎಂದು ವಿಮಾ ಉದ್ಯಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರು ಅಥವಾ ಗಾಯಾಳುಗಳು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (2 ಲಕ್ಷ ರೂ.ಗಳಿಗೆ ಜೀವ ವಿಮೆ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು (ರೂ. 2 ಲಕ್ಷಕ್ಕೆ ಅಪಘಾತ ವಿಮೆ) ಆಯ್ಕೆ ಮಾಡಿಕೊಂಡಿದ್ದಾರಾ ಎಂಬುದನ್ನು ಸಹ ಅವರ ಸಂಬಂಧಿಕರು ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ಇಂತಹ ವಿಮೆ ಪಡೆದಿದ್ದರೆ ಅವರ ಬ್ಯಾಂಕ್ ಅಕೌಂಟ್​ನಿಂದ ಅದರ ಪ್ರೀಮಿಯಂ ಮೊತ್ತ ಕಡಿತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಂತರ ಕ್ಲೈಮ್​​ಗೆ ಅರ್ಜಿ ಸಲ್ಲಿಸಬಹುದು.

ರೈಲು ಅಪಘಾತಕ್ಕೀಡಾದವರ ವಿಮಾ ರಕ್ಷಣೆಯ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಮತ್ತು ಲೈಫ್ ಇನ್ಶುರೆನ್ಸ್ ಕೌನ್ಸಿಲ್‌ಗೆ ಕೇಳಿದೆ ಎಂದು ತಿಳಿದು ಬಂದಿದೆ. ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಧ್ಯಕ್ಷರು ರೈಲು ಅಪಘಾತ ಸಂತ್ರಸ್ತರ ನಾಮಿನಿ/ಕಾನೂನು ವಾರಸುದಾರರು ಸಲ್ಲಿಸುವ ದಾಖಲೆಗಳಲ್ಲಿ ಸಡಿಲಿಕೆ ಘೋಷಿಸಿದ್ದಾರೆ. ಆದರೆ, ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಮತ್ತು ಲಿಬರ್ಟಿ ಜನರಲ್ ಇನ್ಶುರೆನ್ಸ್‌ನಿಂದ ಈವರೆಗೂ ಅಂತಹ ಯಾವುದೇ ಸಾರ್ವಜನಿಕ ಪ್ರಕಟಣೆಗಳನ್ನು ಮಾಡಲಾಗಿಲ್ಲ.

ಲಿಬರ್ಟಿ ಜನರಲ್ ಇನ್ಶುರೆನ್ಸ್ ತನ್ನ ವೆಬ್‌ಸೈಟ್‌ನಲ್ಲಿ ಕ್ಲೈಮ್ ಅನ್ನು ವರದಿ ಮಾಡಲು ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀಡಿದ್ದರೂ, ಅಂತಹ ಯಾವುದೇ ಮಾಹಿತಿಯು ಎಸ್‌ಬಿಐ ಜನರಲ್ ಇನ್ಶುರೆನ್ಸ್ ಅಥವಾ ಐಆರ್‌ಸಿಟಿಸಿಯ ವೆಬ್‌ಸೈಟ್‌ನ ಮುಖಪುಟದಲ್ಲಿ ಲಭ್ಯವಿಲ್ಲ. ಅದೇ ರೀತಿ, LIC ಯಂಥ ಯಾವುದೇ ಪ್ರಕಟಣೆಗಳು ಖಾಸಗಿ ಜೀವ ವಿಮಾದಾರರಿಂದ ಬಂದಿಲ್ಲ.

ಇದನ್ನೂ ಓದಿ : ಭಾರತ, ಸಿಂಗಾಪುರದಲ್ಲಿ ಸ್ಟಾರ್ಟಪ್ ಫಂಡಿಂಗ್ ಇಳಿಕೆ..! ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.