ETV Bharat / bharat

ಜಿ20 ಶೃಂಗಸಭೆ: 'ವಿಶ್ವವೇ ನಮ್ಮ ಕುಟುಂಬ' - ಜಗತ್ತಿಗೆ ಪ್ರಧಾನಿ ಮೋದಿ ಸಂದೇಶ

author img

By ETV Bharat Karnataka Team

Published : Sep 7, 2023, 1:33 PM IST

ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ 'ವಸುಧೈವ ಕುಟುಂಬಕಂ' ಸಂದೇಶ ನೀಡಿದ್ದಾರೆ.

ಜಿ20 ಶೃಂಗಸಭೆ: 'ವಿಶ್ವವೇ ನಮ್ಮ ಕುಟುಂಬ' - ಜಗತ್ತಿಗೆ ಪ್ರಧಾನಿ ಮೋದಿ ಸಂದೇಶ
world-is-our-family-pm-modis-message-at-g20-summit

(ಇದೇ ಸೆಪ್ಟೆಂಬರ್ 9 ರಿಂದ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವಕ್ಕೆ ಭಾರತದ ವಸುಧೈವ ಕುಟುಂಬಕಂ ಸಂಸ್ಕೃತಿಯ ಸಂದೇಶವನ್ನು ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಸ್ವತಃ ಸುದೀರ್ಘವಾದ ಲೇಖನವೊಂದನ್ನು ಬರೆದಿದ್ದು, ಕನ್ನಡದಲ್ಲಿ ಅದರ ಯಥಾವತ್ ಪ್ರತಿ ಇಲ್ಲಿದೆ.)

'ವಸುಧೈವ ಕುಟುಂಬಕಂ' - ಈ ಎರಡು ಪದಗಳು ತತ್ವಶಾಸ್ತ್ರದ ಆಳವಾದ ಅರ್ಥವನ್ನು ಹೊಂದಿವೆ. ಇದರರ್ಥ 'ಇಡೀ ಜಗತ್ತೇ ಒಂದು ಕುಟುಂಬ' ಎಂದು. ವಸುಧೈವ ಕುಟುಂಬಕಂ ಎಂಬುದು ಸರ್ವವ್ಯಾಪಿ ದೃಷ್ಟಿಕೋನವಾಗಿದ್ದು, ಇದು ಗಡಿ, ಭಾಷೆಗಳು ಮತ್ತು ಸಿದ್ಧಾಂತಗಳನ್ನು ಮೀರಿ ಒಂದು ವಿಶ್ವ ಕುಟುಂಬವಾಗಿ ಪ್ರಗತಿ ಸಾಧಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ, ಇದು ಮಾನವ ಕೇಂದ್ರಿತ ಪ್ರಗತಿಯ ಕರೆಯಾಗಿ ಮಾರ್ಪಟ್ಟಿದೆ. ಒಂದು ಕುಟುಂಬವಾಗಿ ನಮ್ಮ ಮನೆಯನ್ನು ಪೋಷಿಸಲು ನಾವೆಲ್ಲರೂ ಒಗ್ಗೂಡುತ್ತಿದ್ದೇವೆ. ಒಂದು ಕುಟುಂಬವಾಗಿ, ಬೆಳವಣಿಗೆಯ ಅನ್ವೇಷಣೆಯಲ್ಲಿ ನಾವು ಪರಸ್ಪರ ಬೆಂಬಲಿಸುತ್ತೇವೆ. ಒಂದು ಭವಿಷ್ಯ- ಅಂದರೆ ಎಲ್ಲರ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಸಾಗುತ್ತೇವೆ. ಪರಸ್ಪರ ಬೆಸೆದ ಜಗತ್ತಿನಲ್ಲಿ ಇಂದು ಇದು ನಿರಾಕರಿಸಲಾಗದ ಸತ್ಯವಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದ ನಂತರದ ವಿಶ್ವದ ಜೀವನ ಕ್ರಮವು ಅದರ ಹಿಂದಿನ ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಕೊರೊನಾ ನಂತರ ಜಗತ್ತಿನಲ್ಲಿ ಹಲವಾರು ಬದಲಾವಣೆಗಳು ಕಂಡು ಬಂದಿದ್ದು, ಅವುಗಳಲ್ಲಿ ಮೂರು ಪ್ರಮುಖ ಬದಲಾವಣೆಗಳು ಮಹತ್ವ ಪಡೆದಿವೆ.

ಮೊದಲನೆಯದಾಗಿ, ವಿಶ್ವದ ಜಿಡಿಪಿ ಕೇಂದ್ರಿತ ದೃಷ್ಟಿಕೋನವು ಈಗ ಮಾನವ ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾಗುವುದು ಅಗತ್ಯವಿದೆ ಎಂಬ ಅರಿವು ಹೆಚ್ಚುತ್ತಿದೆ.

ಎರಡನೆಯದಾಗಿ, ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸಾರ್ಹತೆಯ ಮಹತ್ವವನ್ನು ಜಗತ್ತು ಗುರುತಿಸುತ್ತಿದೆ.

ಮೂರನೆಯದಾಗಿ, ಜಾಗತಿಕ ಸಂಘಟನೆಗಳ ಸುಧಾರಣೆಯ ಮೂಲಕ ಬಹುಪಕ್ಷೀಯತೆಯನ್ನು ಹೆಚ್ಚಿಸುವುದು ಎಲ್ಲರ ಬಯಕೆಯಾಗಿದೆ.

ಭಾರತದ ಜಿ 20 ಅಧ್ಯಕ್ಷತೆಯು ಈ ಎಲ್ಲ ಬದಲಾವಣೆಗಳನ್ನು ವೇಗವರ್ಧಕಗೊಳಿಸುವ ಪಾತ್ರ ವಹಿಸುತ್ತಿದೆ.

ಡಿಸೆಂಬರ್ 2022 ರಲ್ಲಿ, ನಾವು ಇಂಡೋನೇಷ್ಯಾದಿಂದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಾಗ, ಜಿ 20 ಯು ಮನಸ್ಥಿತಿಯ ಬದಲಾವಣೆಯನ್ನು ವೇಗವರ್ಧಿಸಬೇಕು ಎಂದು ನಾನು ಬರೆದಿದ್ದೆ. ಅಭಿವೃದ್ಧಿಶೀಲ ರಾಷ್ಟ್ರಗಳು, ಜಾಗತಿಕ ದಕ್ಷಿಣ ಭಾಗದ ದೇಶಗಳ ಮತ್ತು ಆಫ್ರಿಕಾದ ಅಂಚಿನಲ್ಲಿರುವವರ ಆಕಾಂಕ್ಷೆಗಳನ್ನು ಮುಖ್ಯವಾಹಿನಿಗೆ ತರುವ ಸಂದರ್ಭದಲ್ಲಿ ಇದು ವಿಶೇಷವಾಗಿ ಅಗತ್ಯವಾಗಿತ್ತು.

125 ದೇಶಗಳು ಭಾಗವಹಿಸಿದ್ದ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯು ನಮ್ಮ ಅಧ್ಯಕ್ಷತೆಯ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಜಾಗತಿಕ ದಕ್ಷಿಣದಿಂದ ಒಳಹರಿವು ಮತ್ತು ಆಲೋಚನೆಗಳನ್ನು ಸಂಗ್ರಹಿಸಲು ಇದು ಒಂದು ಪ್ರಮುಖ ಕಾರ್ಯಕ್ರಮವಾಗಿತ್ತು. ಇದಲ್ಲದೆ, ನಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕನ್ ದೇಶಗಳು ಅತ್ಯಧಿಕವಾಗಿ ಭಾಗವಹಿಸಿವೆ ಮಾತ್ರವಲ್ಲದೆ, ಆಫ್ರಿಕನ್ ಒಕ್ಕೂಟವನ್ನು ಜಿ 20 ಯ ಖಾಯಂ ಸದಸ್ಯರಾಗಿ ಸೇರಿಸಲು ಒತ್ತಾಯಿಸಲಾಗಿದೆ.

ವಿವಿಧ ವಲಯಗಳಲ್ಲಿನ ಸವಾಲುಗಳು ಪರಸ್ಪರ ಸಂಬಂಧ ಹೊಂದಿರುವುದರಿಂದ ಇದು ಅಂತರ್​ ಸಂಪರ್ಕಿತ ವಿಶ್ವವಾಗಿದೆ. ಇದು 2030 ರ ಕಾರ್ಯಸೂಚಿಯ ಮಧ್ಯದ ವರ್ಷವಾಗಿದೆ ಮತ್ತು ಎಸ್​ಡಿಜಿಗಳ ಪ್ರಗತಿಯು ಸರಿಯಾದ ಹಾದಿಯಲ್ಲಿಲ್ಲ ಎಂದು ಅನೇಕರು ಬಹಳ ಕಾಳಜಿಯಿಂದ ಗಮನಿಸುತ್ತಿದ್ದಾರೆ. ಎಸ್​ಡಿಜಿಗಳ ಪ್ರಗತಿಯನ್ನು ವೇಗಗೊಳಿಸುವ ಜಿ20- 2023 ಕ್ರಿಯಾ ಯೋಜನೆಯು ಈ ನಿಟ್ಟಿನಲ್ಲಿ ಜಿ 20 ಯ ಭವಿಷ್ಯದ ದಿಕ್ಕನ್ನು ಮುನ್ನಡೆಸುತ್ತದೆ.

ಭಾರತದಲ್ಲಿ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಪ್ರಾಚೀನ ಕಾಲದಿಂದಲೂ ರೂಢಿಯಾಗಿದೆ ಮತ್ತು ಆಧುನಿಕ ಸಮಯದಲ್ಲೂ ಹವಾಮಾನ ಬದಲಾವಣೆ ತಡೆಗೆ ನಾವು ನಮ್ಮ ಪಾಲನ್ನು ನೀಡುತ್ತಿದ್ದೇವೆ.

ಜಗತ್ತಿನ ದಕ್ಷಿಣ ಭಾಗದ ಅನೇಕ ದೇಶಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಮತ್ತು ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ಕ್ರಮಗಳು ಇದಕ್ಕೆ ಪೂರಕ ಅನ್ವೇಷಣೆಯಾಗಿರಬೇಕು. ಹವಾಮಾನ ಬದಲಾವಣೆ ಕ್ರಿಯೆಯ ಮಹತ್ವಾಕಾಂಕ್ಷೆಗಳನ್ನು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನದ ವರ್ಗಾವಣೆಯ ಕ್ರಮಗಳೊಂದಿಗೆ ಹೊಂದಿಸಬೇಕು.

ಏನು ಮಾಡಬಾರದು ಎಂಬ ನಿರ್ಬಂಧಿತ ಮನೋಭಾವದಿಂದ ದೂರ ಸರಿದು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಏನು ಮಾಡಬಹುದು ಎಂಬುದರ ಮೇಲೆ ಗಮನ ಕೇಂದ್ರೀಕರಿಸುವ ಹೆಚ್ಚು ರಚನಾತ್ಮಕ ಮನೋಭಾವಕ್ಕೆ ಸಾಗುವ ಅಗತ್ಯವಿದೆ ಎಂದು ನಾವು ನಂಬುತ್ತೇವೆ.

ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಕಡಲ ಆರ್ಥಿಕತೆಗಾಗಿ ಚೆನ್ನೈ ಎಚ್ಎಲ್​ಪಿಗಳು ನಮ್ಮ ಸಾಗರಗಳನ್ನು ಆರೋಗ್ಯಕರವಾಗಿಡುವತ್ತ ಪೂರಕವಾಗಿವೆ.

ಹಸಿರು ಹೈಡ್ರೋಜನ್ ಇನ್ನೋವೇಶನ್ ಸೆಂಟರ್ ಜೊತೆಗೆ ಶುದ್ಧ ಮತ್ತು ಹಸಿರು ಜಲಜನಕಕ್ಕಾಗಿ ಜಾಗತಿಕ ಪರಿಸರ ವ್ಯವಸ್ಥೆ ನಮ್ಮ ಅಧ್ಯಕ್ಷತೆಯ ಸಮಯದಲ್ಲಿ ಸಾಕಾರವಾಗಿದೆ.

2015ರಲ್ಲಿ ನಾವು ಅಂತಾರಾಷ್ಟ್ರೀಯ ಸೌರ ಮೈತ್ರಿಯನ್ನು ಆರಂಭಿಸಿದ್ದೇವೆ. ಈಗ, ಜಾಗತಿಕ ಜೈವಿಕ ಇಂಧನ ಒಕ್ಕೂಟದ ಮೂಲಕ ಸಂಪರ್ಕಿತ ಆರ್ಥಿಕತೆಯ ಪ್ರಯೋಜನಗಳಿಗೆ ಅನುಗುಣವಾಗಿ ಇಂಧನ ಪರಿವರ್ತನೆಯನ್ನು ಸಕ್ರಿಯಗೊಳಿಸಲು ನಾವು ಜಗತ್ತನ್ನು ಬೆಂಬಲಿಸುತ್ತೇವೆ.

ಹವಾಮಾನ ಬದಲಾವಣೆ ತಡೆ ಕ್ರಿಯೆಯನ್ನು ಪ್ರಜಾಸತ್ತಾತ್ಮಕಗೊಳಿಸುವುದು ಆ ಅಭಿಯಾನಕ್ಕೆ ಆವೇಗ ನೀಡುವ ಅತ್ಯುತ್ತಮ ಮಾರ್ಗವಾಗಿದೆ. ವ್ಯಕ್ತಿಗಳು ತಮ್ಮ ದೀರ್ಘಕಾಲೀನ ಆರೋಗ್ಯದ ಆಧಾರದ ಮೇಲೆ ದೈನಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿಯಲ್ಲಿಯೇ ಅವರು ಭೂಮಿಯ ದೀರ್ಘಕಾಲೀನ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಆಧರಿಸಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಯೋಗವು ಜಾಗತಿಕ ಸ್ವಾಸ್ಥ್ಯದ ಜನಾಂದೋಲನವಾಗಿ ಮಾರ್ಪಟ್ಟಂತೆ, ನಾವು ಸುಸ್ಥಿರ ಪರಿಸರಕ್ಕಾಗಿ ಪೂರಕವಾದ ಜೀವನಶೈಲಿ (ಎಲ್ಐಎಫ್ಇ) ಯೊಂದಿಗೆ ಜಗತ್ತನ್ನು ಪ್ರೇರೇಪಿಸಿದ್ದೇವೆ.

ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ, ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಎಂದಿಗಿಂತಲೂ ಇಂದು ಮಹತ್ವದ್ದಾಗಿದೆ. ಸಿರಿಧಾನ್ಯಗಳು ಅಥವಾ ಶ್ರೀ ಅನ್ನ ಇದಕ್ಕೆ ಸಹಾಯ ಮಾಡುತ್ತವೆ ಮತ್ತು ಇವು ಹವಾಮಾನ-ಸ್ಮಾರ್ಟ್ ಕೃಷಿಗೆ ಪೂರಕವಾಗಿವೆ. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದಲ್ಲಿ ನಾವು ಸಿರಿಧಾನ್ಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದೇವೆ. ಆಹಾರ ಭದ್ರತೆ ಮತ್ತು ಪೋಷಣೆ ಕುರಿತ ದಖನ್ ಉನ್ನತ ಮಟ್ಟದ ತತ್ವಗಳು ಸಹ ಈ ದಿಕ್ಕಿನಲ್ಲಿ ಸಹಾಯಕವಾಗಿವೆ.

ತಂತ್ರಜ್ಞಾನವು ಪರಿವರ್ತಕವಾಗಿದೆ ಆದರೆ ಅದನ್ನು ಅಂತರ್ಗತಗೊಳಿಸಬೇಕಾಗಿದೆ. ಈ ಹಿಂದೆ, ತಾಂತ್ರಿಕ ಪ್ರಗತಿಯ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನವಾಗಿ ಪ್ರಯೋಜನವನ್ನು ನೀಡಿಲ್ಲ. ಅಸಮಾನತೆಗಳನ್ನು ವಿಸ್ತರಿಸುವ ಬದಲು ಅವುಗಳನ್ನು ಕಡಿಮೆಗೊಳಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಭಾರತವು ಕಳೆದ ಕೆಲವು ವರ್ಷಗಳಿಂದ ತೋರಿಸಿದೆ.

ಉದಾಹರಣೆಗೆ, ಡಿಜಿಟಲ್ ಗುರುತಿನ ಚೀಟಿಗಳಿಲ್ಲದ ಅಥವಾ ಡಿಜಿಟಲ್ ಐಡೆಂಟಿಟಿ ಇಲ್ಲದ ವಿಶ್ವದ ಶತಕೋಟಿ ಜನರನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ)ಗಳ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲಾಗಿದೆ. ನಮ್ಮ ಡಿಪಿಐ ಬಳಸಿ ನಾವು ನಿರ್ಮಿಸಿದ ವ್ಯವಸ್ಥೆಗಳು ಈಗ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಈಗ, ಜಿ 20 ಮೂಲಕ ಅಂತರ್ಗತ ಬೆಳವಣಿಗೆಯ ಶಕ್ತಿಯನ್ನು ಅನ್ಲಾಕ್ ಮಾಡಲು ಅಭಿವೃದ್ಧಿಶೀಲ ದೇಶಗಳಿಗೆ ಡಿಪಿಐ ಅನ್ನು ಅಳವಡಿಸಿಕೊಳ್ಳಲು, ನಿರ್ಮಿಸಲು ನಾವು ಸಹಾಯ ಮಾಡುತ್ತೇವೆ.

ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿರುವುದು ಆಕಸ್ಮಿಕವಾಗಿ ಉಂಟಾದ ಬೆಳವಣಿಗೆಯಲ್ಲ. ನಮ್ಮ ಸರಳ, ಸ್ಕೇಲೆಬಲ್ ಮತ್ತು ಸುಸ್ಥಿರ ಪರಿಹಾರಗಳು ನಮ್ಮ ಅಭಿವೃದ್ಧಿಯ ಮಾರ್ಗವನ್ನು ಮುನ್ನಡೆಸಲು ದುರ್ಬಲರು ಮತ್ತು ಸಮಾಜದ ಕಟ್ಟ ಕಡೆಯವರನ್ನು ಸಶಕ್ತಗೊಳಿಸಿವೆ. ಬಾಹ್ಯಾಕಾಶದಿಂದ ಕ್ರೀಡೆಯವರೆಗೆ, ಆರ್ಥಿಕತೆಯಿಂದ ಉದ್ಯಮಶೀಲತೆಯವರೆಗೆ ಭಾರತೀಯ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅವರು ಈಗ ಮಹಿಳಾ ಸಬಲೀಕರಣವನ್ನು ಮಹಿಳೆಯರ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಬದಲಾಯಿಸಿದ್ದಾರೆ.

ಭಾರತದ ಪಾಲಿಗೆ ಜಿ 20 ಅಧ್ಯಕ್ಷ ಸ್ಥಾನವು ಕೇವಲ ಉನ್ನತ ಮಟ್ಟದ ರಾಜತಾಂತ್ರಿಕ ಹುದ್ದೆಯಲ್ಲ. ಪ್ರಜಾಪ್ರಭುತ್ವದ ತಾಯಿಯಾಗಿ ಮತ್ತು ವೈವಿಧ್ಯತೆಯ ಮಾದರಿಯಾಗಿ, ನಾವು ಈ ಅನುಭವದ ಬಾಗಿಲುಗಳನ್ನು ಜಗತ್ತಿಗೆ ತೋರಿಸುತ್ತಿದ್ದೇವೆ.

ಇಂದು, ದೊಡ್ಡ ಪ್ರಮಾಣದಲ್ಲಿ ವಿಷಯಗಳನ್ನು ಸಾಧಿಸುವುದು ಭಾರತದ ಲಕ್ಷಣವಾಗಿದೆ. ಜಿ 20 ಅಧ್ಯಕ್ಷ ಸ್ಥಾನವೂ ಇದಕ್ಕೆ ಹೊರತಾಗಿಲ್ಲ. ಇದು ಜನಾಂದೋಲನವಾಗಿ ಮಾರ್ಪಟ್ಟಿದೆ. ನಮ್ಮ ದೇಶದ ಉದ್ದಗಲಕ್ಕೂ 60 ಭಾರತೀಯ ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗುವುದು. ನಮ್ಮ ಅವಧಿಯ ಅಂತ್ಯದ ವೇಳೆಗೆ 125 ದೇಶಗಳ ಸುಮಾರು 1,00,000 ಪ್ರತಿನಿಧಿಗಳಿಗೆ ಆತಿಥ್ಯ ನೀಡಲಾಗುವುದು. ಬೇರೆ ಯಾವುದೇ ದೇಶದ ಅಧ್ಯಕ್ಷತೆಯು ಇಷ್ಟು ವಿಶಾಲವಾದ ಮತ್ತು ವೈವಿಧ್ಯಮಯ ಭೌಗೋಳಿಕ ವಿಸ್ತಾರವನ್ನು ಎಂದಿಗೂ ಒಳಗೊಂಡಿರಲಿಲ್ಲ.

ಭಾರತದ ಜನಸಂಖ್ಯೆ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಅಭಿವೃದ್ಧಿಯ ಬಗ್ಗೆ ಬೇರೊಬ್ಬರಿಂದ ಕೇಳುವುದು ಒಂದು ರೀತಿಯಾದರೆ, ಅವುಗಳನ್ನು ನೇರವಾಗಿ ಅನುಭವಿಸುವುದು ಸಂಪೂರ್ಣವಾಗಿ ವಿಭಿನ್ನವಾಗಿದೆ. ನಮ್ಮ ಜಿ 20 ಪ್ರತಿನಿಧಿಗಳಿಗೆ ಇದು ಮನವರಿಕೆಯಾಗಲಿದೆ ಎಂದು ನನಗೆ ಖಾತ್ರಿಯಿದೆ.

ನಮ್ಮ ಜಿ 20 ಅಧ್ಯಕ್ಷತೆಯು ವಿಭಜನೆಗಳನ್ನು ನಿವಾರಿಸಲು, ಅಡೆತಡೆಗಳನ್ನು ನಿವಾರಿಸಲು ಮತ್ತು ಸಹಯೋಗದ ಬೀಜಗಳನ್ನು ಬಿತ್ತಲು ಶ್ರಮಿಸಲಿದೆ. ನಾವು ಭಿನ್ನಾಭಿಪ್ರಾಯದ ಮೇಲೆ ಏಕತೆಯು ಮೇಲುಗೈ ಸಾಧಿಸುವ ಜಗತ್ತನ್ನು ನಾವು ಬೆಂಬಲಿಸುತ್ತೇವೆ. ಇದರಲ್ಲಿ ಸಹಬಾಳ್ವೆಯು ಪ್ರತ್ಯೇಕತೆಯನ್ನು ನಿವಾರಿಸುತ್ತದೆ. ಜಿ 20 ಅಧ್ಯಕ್ಷರಾಗಿ, ನಾವು ಜಾಗತಿಕ ವೇದಿಕೆಯನ್ನು ವಿಸ್ತರಿಸಲು ಪ್ರತಿಜ್ಞೆ ಮಾಡಿದ್ದೇವೆ. ಪ್ರತಿಯೊಂದು ಧ್ವನಿಯನ್ನು ಆಲಿಸಲಾಗುತ್ತದೆ ಮತ್ತು ಪ್ರತಿ ದೇಶವು ತನ್ನ ಕೊಡುಗೆ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದೇವೆ. ನಮ್ಮ ಕ್ರಿಯೆಗಳು ಮತ್ತು ಫಲಿತಾಂಶಗಳು ನಮ್ಮ ಪ್ರತಿಜ್ಞೆಯನ್ನು ಪೂರ್ಣಗೊಳಿಸುತ್ತಿವೆ ಎಂಬ ಸಮಾಧಾನದ ಭಾವನೆ ನನ್ನದಾಗಿದೆ.

ಇದನ್ನೂ ಓದಿ : ಜಿ20 ಶೃಂಗಸಭೆ: ವಿದೇಶಿ ಪ್ರತಿನಿಧಿಗಳ ರಕ್ಷಣೆಗಾಗಿ ಶಕ್ತಿಯುತ ವಿಶೇಷ ಪಡೆಗಳ ನಿಯೋಜನೆ: ಭದ್ರತೆ ಹೇಗಿರುತ್ತೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.