ಹೈದರಾಬಾದ್: ಭಾರತೀಯ ಸ್ವಾತಂತ್ರ್ಯ ಮಹಾಸಂಗ್ರಾಮದ ಸಮಯದಲ್ಲಿ ಮಲಬಾರ್ ದಂಗೆ ಶುರುವಾಗಿತ್ತು. ಬ್ರಿಟಿಷರು ಮತ್ತು ಭೂಮಾಲೀಕರ ವಿರುದ್ಧ ಉತ್ತರ ಕೇರಳದ ಮಾಪಿಲ್ಲ ಮುಸ್ಲಿಮರು ನಡೆಸುತ್ತಿದ್ದ ಪ್ರತಿಭಟನೆಯೇ ಈ ಮಲಬಾರ್ ದಂಗೆ. ಕಾಲಾನಂತರದಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ರಾಷ್ಟ್ರೀಯ ನಾಯಕರು ಈ ಹೋರಾಟವನ್ನು ಅಸಹಕಾರ ಚಳವಳಿಯಲ್ಲಿ ವಿಲೀನಗೊಳಿಸ್ತಾರೆ.
1921ರ ನವೆಂಬರ್ 20ರಂದು ಕೇರಳದ ವಿವಿಧ ಭಾಗಗಳಲ್ಲಿ ಭೂಮಾಲೀಕರು ಮತ್ತು ಬ್ರಿಟಿಷರ ವಿರುದ್ಧದ ಆಂದೋಲನದಲ್ಲಿ ಸೆರೆಸಿಕ್ಕವರನ್ನು ಕೇರಳದಿಂದ ಹೊರಭಾಗಕ್ಕೆ ಸ್ಥಳಾಂತರಿಸಲಾಯಿತು. ಈ ಕೈದಿಗಳನ್ನು ಸಾಗಿಸಲು ಬ್ರಿಟಿಷರು ಅತ್ಯಂತ ಅಮಾನವೀಯವಾಗಿ ಮುಚ್ಚಿದ ರೈಲು ಬಂಡಿಗಳನ್ನು ಬಳಸ್ತಾರೆ. 100ಕ್ಕೂ ಹೆಚ್ಚು ಹೋರಾಟಗಾರರನ್ನು ಮುಚ್ಚಿದ ಸರಕು ವ್ಯಾಗನ್ನಲ್ಲಿ ತಿರೂರ್ ರೈಲು ನಿಲ್ದಾಣದಿಂದ (ಮಲಪ್ಪುರಂ) ಕರ್ನಾಟಕದ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.
ಗಾಳಿ, ಬೆಳಕಿಲ್ಲದ ಈ ವ್ಯಾಗನ್ನಲ್ಲಿದ್ದ ಖೈದಿಗಳು ಉಸಿರುಗಟ್ಟಿ ಕಿರುಚಲು ಆರಂಭಿಸ್ತಾರೆ. ರೈಲನ್ನು ಪಾಲಕ್ಕಾಡ್ ಜಿಲ್ಲೆಯ ಶೋರ್ನೂರು ಮತ್ತು ಒಲವಕ್ಕೋಡಿನಲ್ಲಿ ನಿಲ್ಲಿಸಿದ್ರೂ ಬ್ರಿಟಿಷ್ ಸೇನೆ ವ್ಯಾಗನ್ ತೆರೆಯಲು ನಿರಾಕರಿಸುತ್ತೆ. ಹೀಗೆ ಹಾದುಹೋಗುವ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಖೈದಿಗಳ ಕಿರುಚಾಟ ಪ್ರತಿಧ್ವನಿಸಿದ್ರೂ ಅಂತಿಮವಾಗಿ ತಮಿಳುನಾಡಿನ ಪೋತಣ್ಣೂರು ನಿಲ್ದಾಣದಲ್ಲಿ ರೈಲು ನಿಲ್ಲುತ್ತೆ.
ಇತಿಹಾಸಕಾರರು ವ್ಯಾಗನ್ ದುರಂತವನ್ನು ಜಲಿಯನ್ ವಾಲಾಬಾಗ್ನಂತಹ ಅತ್ಯಂತ ಅಮಾನವೀಯ ಹತ್ಯಾಕಾಂಡ ಎಂದು ಉಲ್ಲೇಖಿಸುತ್ತಾರೆ. 70ಕ್ಕೂ ಹೆಚ್ಚು ಪುರುಷರು ಜೋರಾಗಿ ಕಿರುಚುತ್ತಾ ಜೀವ ಉಳಿಸಿಕೊಳ್ಳಲು ಮೊರೆ ಇಡುತ್ತಿದ್ದರೂ ಅವರು ಹೋರಾಟ ನಿಲ್ಲಿಸಲಿಲ್ಲ.
ಈ ದುರಂತದಲ್ಲಿ ಬದುಕುಳಿದವರನ್ನು ಬ್ರಿಟಿಷ್ ಸೇನೆಯು ಆಸ್ಪತ್ರೆಗೆ ಸೇರಿಸಿ ನಂತರ ಜೈಲಿಗೆ ಸ್ಥಳಾಂತರಿಸುತ್ತೆ. ವ್ಯಾಗನ್ನ ಭಯಾನಕ ದೃಶ್ಯದಿಂದ ಅಂದು ಬ್ರಿಟಿಷ್ ಸೇನೆಯೂ ಕೂಡ ಆಘಾತಕ್ಕೊಳಗಾಗುತ್ತೆ. ಪೋತನ್ನೂರಿನಿಂದ ತಿರೂರಿಗೆ ಮೃತದೇಹಗಳನ್ನು ತುಂಬಿದ ವ್ಯಾಗನ್ ಅನ್ನು ಹಿಂದಿರುಗಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
100 ವರ್ಷಗಳ ಹಿಂದೆ ನಡೆದಿತ್ತು ಅತಿ ಕ್ರೂರ ಘಟನೆ
ಈ ವ್ಯಾಗನ್ ದುರಂತಕ್ಕೀಗ 100 ವರ್ಷಗಳು ಸಂದಿವೆ. ದೇಶದ ಇತಿಹಾಸ ಕಂಡ ಅತ್ಯಂತ ಕ್ರೂರ, ಭಯಾನಕ ಹತ್ಯಾಕಾಂಡದ ಕಹಿ ನೆನಪುಗಳು ಇನ್ನೂ ತಿರೂರನ್ನು ಕಾಡುತ್ತಿದೆ. ಪೋತನ್ನೂರಿನಿಂದ ವ್ಯಾಗನ್ನಲ್ಲಿ ಮರಳಿದ 44 ಜನರ ಶವಗಳನ್ನು ತಿರೂರು ಕೊರಂಗತ್ ಜುಮಾ ಮಸೀದಿಯಲ್ಲಿಯೂ, 11 ಮಂದಿಯನ್ನು ಕೋಟ್ ಜುಮಾ ಮಸೀದಿ ಖಬರಸ್ತಾನಗಳಲ್ಲಿ ಹೂಳಲಾಯಿತು.
ತಿರೂರು ರೈಲು ನಿಲ್ದಾಣದಿಂದ ಕೈದಿಗಳನ್ನು ವ್ಯಾಗನ್ನಲ್ಲಿ ತುಂಬಿಸುವಾಗ ನಾಲ್ವರು ಪೊಲೀಸರನ್ನೂ ವ್ಯಾಗನ್ನಲ್ಲಿ ತುಂಬಿಸಲಾಗಿತ್ತು ಅನ್ನೋದು ಮತ್ತೊಂದು ಅಚ್ಚರಿಯ ವಿಷಯ. ಅಂದಿನ ದುರಂತವನ್ನು ತಿರೂರು ಮಂದಿ ಇಂದಿಗೂ ನೆನಪಿಸಿಕೊಳ್ಳುವಾಗ ಗದ್ಗದಿತರಾಗುತ್ತಾರೆ.
ಉಸಿರುಗಟ್ಟಿ ಪ್ರಾಣಬಿಟ್ಟ ಅಮಾಯಕರು
ಈ ಕೈದಿಗಳಿದ್ದ ವ್ಯಾಗನರ್ ಕೊಯಮತ್ತೂರು ತಲುಪಿದಾಗ ಸ್ಟೇಷನ್ ಮಾಸ್ಟರ್ ಬಂಡಿಯ ಬಾಗಿಲು ತೆರೆಯುತ್ತಾರೆ. ಆ ಸಂದರ್ಭದಲ್ಲಿ ಅವರು ಕಂಡಿದ್ದು ಅತ್ಯಂತ ಕರುಣಾಜನಕ ದೃಶ್ಯ. ಈ ವೇಳೆ ಹೆಚ್ಚಿನ ಕೈದಿಗಳು ಉಸಿರುಗಟ್ಟಿ ಸಾವಿಗೀಡಾಗಿದ್ದರು. ಬದುಕುಳಿದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಉಳಿದ ಮೃತದೇಹಗಳನ್ನು ಅದೇ ಬಂಡಿಯಲ್ಲಿ ತಿರೂರಿಗೆ ವಾಪಸ್ ಕಳುಹಿಸಲಾಗಿತ್ತು.
ಮೃತದೇಹಗಳು ತಿರೂರಿಗೆ ಮರಳಿದಾಗ, ಅವುಗಳನ್ನು ಸ್ವೀಕರಿಸಲು ಅಲ್ಲಿ ಯಾರೂ ಇರಲಿಲ್ಲ. ಅಂತಿಮವಾಗಿ ಶವಗಳನ್ನು ಎಳನಾಡು ಮತ್ತು ಕೈಣಿಕ್ಕರ ಮಮ್ಮಿಹಾಜಿ ಕಮ್ಮುಕುಟ್ಟಿಯಕ್ಕ ವಹಿಸಿಕೊಂಡು ಸಮಾಧಿ ಮಾಡ್ತಾರೆ.
1981ರಲ್ಲಿ ಪ್ರಕಟವಾಗಿತ್ತು ವಿಶೇಷ ಲೇಖನ
ಈ ಭೀಕರ ದುರಂತದಲ್ಲಿ ಕೊನೊಲಿ ಅಹ್ಮದ್ ಹಾಜಿ ಬದುಕುಳಿದವರ ಬಗ್ಗೆ 1981 ರಲ್ಲಿ 'ವ್ಯಾಗನ್ ದುರಂತ' ಎಂಬ ಶೀರ್ಷಿಕೆಯಡಿ ವಿಶೇಷ ಲೇಖನ ಪ್ರಕಟಿಸಿದ್ದರು. ಈ ಲೇಖನದಲ್ಲಿ ಅವರು ಬದುಕಿದ ವ್ಯಕ್ತಿಯೊಬ್ಬರ ಅನುಭವವನ್ನು ಅತ್ಯಂತ ಮನಮುಟ್ಟುವಂತೆ ಬರೆಯುತ್ತಾರೆ. ಬ್ರಿಟಿಷ್ ಪಡೆಗಳು ಸೆರೆಹಿಡಿದ ಕೈದಿಗಳನ್ನು ತಿರೂರು ರೈಲ್ವೇ ನಿಲ್ದಾಣಕ್ಕೆ ಕರೆದೊಯ್ದಿದ್ದವು. ಅದರಲ್ಲಿ ಸುಮಾರು 600 ಕೈದಿಗಳಿದ್ದರು. ಸೈನ್ಯವು ಕೈದಿಗಳನ್ನು ಬಂಡಿಯೊಳಗೆ ಬಿಗಿಯಾಗಿ ತುಂಬಿತ್ತು. ದಿಂಬಿನೊಳಗೆ ಹತ್ತಿಯನ್ನು ತುಂಬುವ ಹಾಗೆ ಕೈದಿಗಳನ್ನು ಅದರೊಳಗೆ ತುಂಬಿಸಲಾಗಿತ್ತು.
ಜೀವ ಉಳಿಸಿಕೊಳ್ಳಲು ಕೈದಿಗಳಿಂದ ನರಳಾಟ
ಅನೇಕ ಕೈದಿಗಳು ಒಂದೇ ಕಾಲಿನ ಮೇಲೆ ನಿಂತಿದ್ದರು. ಸೈನ್ಯವು ಕೈದಿಗಳನ್ನು ಬಂದೂಕುಗಳಿಂದ ತಳ್ಳಿ ಬಾಗಿಲು ಮುಚ್ಚಿತ್ತು. ಬೆಳಕು ಮತ್ತು ಗಾಳಿ ಹಾದುಹೋಗದ ವ್ಯಾಗನ್ನಲ್ಲಿ ಉಸಿರುಗಟ್ಟಿರುವುದರಿಂದ ಕೈದಿಗಳು ಕಿರುಚಲು ಪ್ರಾರಂಭಿಸಿದ್ದರು. ಅವುಗಳಲ್ಲಿ ಹಲವರು ಬಾಯಾರಿಕೆಯಿಂದ ಮತಿಗೆಟ್ಟು ಕುಸಿದರು. ಅವರಲ್ಲಿ ಕೆಲವರು ತಿಳಿಯದೇ ಮಲವಿಸರ್ಜನೆ ಮಾಡಿದರು.
ಬಾಯಾರಿಕೆಯಿಂದ ಬಳಲಿದ ಅವರು ಬೆವರು ಮತ್ತು ಮೂತ್ರವನ್ನು ನೆಕ್ಕಲು ಪ್ರಯತ್ನಿಸಿ ವಿಫಲರಾದರು. ಉಸಿರಾಡಲು ಹತಾಶರಾಗಿ ಒಬ್ಬರಿಗೊಬ್ಬರು ಕಚ್ಚಲು ಮತ್ತು ಹೊಡೆಯಲು ಪ್ರಯತ್ನಿಸ್ತಾರೆ. ಸಾವಿನ ಸಂದರ್ಭದಲ್ಲಿ ಕೆಲವರು ಉಗುರಿನಿಂದ ರಂಧ್ರ ಕಂಡುಕೊಂಡರು. ಆ ರಂಧ್ರದಿಂದ ಅವರು ಒಂದರ ನಂತರ ಮತ್ತೊಬ್ಬರಂತೆ ಉಸಿರು ತೆಗೆದುಕೊಳ್ಳಲು ಪ್ರಯತ್ನಿಸ್ತಾರೆ.
ಸ್ವಲ್ಪ ಸಮಯದ ನಂತರ ನಾನು ಮೂರ್ಛೆ ಹೋದೆ. ನನಗೆ ಪ್ರಜ್ಞೆ ಬಂದಾಗ, ವ್ಯಾಗನ್ ಮಲ, ಮೂತ್ರ, ರಕ್ತ ಮತ್ತು ಮೃತದೇಹಗಳ ಬಿಟ್ಟರೆ ಅಲ್ಲಿ ಬೇರೇನೂ ಇರಲಿಲ್ಲ. ಯಾರೋ ಗಾಡಿಗೆ ತಣ್ಣೀರು ಸುರಿದರು. ನನ್ನ ದೇಹ ನಡುಗಲು ಆರಂಭಿಸಿತು. ಕೊಯಮತ್ತೂರಿನ ಆಸ್ಪತ್ರೆಗೆ ಕರೆದೊಯ್ದಾಗ ನಾನು ಜೀವಂತವಿದ್ದೇನೆ ಅನ್ನೋದನ್ನು ನಾನು ಅರಿತುಕೊಂಡೆ ಎಂದು ಹಾಜಿ ಲೇಖನದಲ್ಲಿ ವಿವರಿಸುತ್ತಾರೆ.
ಬ್ರಿಟಿಷ್ ಸೈನ್ಯದಿಂದ ಸೆರೆಹಿಡಿಯಲ್ಪಟ್ಟ ಕೈದಿಗಳು ಅತ್ಯುತ್ತಮ ಆರೋಗ್ಯ ಹೊಂದಿದ್ದರು. ಅವರನ್ನು ದೇಹಗಳ ರಾಶಿಯಾಗಿ ಕರೆತರುವ ದೃಶ್ಯ ಹೃದಯ ವಿದ್ರಾವಕವಾಗಿತ್ತು. ವ್ಯಾಗನ್ ಶರೀರದೊಂದಿಗೆ ತಿರೂರಿಗೆ ಹಿಂತಿರುಗಿದಾಗ ಅಸಹನೀಯವಾಗಿತ್ತು.
64 ಶರೀರಗಳು ಮಲಗಿದ್ದಲ್ಲೇ, ಮಣ್ಣಾದವು. ಆ ಶವಗಳು ಪರಸ್ಪರ ಅಪ್ಪಿಕೊಂಡಂತೆ ಕರುಣಾಜನಕ ಸ್ಥಿತಿಯಲ್ಲಿದ್ದವು. ಇಂದು ನೀವು ನೋಡುವ ತಿರೂರ್ ಮುನ್ಸಿಪಲ್ ಟೌನ್ಹಾಲ್ ಅನ್ನು ಹತ್ಯಾಕಾಂಡದ ನೆನಪಿಗಾಗಿ ವ್ಯಾಗನ್ ಆಕಾರದಲ್ಲೇ ನಿರ್ಮಿಸಲಾಗಿದೆ. ವ್ಯಾಗನ್ ದುರಂತದ ಕರಾಳ ನೆನಪಿಗಾಗಿ ಗ್ರಂಥಾಲಯಗಳು ಮತ್ತು ಶಾಲಾ ಕಟ್ಟಡಗಳಿಗೆ ಬಂಡಿಯ ಆಕಾರವನ್ನೇ ನೀಡಲಾಗಿದೆ.