ಲಖನೌ(ಉತ್ತರ ಪ್ರದೇಶ): ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿನ ಪ್ರಮುಖ ದೇವಸ್ಥಾನಗಳಾದ ಅಯೋಧ್ಯಾ, ಮಥುರಾದ ಸುತ್ತಮುತ್ತಲೂ ಮದ್ಯ ಮಾರಾಟಕ್ಕೆ ಇದೀಗ ಬ್ರೇಕ್ ಹಾಕಲಾಗಿದೆ. ದೇವಾಲಯಗಳ ಸುತ್ತಮುತ್ತಲೂ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಮದ್ಯದಂಗಡಿ ಮಾಲೀಕರ ಪರವಾನಗಿ ರದ್ಧುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ, ಇಂದಿನಿಂದಲೇ ಮಥುರಾದ ಸುಮಾರು 37 ಮದ್ಯದಂಗಡಿ ಬಂದ್ ಆಗಲಿವೆ.
ಅಯೋಧ್ಯೆಯ ರಾಮಮಂದಿರ ಮತ್ತು ಮಥುರಾದ ಕೃಷ್ಣ ಜನ್ಮಭೂಮಿಯ ಸಮೀಪವಿರುವ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಆದೇಶ ಜೂನ್ 1, 2022 ರಿಂದ ಜಾರಿಗೆ ಬಂದಿದೆ ಎಂದು ಅಲ್ಲಿನ ಜಿಲ್ಲಾಡಳಿತ ತಿಳಿಸಿವೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಮಥುರಾ - ವೃಂದಾವನದ 10 ಚದರ ಕಿಲೋ ಮೀಟರ್ ಪ್ರದೇಶವನ್ನ ಯಾತ್ರಸ್ಥಳ ಎಂದು ಘೋಷಣೆ ಮಾಡಿತ್ತು. ಈ ಪ್ರದೇಶದಲ್ಲಿ ಯಾವುದೇ ರೀತಿಯ ಮದ್ಯ ಹಾಗೂ ಮಾಂಸ ಮಾರಾಟಕ್ಕೆ ಅನುಮತಿ ನೀಡಿರಲಿಲ್ಲ.
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಗರ್ಭಗುಡಿ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ್ ಇಂದು ಅಡಿಗಲ್ಲು ಹಾಕಿದ್ದಾರೆ. ಇದರ ಬೆನ್ನಲ್ಲೇ ಇಂತಹದೊಂದು ಮಹತ್ವದ ನಿರ್ಧಾರ ಹೊರಬಿದ್ದಿದೆ.