ETV Bharat / bharat

ಹೆದ್ದಾರಿ ಪಕ್ಕದ ಸರ್ವೀಸ್​ ರಸ್ತೆಯಲ್ಲಿ ಯೋಗಾಭ್ಯಾಸ; ಟ್ರಕ್‌ ಹರಿದು ಮೂವರು ಬಾಲಕರ ದುರ್ಮರಣ

author img

By

Published : Jun 9, 2023, 4:24 PM IST

Updated : Jun 9, 2023, 4:32 PM IST

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ನಡೆಯಿತು. ಹೆದ್ದಾರಿ ಪಕ್ಕದ ಸರ್ವೀಸ್​ ರಸ್ತೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾಗ ಟ್ರಕ್​ ಹರಿದು ಮೂವರು ಬಾಲಕರು ಮೃತಪಟ್ಟಿದ್ದಾರೆ.

three children killed after uncontrollable-truck-crushed-while-doing-yoga in UP
ಸರ್ವೀಸ್​ ರಸ್ತೆಯಲ್ಲಿ ಯೋಗ ಮಾಡುತ್ತಿದ್ದ ಬಾಲಕರ ಮೇಲೆ ಹರಿದ ಟ್ರಕ್

ಝಾನ್ಸಿ (ಉತ್ತರ ಪ್ರದೇಶ): ಹೆದ್ದಾರಿ ಪಕ್ಕದ ಸರ್ವೀಸ್​ ರಸ್ತೆಯಲ್ಲಿ ಬೆಳಗಿನ ಹೊತ್ತು ಯೋಗಾಭ್ಯಾಸದಲ್ಲಿ ತೊಡಗಿದ್ದ ಬಾಲಕರಿಗೆ ವೇಗವಾಗಿ ಬಂದ ಟ್ರಕ್ ಗುದ್ದಿದೆ. ಪರಿಣಾಮ ಮೂವರು ಬಾಲಕರು ದಾರುಣವಾಗಿ ಸಾವಿಗೀಡಾದರೆ, ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಮಡೋರಾ ಖುರ್ದ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ದುರಂತ ನಡೆಯಿತು.

ಇದನ್ನೂ ಓದಿ: Bagalkot accident: ಬೈಕ್​​ಗೆ ಲಾರಿ ಡಿಕ್ಕಿ..ಮೂವರ ಸಾವು

ಟ್ರಕ್​ ಗುದ್ದಿದ ರಭಸಕ್ಕೆ ಅಭಿರಾಜ್ (12) ಮತ್ತು ಅಭಿನವ್ (14) ಸ್ಥಳದಲ್ಲೇ ಮೃತಪಟ್ಟರೆ, 21 ವರ್ಷದ ಅನುಜ್ ಅಲಿಯಾಸ್ ಭೋಲು ಎಂಬ ಯುವಕ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ 9 ವರ್ಷದ ಲಕ್ಷ್ಯ, 17 ವರ್ಷದ ಸುಂದರಂ ಹಾಗೂ 14 ವರ್ಷದ ಆರ್ಯನ್ ಎಂಬ ಬಾಲಕರು ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಸಂಪೂರ್ಣ ವಿವರ: ಇಲ್ಲಿನ ಪೂಂಚ್ ಪೊಲೀಸ್ ಠಾಣಾ ವ್ಯಾಪ್ತಿಯ ಮಡೋರಾ ಖುರ್ದ್ ಗ್ರಾಮದ ಬಳಿ ಝಾನ್ಸಿ - ಕಾನ್ಪುರ್ ಹೆದ್ದಾರಿ ಹಾದು ಹೋಗಿದೆ. ಪಕ್ಕದ ಸರ್ವೀಸ್ ರಸ್ತೆಯಲ್ಲಿ ಬೆಳಗ್ಗೆ ಬಾಲಕರು ಹಾಗೂ ಗ್ರಾಮಸ್ಥರು ಯೋಗ ಮತ್ತು ವಾಕಿಂಗ್​ ಬಳಕೆ ಮಾಡುತ್ತಿದ್ದರು. ಎಂದಿನಂತೆ ಬೆಳಗ್ಗೆ 6 ಗಂಟೆ ಸುಮಾರಿಗೆ ಸಹ ಬಾಲಕರು ಹಾಗೂ ಯುವಕರ ಗುಂಪು ಸೇರಿಕೊಂಡು ಯೋಗಾಭ್ಯಾಸದಲ್ಲಿ ತೊಡಗಿದ್ದರು.

ಇದೇ ಸಂದರ್ಭದಲ್ಲಿ ಕಾನ್ಪುರ ಕಡೆಯಿಂದ ಅತಿ ವೇಗದಲ್ಲಿ ಬಂದ ಟ್ರಕ್ ಡಿವೈಡರ್ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದೆ. ಟ್ರಕ್​ ನುಗ್ಗಿದಾಗ ಬಾಲಕರು ರಸ್ತೆಯಲ್ಲಿ ಕುಳಿತು ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಸುಮಾರು ಆರೇಳು ಜನರಿಗೆ ಟ್ರಕ್​ ಗುದ್ದಿಕೊಂಡು ಹೋಗಿದೆ. ಭೀಕರ ಅಪಘಾತವು ಬಾಲಕರ ಸಾವು -ನೋವಿಗೆ ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿ ಅಭಿಷೇಕ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: ಊಟಿಯಲ್ಲಿ ಕಾರು ಪಲ್ಟಿ.. ನರಸಿಂಹರಾಜ ವಿಧಾನಸಭಾ ಕ್ಷೇತ್ರ ಬಿಜೆಪಿ ಮುಖಂಡ ಇನ್ನಿಲ್ಲ

ಘಟನೆ ಸಂಭವಿಸಿದ ಕೂಡಲೇ ನೂರಾರು ಗ್ರಾಮಸ್ಥರು ಧಾವಿಸಿ ಬಂದು ಹೆದ್ದಾರಿಯಲ್ಲಿ ಜಮಾಯಿಸಿದ್ದಾರೆ. ಅಷ್ಟರಲ್ಲೇ ಆರೋಪಿ ಚಾಲಕ ಟ್ರಕ್​ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಖಂಡಿಸಿ ಸ್ಥಳೀಯರು ಹಾಗೂ ಮೃತ ಬಾಲಕರ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಜನರನ್ನು ಚದುರಿಸಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಟ್ರಕ್‌ ಚಾಲಕನ ಪತ್ತೆಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸಿಧಿಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಮಕ್ಕಳು ಸೇರಿ 7 ಮಂದಿ ಸ್ಥಳದಲ್ಲೇ ಸಾವು

Last Updated :Jun 9, 2023, 4:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.