ETV Bharat / bharat

ಮದುವೆ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ.. 50 ಸಾವಿರಕ್ಕೆ ಮಾರಾಟ ಮಾಡಿದ ಭೂಪ

author img

By

Published : Aug 22, 2022, 8:42 PM IST

ಮದುವೆ ಮಾಡಿಕೊಳ್ಳುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿ, ಮಾರಾಟ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

illicit relationship with the girl
illicit relationship with the girl

ಕೌಶಂಬಿ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಅತ್ಯಾಚಾರದಂತಹ ಅಮಾನವೀಯ ಘಟನೆಗಳು ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ ಕೌಶಂಬಿಯಲ್ಲೂ ಹೇಯ ಕೃತ್ಯ ನಡೆದಿದ್ದು, ಮದುವೆ ಮಾಡಿಕೊಳ್ಳುವ ನೆಪದಲ್ಲಿ ಯುವತಿ ಮೇಲೆ ದುಷ್ಕೃತ್ಯವೆಸಗಿರುವ ವ್ಯಕ್ತಿಯೋರ್ವ ಆಕೆಯನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಪ್ರೀತಿಯ ಬಲೆಯಲ್ಲಿ ಕೆಡವಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿರುವ ವ್ಯಕ್ತಿ, ಆಕೆಯನ್ನ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಇದಾದ ಬಳಿಕ ತನ್ನನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆಂದು ಯುವತಿ ಆರೋಪ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಳಲು ಹೇಳಿಕೊಂಡು ವಿಡಿಯೋ ಹರಿಬಿಟ್ಟು, ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಹರಿಕಥೆ ಹೇಳಲು ಹೋಗಿ ಪ್ರೇಮಕಥೆ ಶುರು ಮಾಡಿದ.. ಇಚ್ನಾ ಗ್ರಾಮದ ನಿವಾಸಿ ಬಲ್ದಿತ್​ ದ್ವಿವೇದಿ ಹಬ್ಬ- ಹರಿದಿನ, ಜಾತ್ರೆಗಳಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದನು. ಕೌಶಂಬಿಯ ಮದ ಗ್ರಾಮದಲ್ಲಿ ಹರಿಕಥೆ ಹೇಳುವ ಉದ್ದೇಶದಿಂದ ತೆರಳಿದ್ದನು. ಈ ವೇಳೆ ಯುವತಿಯೋರ್ವಳ ಪರಿಚಯವಾಗಿದೆ. ಆಕೆಯ ಮೊಬೈಲ್​ ನಂಬರ್ ಪಡೆದುಕೊಂಡಿದ್ದು, ನಂತರ ಇಬ್ಬರ ನಡುವೆ ಸಂಭಾಷಣೆ ಶುರುವಾಗಿದ್ದು, ಪ್ರೀತಿ ಚಿಗುರೊಡೆದಿದೆ.

ಮದುವೆ ಮಾಡಿಕೊಳ್ಳುವ ನೆಪದಲ್ಲಿ ಯುವತಿಯನ್ನ ಪ್ರಯಾಗ್​ರಾಜ್​​ಗೆ ಕರೆಸಿಕೊಂಡಿದ್ದಾನೆ. ಆತ ಹೇಳಿರುವ ಜಾಗಕ್ಕೆ ಬರುತ್ತಿದ್ದಂತೆ ಬಲವಂತವಾಗಿ ಕೋಣೆಯಲ್ಲಿ ಕೂಡಿ ಹಾಕಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಅದರ ವಿಡಿಯೋ ಸೆರೆ ಹಿಡಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ದೇಶದ ವಿವಿಧೆಡೆ ಕರೆದೊಯ್ದು ವ್ಯವಹಾರ.. ಇದಾದ ನಂತರ, ದೆಹಲಿ, ಬೆಂಗಳೂರು, ಖಾಂಡ್ವಾ, ನಾಗ್ಪುರ, ಪ್ರತಾಪಗಢ ಸೇರಿದಂತೆ ಅನೇಕ ನಗರಗಳಿಗೆ ಆಕೆಯನ್ನು ಕರೆದೊಯ್ದು ವ್ಯಾಪಾರ ಕುದುರಿಸಿದ್ದಾನೆ. ಬಳಿಕ 50 ಸಾವಿರ ರೂಪಾಯಿಗೆ ವ್ಯಕ್ತಿಯೋರ್ವನಿಗೆ ಮಾರಾಟ ಮಾಡಿದ್ದಾನೆ. ಆರೋಪಿಯ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಯುವತಿ ನೇರವಾಗಿ ಮನೆಗೆ ವಾಪಸ್​ ಆಗಿದ್ದಾಳೆ. ಪೋಷಕರ ಮುಂದೆ ವಿಷಯ ತಿಳಿಸಿದ್ದಾಳೆ. ಕುಟುಂಬದ ಸದಸ್ಯರೊಂದಿಗೆ ನಿರೂಪಕನ ಮನೆಗೆ ಹೋಗಿ, ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾಳೆ. ಆದರೆ, ವ್ಯಕ್ತಿ ನಿರಾಕರಿಸಿದ್ದಾನೆ.

ಇದನ್ನೂ ಓದಿ: ಯುಪಿಯಲ್ಲಿ ನಿರ್ಭಯಾ ಮಾದರಿ ಕೇಸ್​: ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ರೇಪ್​, ಬೆತ್ತಲೆಗೊಳಿಸಿ ಥಳಿತ

ಇದರ ಬೆನ್ನಲ್ಲೇ ಅಕಿಲ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾಳೆ. ಆದರೆ, ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾಳೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಮಾದರಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಅರಣ್ಯ ಪ್ರದೇಶಕ್ಕೆ ತೆರಳಿದ್ದ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಕಾಮುಕರು ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲ, ಆಕೆಯನ್ನು ಬೆತ್ತಲೆ ಮಾಡಿ ಥಳಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಂಚಲನ ಮೂಡಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.