ಚೆನ್ನೈ(ತಮಿಳುನಾಡು): ಅಕ್ರಮ ಆಸ್ತಿ ಗಳಿಕೆ, ಹಾಗೂ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡು ಮಾಜಿ ಸಚಿವರ ನಿವಾಸದ ಮೇಲೆ ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಸಚಿವರಾದ ಎಸ್.ಪಿ ವೇಲುಮಣಿ ಹಾಗೂ ಸಿ. ವಿಜಯಭಾಸ್ಕರ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
2020ರಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿಜಯಭಾಸ್ಕರ್ ಅವರ ಚೆನ್ನೈ, ಸೇಲಂ ನಿವಾಸ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದ್ದು, ಸುಮಾರು 13ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲಾಗ್ತಿದೆ. ಎಐಎಡಿಎಂಕೆ(AIADMK)ಯ ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಇಲಾಖೆ ಮೊಕದ್ದಮೆ ದಾಖಲಿಸಿದ್ದು, ಅಪಾರ ಆಸ್ತಿ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದೆ.
ಇದನ್ನೂ ಓದಿ: ಅಪಾರ ಆಸ್ತಿ ಸಂಗ್ರಹ: ಮಾಜಿ ಸಚಿವ ಸಿ. ವಿಜಯಭಾಸ್ಕರ್ ಮನೆ ಮೇಲೆ ಅಧಿಕಾರಿಗಳ ದಾಳಿ
ಮತ್ತೊಂದೆಡೆ ಎಐಎಡಿಎಂಕೆ ಪಕ್ಷದ ಮಾಜಿ ಸಚಿವರಾಗಿದ್ದ ಎಸ್.ಪಿ ವೇಲುಮಣಿ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪಗಳ ಅಳವಡಿಕೆ ಗುತ್ತಿಗೆ ನೀಡುವ ಯೋಜನೆಯಲ್ಲಿ 500 ಕೋಟಿ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ, ಅವರ ಕೊಯಮತ್ತೂರು. ಸುಕುನಪುರಂ, ತೊಂಡಮುತ್ತೂರು ಮತ್ತು ವಡವಳ್ಳಿ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ಇಲಾಖೆ ದಾಳಿ ನಡೆಸಿದೆ. ಈ ಹಿಂದೆ ಸಹ ಎರಡು ಸಲ ಇವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಯಾವುದೇ ರೀತಿಯ ದಾಖಲಾತಿ ಲಭ್ಯವಾಗಿರಲಿಲ್ಲ. ಇಂದು ಮತ್ತೊಮ್ಮೆ ಶೋಧಕಾರ್ಯ ನಡೆಸಲಾಗ್ತಿದೆ.
ಮಾಜಿ ಸಚಿವ ವೇಲುಮಣಿ ಮತ್ತು ಇತರರ ವಿರುದ್ಧ ಸೆಕ್ಷನ್ 120ಬಿ ಆರ್/ಡಬ್ಲ್ಯು 420, ಐಪಿಸಿ ಸೆಕ್ಷನ್ 409 ಮತ್ತು ಸೆಕ್ಷನ್ಸ್ 13(2) ಆರ್/ಡಬ್ಲ್ಯು 13(1ಹೆಚ್ ಸಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ 13(1)(ಡಿ), 1988 ಆರ್/ಡಬ್ಲ್ಯು 109 ಐಪಿಸಿಯಡಿ ಕೇಸು ದಾಖಲಾಗಿದೆ. ಕೊಯಮತ್ತೂರು ಭಾಗದ ಹಿರಿಯ ನಾಯಕ ಎಸ್ಪಿ ವೇಲುಮಣಿ ಅವರ ಮೇಲೆ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಪ್ರತಿಕ್ರಿಯೆ ನೀಡಿದ್ದು, ಡಿಎಂಕೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದಿತ್ತು.