ETV Bharat / bharat

ತಂದೆಯ ಹಣ ಮರು ಹೊಂದಿಸಲು ಮಗಳ ಸರ್ಕಸ್‌; ಕಿಡ್ನಿ ಮಾರಲು ಮುಂದಾಗಿ ಮೋಸದ ಜಾಲಕ್ಕೆ ಬಿದ್ದಳು!

author img

By

Published : Dec 13, 2022, 9:25 PM IST

Updated : Dec 13, 2022, 10:58 PM IST

ಹೈದರಾಬಾದ್​ನಲ್ಲಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಿಡ್ನಿ ಖರೀದಿ ಎಂಬ ಮೋಸದ ಜಾಲದಲ್ಲಿ ಬಿದ್ದು 16 ಲಕ್ಷ ರೂ. ಕಳೆದುಕೊಂಡಿದ್ದಾಳೆ.

a-student-who-had-offered-to-sell-her-kidney-to-recover-her-fathers-money-that-she-had-spent
ಖರ್ಚು ಮಾಡಿದ್ದ ತಂದೆ ಹಣ ಮರು ಹೊಂದಿಸಲು ಕಿಡ್ನಿ ಮಾರಾಟಕ್ಕೆ ಮುಂದಾಗಿ... ಮೋಸದ ಜಾಲಕ್ಕೆ ಬಿದ್ದ ವಿದ್ಯಾರ್ಥಿನಿ

ಗುಂಟೂರು(ಆಂಧ್ರ ಪ್ರದೇಶ): ತಾನು ಮಾಡಿದ ಒಂದು ತಪ್ಪನ್ನು ಮುಚ್ಚಿಹಾಕಲು ವಿದ್ಯಾರ್ಥಿನಿಯೊಬ್ಬಳು ತನ್ನ ಕಿಡ್ನಿಯನ್ನೇ ಮಾರಾಟ ಮಾಡಲು ಮುಂದಾಗಿದ್ದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣ ಬೆನ್ನಟ್ಟಿದಾಗ ಮತ್ತಷ್ಟು ಆಘಾತಕಾರಿ ಅಂಶಗಳು ಬಯಲಾಗಿವೆ.

ಗುಂಟೂರಿನ ಫಿರಂಗಿಪುರದ ವಿದ್ಯಾರ್ಥಿನಿಯೊಬ್ಬಳು ಹೈದರಾಬಾದ್​ನಲ್ಲಿ ನರ್ಸಿಂಗ್ ಓದುತ್ತಿದ್ದಳು. ಆನ್​ಲೈನ್​ ​ಕ್ಲಾಸ್​ಗೆಂದು ತಂದೆಯ ಫೋನ್​​ ತೆಗೆದುಕೊಂಡಿದ್ದಳು. ಈ ಫೋನ್​ಗೆ ತಂದೆಯ ಬ್ಯಾಂಕ್​ ಖಾತೆ ಕೂಡ ಜೋಡಣೆಯಾಗಿತ್ತು. ಅಂತೆಯೇ, ತಂದೆಗೆ ತಿಳಿಯದಂತೆ ಬಟ್ಟೆ, ವಾಚ್ ಖರೀದಿಸಲೆಂದು 80 ಸಾವಿರ ರೂ. ಬಳಸಿದ್ದಳು.

ಹಣ ಮರು ಹೊಂದಿಸಲು ಕಿಡ್ನಿ ಮಾರಾಟದ ಯೋಚನೆ: ತಂದೆಗೆ ಹೇಳದೇ ಅವರ ಬ್ಯಾಂಕ್​ ಖಾತೆಯಿಂದ 80 ಸಾವಿರ ರೂ. ಖರ್ಚು ಮಾಡಿದ್ದ ವಿದ್ಯಾರ್ಥಿನಿ, ಹಣವನ್ನು ಹೇಗಾದರೂ ಖಾತೆಗೆ ಮರು ಜಮೆ ಮಾಡಲು ಯೋಚಿಸಿದ್ದಳು. ಆದರೆ, ಹಣ ಮರು ಹೊಂದಿಸುವ ಬೇರೆ ದಾರಿ ಆಕೆಗೆ ಗೊತ್ತಾಗಿರಲಿಲ್ಲ. ಇದಕ್ಕಾಗಿ ಕಿಡ್ನಿ ಮಾರಾಟ ಮಾಡಿ ಹಣ ಪಡೆಯಬಹುದು ಎಂದು ಯಾರೋ ಗೆಳೆಯರು ಹೇಳಿದ್ದ ವಿಚಾರ ಆಕೆಗೆ ನೆನಪಾಗಿದೆ.

ಕಿಡ್ನಿ ಖರೀದಿಗೆ ಕುರಿತ ಜಾಹೀರಾತು
ಕಿಡ್ನಿ ಖರೀದಿ ಕುರಿತ ಮೋಸದ ಜಾಹೀರಾತು

ಕಿಡ್ನಿ ಮಾರಾಟಕ್ಕೆ ಆನ್​ಲೈನ್​ ಮೊರೆ: ಕಿಡ್ನಿ ಮಾರಾಟ ಮಾಡಿ ಹಣ ಪಡೆಯಬಹುದು ಎಂಬ ಸಲಹೆಯನ್ನು ಈ ವಿದ್ಯಾರ್ಥಿನಿ ಉತ್ತಮ ಆಯ್ಕೆ ಎಂದೇ ತಿಳಿದಿದ್ದಳು. ಕಿಡ್ನಿ ಖರೀದಿದಾರರಿಗಾಗಿ ಆನ್​ಲೈನ್​ನಲ್ಲಿ ಹುಡುಕಾಟ ಆರಂಭಿಸಿದ್ದಾಳೆ. ಈ ವೇಳೆ ವೆಬ್​ಸೈಟ್​ವೊಂದರಲ್ಲಿ ತುರ್ತಾಗಿ ಕಿಡ್ನಿ ಬೇಕಿದೆ ಎಂಬ ಜಾಹೀರಾತು ಕಣ್ಣಿಗೆ ಬಿದ್ದಿದೆ. ಕಿಡ್ನಿ ಮಾರಾಟ ಮಾಡಿದರೆ 7 ಕೋಟಿ ರೂ. ಸಿಗುತ್ತದೆ ಎಂಬುದನ್ನೂ ಆ ಜಾಹೀರಾತಿನಲ್ಲಿ ಗಮನಿಸಿದ್ದಾಳೆ.

ಇದನ್ನೂ ಓದಿ: ಫೇಸ್​ಬುಕ್​ ಪ್ರೇಯಸಿಯಿಂದ 40 ಲಕ್ಷ ವಂಚನೆ: ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು

ಕಿಡ್ನಿ ಖರೀದಿ ಜಾಹೀರಾತಿನಲ್ಲಿ ಪ್ರವೀಣ್​ ರಾಜ್ ಎಂಬ ವೈದ್ಯನ ಫೋಟೋ, ಫೋನ್ ನಂಬರ್​, ಇಮೇಲ್ ವಿಳಾಸ ಮತ್ತು ಆಸ್ಪತ್ರೆಯ ಹೆಸರು ಕೂಡ ಇತ್ತು. ಇಷ್ಟೆಲ್ಲ ಮಾಹಿತಿ ಇರುವುದರಿಂದ ವಿದ್ಯಾರ್ಥಿನಿ ನಿಜವೆಂದೇ ನಂಬಿದ್ದಳು. ಆದರೆ, ಅಸಲಿಗೆ ಇದೊಂದು ಮೋಸದ ಜಾಲವಾಗಿತ್ತು.

3.5 ಕೋಟಿ ಜಮೆ ಮಾಡಿದ್ದಾಗಿ ಹೇಳಿ ರವಾನಿಸಿದ್ದ ಸ್ಕ್ರೀನ್​ಶಾಟ್
3.5 ಕೋಟಿ ರೂ ಜಮೆ ಮಾಡಿದ್ದಾಗಿ ಹೇಳಿ ರವಾನಿಸಿದ್ದ ಸ್ಕ್ರೀನ್​ಶಾಟ್

ಜಾಹೀರಾತಿನ ಫೋನ್​ ನಂಬರ್​ ಮೂಲಕ ಪ್ರವೀಣ್​ ರಾಜ್​ನನ್ನು ವಿದ್ಯಾರ್ಥಿನಿ ಸಂಪರ್ಕಿಸಿದ್ದಳು. ಕಿಡ್ನಿ ಮಾರಲು ಒಪ್ಪಿದರೆ ಮೊದಲೇ 3.50 ಕೋಟಿ ಹಣ ನೀಡಲಾಗುವುದು. ಆಪರೇಷನ್ ನಂತರ ಉಳಿದ ಹಣ ನೀಡುವುದಾಗಿ ಆತ​ ತಿಳಿಸಿದ್ದಾನೆ. ಇದನ್ನು ಸತ್ಯವೆಂದು ನಂಬಿದ ವಿದ್ಯಾರ್ಥಿನಿ ಕಿಡ್ನಿ ಕೊಡಲು ಒಪ್ಪಿಕೊಂಡಿದ್ದಾಳೆ. ಅಲ್ಲದೇ, ಪ್ರವೀಣ್​ ರಾಜ್​ ಸೂಚಿಸಿದ್ದ ವೈದ್ಯಕೀಯ ಪರೀಕ್ಷೆಗಳಿಗೂ ಒಳಗಾಗಿ ಅದರ ವಿವರಗಳನ್ನು ಇ-ಮೇಲ್ ಸಹ ಮಾಡಿದ್ದಾಳೆ.

ಹಣ ಹಾಕಿದ್ದಾಗಿ ಹೇಳಿ ಇದ್ದ ದುಡ್ಡು ಲೂಟಿ: ವಿದ್ಯಾರ್ಥಿನಿ ಕಳುಹಿಸಿದ್ದ ವೈದ್ಯಕೀಯ ಪರೀಕ್ಷೆಯ ವಿವರಗಳನ್ನು ಗಮನಿಸಿರುವಂತೆ ಮಾಡಿದ್ದ ಪ್ರವೀಣ್​ ರಾಜ್, ಎಲ್ಲವೂ ಸರಿಯಾಗಿದೆ. ಮೊದಲ ಕಂತಿನ ಹಣ ಕೊಡುತ್ತೇನೆ. ಮುಂಗಡ ಹಣ ಪಾವತಿಸಲು ಬ್ಯಾಂಕ್​ ಖಾತೆ ಕಳುಹಿಸಿಕೊಡಿ ಎಂದು ಕೇಳಿದ್ದಾನೆ. ಆದರೆ, ತನ್ನ ಬಳಿ ಬ್ಯಾಂಕ್​ ಖಾತೆ ಇಲ್ಲದ ಕಾರಣ ಆಕೆ ತನ್ನ ತಂದೆ ಖಾತೆಯ ವಿವರಗಳನ್ನು ಹಂಚಿಕೊಂಡಿದ್ದಾಳೆ.

ಇದಾದ ನಂತರ ಪ್ರವೀಣ್​ ರಾಜ್ ಬ್ಯಾಂಕ್​ ಖಾತೆಯಲ್ಲಿ 3.50 ಕೋಟಿ ರೂ ಜಮೆ ಮಾಡಿರುವುದಾಗಿ ಹೇಳಿ ಅದರ ಸ್ಕ್ರೀನ್​ಶಾಟ್ ​ಅನ್ನು ವಿದ್ಯಾರ್ಥಿನಿಗೆ ವಾಟ್ಸ್​ಆ್ಯಪ್​​ ಮಾಡಿದ್ದಾನೆ. ಆದರೆ, ಬ್ಯಾಂಕ್​ನಲ್ಲಿ ಹಣ ಜಮೆ ಆಗಿರಲಿಲ್ಲ. ಇದನ್ನರಿತು ಪ್ರಶ್ನಿಸಿದಾಗ ಡಾಲರ್ ರೂಪದಲ್ಲಿ ಹಣ ಇದ್ದು, ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಲು ತೆರಿಗೆ ಪಾವತಿಸಬೇಕು. ಇದಕ್ಕಾಗಿ ಬ್ಯಾಂಕ್ ಖಾತೆಗೆ 15 ಸಾವಿರ ರೂ. ಪಾವತಿಸಬೇಕೆಂದು ಕೇಳಿದ್ದಾನೆ. ಇದನ್ನೂ ನಂಬಿದ ವಿದ್ಯಾರ್ಥಿನಿ ಆ ಹಣವನ್ನೂ ಪಾವತಿಸಿದ್ದಾಳೆ. ಇದೇ ರೀತಿಯಾಗಿ ಹೇಳಿ ಮಾರ್ಚ್​ನಿಂದ ಅಕ್ಟೋಬರ್​ವರೆಗೆ ಅಂದಾಜು 16 ಲಕ್ಷ ರೂ. ಹಣ ವಿದ್ಯಾರ್ಥಿನಿಯಿಂದ ಪ್ರವೀಣ್​ ರಾಜ್​ ಬ್ಯಾಂಕ್‌ ಖಾತೆ ಸೇರಿಕೊಂಡಿದೆ.

ವಿದ್ಯಾರ್ಥಿನಿಯನ್ನು ದೆಹಲಿಗೆ ಕರೆಸಿಕೊಂಡಿದ್ದ ವಂಚಕ: ಕೊನೆಗೆ ಈ ಬಗ್ಗೆ ಅನುಮಾನಗೊಂಡ ವಿದ್ಯಾರ್ಥಿನಿ ಗಲಾಟೆ ಮಾಡಿ ಹಣ ನೀಡುವಂತೆ ಕೇಳಿದ್ದಾಳೆ. ಆಗ ಒಮ್ಮೆ ಆಕೆ ತಂದೆಯ ಖಾತೆಗೆ 10 ಸಾವಿರ ರೂ. ಹಣ ಜಮೆ ಮಾಡಿ, ಮತ್ತದೇ ಆಸೆ ಹುಟ್ಟಿಸಿದ್ದಾನೆ. ಇದಾದ ನಂತರವೂ ಪೂರ್ಣ ಹಣ ಬಾರದೇ ಇದ್ದುದರಿಂದ ನಾನು ಪಾವತಿಸಿರುವ ಎಲ್ಲ ಹಣವನ್ನೂ ಮರಳಿ ಕೊಡುವಂತೆ ಪ್ರವೀಣ್​ ರಾಜ್​ಗೆ ಇಮೇಲ್ ಕಳುಹಿಸಿದ್ದಾಳೆ.

ದೆಹಲಿಗೆ ಬಂದರೆ ಎಲ್ಲ ಹಣವನ್ನು ಕೊಡಲಾಗುವುದು ಎಂದು ಪ್ರವೀಣ್​ ರಾಜ್ ತಿಳಿಸಿದ್ದು, ವಿದ್ಯಾರ್ಥಿನಿ ವಿಮಾನದಲ್ಲಿ ದೆಹಲಿಗೂ ಹೋಗಿದ್ದಾಳೆ. ಆದರೆ, ಅಲ್ಲಿಗೆ ಹೋದ ಬಳಿಕ ವಿದ್ಯಾರ್ಥಿನಿ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದಾಗಿ ಆಕೆ ಪೆಚ್ಚು ಮೋರೆ ಮಾಡಿಕೊಂಡು ಮರಳಿ ಬಂದಿದ್ದಾಳೆ. ಅಂತಿಮವಾಗಿ ತಾನು ಮೋಸ ಹೋದೆ ಎಂದರಿತುಕೊಂಡ ವಿದ್ಯಾರ್ಥಿನಿ, ತಂದೆಗೆ ವಿಷಯ ಗೊತ್ತಾಗುತ್ತದೆ ಎಂದು ಹೆದರಿ ಮನೆಯಿಂದ ಓಡಿ ಹೋಗಿದ್ದಾಳೆ.

ನಾಪತ್ತೆ ಪ್ರಕರಣದಿಂದ ಸಂಪೂರ್ಣ ಕಥೆ ಬಯಲಿಗೆ: ಮಗಳು ಮನೆಯಿಂದ ಕಾಣೆಯಾದ ಬಗ್ಗೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಗಿಳಿದ ಪೊಲೀಸರು ಎನ್‌ಟಿಆರ್ ಜಿಲ್ಲೆಯ ಕಂಚಿಕಚರಲ್‌ನಲ್ಲಿರುವ ಸ್ನೇಹಿತನ ಮನೆಯಲ್ಲಿದ್ದ ಆಕೆಯನ್ನು ಪತ್ತೆ ಮಾಡಿ ತಂದೆಗೆ ಒಪ್ಪಿಸಿದ್ದಾರೆ. ಕುಟುಂಬಸ್ಥರು ವಿಚಾರಿಸಿದಾಗ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿನಿ ಬಹಿರಂಗಪಡಿಸಿದ್ದಾಳೆ.

ಕಿಡ್ನಿ ಖರೀದಿ ಹೆಸರಲ್ಲಿ ಮೋಸ ಹೋಗಿರುವ ಕುರಿತಾಗಿ ತಂದೆ ಮತ್ತು ಮಗಳು ಒಟ್ಟಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಗುಂಟೂರು ಪಟ್ಟಾಭಿಪುರಂನಲ್ಲಿ ಪ್ರಕರಣ ದಾಖಲಾಗಿದೆ. ಇಡೀ ಪ್ರಕರಣದ ವಿಚಾರಣೆಯನ್ನು ಸೈಬರ್ ಕ್ರೈಂ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಸಿಂಗಾಪುರದಲ್ಲಿ ಉದ್ಯೋಗ ನೀಡುವ ಭರವಸೆ: ₹23 ಲಕ್ಷ ಕಳೆದುಕೊಂಡ ಪ್ರಾಧ್ಯಾಪಕ

Last Updated : Dec 13, 2022, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.