ETV Bharat / bharat

ಚಂದ್ರನ ಮೇಲ್ಮೈ ಸಂಶೋಧನೆಗೆ ಮೊದಲ ಆದ್ಯತೆ, ಬದುಕಿನ ಬಗ್ಗೆ ಯಾವುದೇ ಖಾತ್ರಿ ಇಲ್ಲ: ವಿಜ್ಞಾನಿ ವೆಂಕಟೇಶ್ವರನ್​

author img

By ETV Bharat Karnataka Team

Published : Aug 30, 2023, 4:57 PM IST

ಚಂದ್ರನ ಮೇಲೆ ಬದುಕಿನ ಕುರಿತು ಇನ್ನೂ ಯಾವುದೇ ಖಚಿತತೆ ಸಿಕ್ಕಿಲ್ಲ. ಚಂದ್ರನ ಕೆಲವು ಸ್ಥಳಗಳಲ್ಲಿ ಇಳಿದು ನಿಖರ ಮಾಹಿತಿ ಸಂಗ್ರಹಿಸಿ, ಅದನ್ನು ಆರ್ಬಿಟರ್‌ಗಳು ರವಾನಿಸಿರುವ ಮಾಹಿತಿಯೊಂದಿಗೆ ತಾಳೆ ಮಾಡಬೇಕಿದೆ ಬಾಹ್ಯಾಕಾಶ ವಿಜ್ಞಾನಿ ಟಿ.ವಿ.ವೆಂಕಟೇಶ್ವರನ್​ ತಿಳಿಸಿದ್ದಾರೆ.

space-scientist-venkateswaran-on-possibility-of-life-on-moon-and-chandrayaan-3
ಚಂದ್ರನ ಮೇಲ್ಮೈ ಸಂಶೋಧನೆಗೆ ಪ್ರಮುಖ ಆದ್ಯತೆ.. ಬದುಕಿನ ಬಗ್ಗೆ ಯಾವುದೇ ಖಾತ್ರಿ ಇಲ್ಲ: ವಿಜ್ಞಾನಿ ವೆಂಕಟೇಶ್ವರನ್​

ನವದೆಹಲಿ: ಚಂದ್ರದ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿರುವ ಚಂದ್ರಯಾನ-3 ಯೋಜನೆಯ ಬಗ್ಗೆ ಬಾಹ್ಯಾಕಾಶ ವಿಜ್ಞಾನಿ ಟಿ.ವಿ.ವೆಂಕಟೇಶ್ವರನ್​ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಾಹ್ಯಾಕಾಶ ಪ್ರಯಾಣದಲ್ಲೇ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಇದೇ ವೇಳೆ, ಚಂದ್ರನ ಮೇಲೆ ಜೀವಿಗಳಿರುವ ಬಗ್ಗೆ ಇನ್ನೂ ಯಾವುದೇ ಖಾತ್ರಿ ಇಲ್ಲ. ಸದ್ಯಕ್ಕೆ ಚಂದ್ರದ ಮೇಲ್ಮೈಯನ್ನು ಅನ್ವೇಷನೆ ನಡೆಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.

ಆಗಸ್ಟ್​ 23ರಂದು ದಕ್ಷಿಣ ಧ್ರುವದ ಮೇಲೆ ವಿಕ್ರಮ್​ ಲ್ಯಾಂಡರ್ ​​ಅನ್ನು ಇಸ್ರೋ ವಿಜ್ಞಾನಿಗಳು ಮೃದುವಾಗಿ ಇಳಿಸಿ ಇತಿಹಾಸ ಸೃಷ್ಟಿಸಿದ್ದರು. ಶತಮಾನಗಳಿಂದಲೂ ಬೆಳಕನ್ನೇ ಕಾಣದ ಈ ಧ್ರುವದ ಮೇಲೆ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸಿದ ಹೆಗ್ಗಳಿಕೆ ಭಾರತೀಯ ವಿಜ್ಞಾನಿಗಳಿಗೆ ಸಂದಿದೆ. ಲ್ಯಾಂಡರ್​ನಲ್ಲಿದ್ದ ಪ್ರಜ್ಞಾನ್​ ರೋವರ್​ ಹೊರಬಂದು ತನ್ನ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಚಂದ್ರಯಾನ-3ರ ಉದ್ದೇಶಗಳನ್ನು ಸಾಕಾರಗೊಳಿಸುತ್ತಿದೆ.

ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಪತ್ತೆ ಹಚ್ಚಿದ ಪ್ರಜ್ಞಾನ್​ ರೋವರ್.. ಹೈಡ್ರೋಜನ್​ಗಾಗಿ ಹುಡುಕಾಟ - ಇಸ್ರೋ ಹೊಸ ಮಾಹಿತಿ

ಲ್ಯಾಂಡರ್​ ಇಳಿದಿರುವ ಪ್ರದೇಶದಲ್ಲಿ ವೈಜ್ಞಾನಿಕ ಶೋಧನೆಗಳಲ್ಲಿ ತೊಡಗಿರುವ ರೋವರ್​ ಮಂಗಳವಾರವಷ್ಟೇ ದಕ್ಷಿಣ ಧ್ರುವದಲ್ಲಿ ಸಲ್ಫರ್​ ಹಾಗೂ ಆಮ್ಲಜನಕ ಸೇರಿ ಅನೇಕ ಧಾತುಗಳಿರುವ ಬಗ್ಗೆ ಖಚಿತಪಡಿಸಿದೆ. ಸದ್ಯ ಜಲಜನಕಕ್ಕಾಗಿ ರೋವರ್​ ಹುಡುಕಾಡುತ್ತಿದೆ. ಈ ಕುರಿತು ವಿಜ್ಞಾನಿ ಟಿ.ವಿ. ವೆಂಕಟೇಶ್ವರನ್​ ಮಾತನಾಡಿ, ''ಈಗ ರೋವರ್ ಚಂದ್ರನ ಮೇಲ್ಮೈಯಲ್ಲಿ ಕೆಲವು ಅಂಶಗಳನ್ನು ಪತ್ತೆ ಮಾಡಿದೆ. ಇದು ವಿವಿಧ ಸ್ಥಳಗಳಿಗೆ ಸಂಚರಿಸಿ ವಿವಿಧ ಭಾಗಗಳಲ್ಲಿ ಅದರ ಧಾತುರೂಪದ ಸಂಯೋಜನೆ ಮತ್ತು ಸಾಂದ್ರತೆಯನ್ನು ಹುಡುಕುತ್ತದೆ'' ಎಂದರು.

''ಈಗಾಗಲೇ ಚಂದ್ರಯಾನ 1, ಚಂದ್ರಯಾನ 2 ಮತ್ತು ಅಮೆರಿಕನ್​ ಆರ್ಬಿಟರ್‌ಗಳು ಚಂದ್ರನ ಮೇಲ್ಮೈಯಲ್ಲಿರುವ ಖನಿಜಗಳನ್ನು ರಿಮೋಟ್​ ಸೆನ್ಸಾರ್‌ಗಳ ಮೂಲಕ ಗ್ರಹಿಸಿ ಕಂಡುಹಿಡಿದಿವೆ. ಆದರೆ, ಈ ಗ್ರಹಿಸುವಿಕೆಯು ಸರಿಸುಮಾರು 100 ಕಿ.ಮೀ ದೂರದಿಂದ ನಡೆದಿದೆ. ಹೀಗಾಗಿ ನೀವು ಕನಿಷ್ಟ ಪಕ್ಷ ಚಂದ್ರನ ಕೆಲವು ಸ್ಥಳಗಳಲ್ಲಿ ಇಳಿದು ಮಾಹಿತಿ ಸಂಗ್ರಹಿಸಬೇಕು. ಇದರ ಮಾಹಿತಿ ಹಾಗೂ ಆರ್ಬಿಟರ್​ಗಳ ರಿಮೋಟ್ ಸೆನ್ಸಿಂಗ್ ಮಾಹಿತಿ ಹೊಂದಿಕೆಯಾಗುತ್ತದೆಯೇ ಎಂಬುದನ್ನು ನೋಡಬೇಕು'' ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ''ನೀವು ಹಾಗೆ ನೋಡಿದರೆ, 1960ರ ದಶಕದಿಂದಲೂ ಚಂದ್ರನ ಮೇಲೆ ಇಳಿಯಲು ಹಲವಾರು ಪ್ರಯತ್ನಗಳು ನಡೆದಿವೆ. ಕಳೆದ ಐದು ವರ್ಷಗಳಲ್ಲೇ ಏಳು ಪ್ರಯತ್ನಗಳು ಜರುದ್ದವು. ಆದರೆ, ಇವುಗಳ ಪೈಕಿ ಮೂರು ಮಾತ್ರ ಯಶಸ್ವಿಯಾಗಿವೆ. ಇದರಲ್ಲಿ ಚಂದ್ರಯಾನ-3 ಕೂಡ ಒಂದು. ಇದನ್ನು ಗಮನಿಸಿದರೆ ಇಸ್ರೋ ಆಧುನಿಕ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದೆ. ಬಾಹ್ಯಾಕಾಶ ಪ್ರಯಾಣದ ಇತಿಹಾಸದಲ್ಲಿ ಇದು ಪ್ರಮುಖ ಹೆಗ್ಗುರುತು'' ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: 'ಆದಿತ್ಯ ಎಲ್1' ಉಡ್ಡಯನ ಕಸರತ್ತು ಪೂರ್ಣ; ಚಂದ್ರನಲ್ಲಿ ವಿಕ್ರಮ್​ ಲ್ಯಾಂಡರ್‌ ಫೋಟೋ ತೆಗೆದ ಪ್ರಗ್ಯಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.