ETV Bharat / bharat

ಹಿಮಪಾತದಿಂದ ಶ್ರೀನಗರದಲ್ಲಿ 25 ವಿಮಾನಗಳ ಹಾರಾಟ ರದ್ದು: ಹಿಮಾಚಲದಲ್ಲಿ ಹಿಮದ ಹೊದಿಕೆ

author img

By

Published : Jan 13, 2023, 5:25 PM IST

ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಲಚ ಪ್ರದೇಶದಲ್ಲಿ ಗುರುವಾರ ಹೊಸ ವರ್ಷದ ತಾಜಾ ಹಿಮಪಾತವಾಗಿದೆ. ಇದು ಪ್ರವಾಸಿಗರಿಗೆ ಖುಷಿ ನೀಡಿದೆ. ಜೊತೆಗೆ ವಿಮಾನ ಹಾರಾಟ, ವಾಹನ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

snowfall-hits-traffic-at-srinagar-airport-25-flights-cancelled
ಹಿಮಪಾತದಿಂದ ಶ್ರೀನಗರದಲ್ಲಿ 25 ವಿಮಾನಗಳ ಹಾರಾಟ ರದ್ದು: ಹಿಮಾಚಲದಲ್ಲಿ ಹಿಮ ಹೊದಿಕೆ

ಶ್ರೀನಗರ/ಶಿಮ್ಲಾ: ಉತ್ತರ ಭಾರತದಲ್ಲಿ ಹೆಪ್ಪುಗಟ್ಟುವ ಚಳಿ ಮುಂದುವರೆದಿದೆ. ಇದರ ನಡುವೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಲಚ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಹಿಮಪಾತದ ನಡುವೆ ಕೆಟ್ಟ ಹವಾಮಾನದ ಕಾರಣದಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 25 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಹಿಮಾಚಲದಲ್ಲಿ ಪ್ರವಾಸಿಗರ ಮೋಜು
ಹಿಮಾಚಲದಲ್ಲಿ ಪ್ರವಾಸಿಗರ ಮೋಜು

ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಲಚ ಪ್ರದೇಶ ಎರಡೂ ರಾಜ್ಯಗಳಲ್ಲೂ ಇಂದು ಈ ಋತುವಿನ ಮೊದಲ ಹಿಮಪಾತ ಇದಾಗಿದೆ. ನಿರಂತರವಾಗಿ ಹಿಮಪಾತದಿಂದ ಹಲವು ಪ್ರದೇಶಗಳು ಆವೃತವಾಗುತ್ತಿವೆ. ಇದರ ಜೊತೆ ಕಡಿಮೆ ಗೋಚರತೆ ಉಂಟಾಗುತ್ತಿದೆ. ಹೀಗಾಗಿ ವಿಮಾನ ಹಾರಾಟ, ವಾಹನ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ 10ರಿಂದಲೇ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಹಿಮಾಚಲದಲ್ಲಿ ಉಂಟಾದ ಹಿಮಪಾತ
ಹಿಮಾಚಲದಲ್ಲಿ ಉಂಟಾದ ಹಿಮಪಾತ

ಕೆಟ್ಟ ಹವಾಮಾನದ ಕಾರಣ ವಿಮಾನಯಾನ ಸಂಸ್ಥೆಗಳು ಇಂದು ಬೆಳಗ್ಗೆ 10 ಗಂಟೆ ನಂತರದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಏರ್‌ ಏಷ್ಯಾ, ಇಂಡಿಗೋ, ಸ್ಪೈಸ್‌ ಜೆಟ್, ಏರ್ ಇಂಡಿಯಾ ಮತ್ತು ವಿಸ್ತಾರಾ ಸಂಸ್ಥೆ ಸೇರಿದಂತೆ 25 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಇತ್ತ, ರಾಂಬನ್ ಜಿಲ್ಲೆಯ ಮೆಹರ್ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಶ್ರೀನಗರ ಮತ್ತು ಜಮ್ಮು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಹಿಮಾಚಲದಲ್ಲಿ ಉಂಟಾದ ಹಿಮಪಾತ
ಹಿಮಾಚಲದಲ್ಲಿ ಉಂಟಾದ ಹಿಮಪಾತ

ತಾಜಾ ಹಿಮಪಾತದಿಂದ ದಿನ ಆರಂಭ: ಕಾಶ್ಮೀರ ಕಣಿವೆಯಲ್ಲಿ ತಾಜಾ ಹಿಮಪಾತದಿಂದ ದಿನ ಆರಂಭವಾಗಿದೆ. ಜನರ ನಿದ್ದೆ ಎಚ್ಚರಗೊಳ್ಳುವರಷ್ಟರಲ್ಲಿ ಅನೇಕ ಪ್ರದೇಶಗಳು ಹಿಮದಿಂದ ಆವೃತಗೊಂಡಿದ್ದವು. ಮಧ್ಯಾಹ್ನದವರೆಗೆ ಕಣಿವೆ ನಾಡು ಹಿಮದ ಹೊದಿಕೆಯಿಂದ ಮುಚ್ಚಲ್ಪಟ್ಟಿತ್ತು. ಇದೇ ವೇಳೆ, ತಾಜಾ ಹಿಮಪಾತವು ಅತಿ ಎತ್ತರದ ಪ್ರವಾಸಿ ತಾಣಗಳಾದ ಗುಲ್ಮಾರ್ ಮತ್ತು ಸೋನ್ಮಾರ್ಗ್‌ನಲ್ಲಿ ಪ್ರವಾಸಿಗರು ಮತ್ತು ಹೋಟೆಲ್ ಮಾಲೀಕರಿಗೆ ಹೊಸ ಆನಂದ ನೀಡಿದೆ. ಈ ಋತುವಿನ ಮೊದಲ ಹಿಮಪಾತಕ್ಕೆ ಪ್ರವಾಸಿಗರು ಸಾಕ್ಷಿಯಾದರೆ, ಹೋಟೆಲ್​ ವ್ಯಾಪಾರವು ಬಿರುಸಿನಿಂದ ಸಾಗಿತ್ತು. ಮತ್ತೊಂದೆಡೆ ಯೋಧರು ಭಾರೀ ಹಿಮದ ನಡುವೆಯೇ ಗಸ್ತು ತಿರುಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಹಿಮಾಚಲದಲ್ಲಿ 6-8 ಇಂಚು ಹಿಮ: ಹಿಮಾಚಲ ಪ್ರದೇಶದಲ್ಲೂ ತಾಜಾ ಹಿಮಪಾತ ಸಂಭವಿಸಿದೆ. ಇಲ್ಲಿ ಕೂಡ ಅನೇಕ ಪ್ರದೇಶಗಳು 6ರಿಂದ 8 ಇಂಚು ಹಿಮದಿಂದ ಆವೃತಗೊಂಡಿವೆ. ರಾಜಧಾನಿ ಶಿಮ್ಲಾ, ಮಂಡಿ, ಕುಲು, ಲಾಹೌಲ್, ಸ್ಪಿತಿ, ಕಿನ್ನೌರ್ ಮತ್ತು ಚಂಬಾದಲ್ಲಿ ಭಾರಿ ಹಿಮಪಾತ ಸಂಭವಿಸಿದೆ. ಶಿಮ್ಲಾ ಪಟ್ಟಣದ ಹೊರವಲಯದಲ್ಲಿ ಲಘು ಹಿಮಪಾತ ಉಂಟಾಗಿದೆ. ಕುಲುವಿನ ಕೋಠಿ ಎಂಬ ಗ್ರಾಮವು 14 ಸೆಂಮೀ ಭಾರಿ ಹಿಮಪಾತವನ್ನು ಕಂಡಿದೆ.

ಮಂಡಿ ಜಿಲ್ಲೆಯ ಎತ್ತರದ ಪ್ರದೇಶಗಳಲ್ಲಿ ತಡರಾತ್ರಿಯಿಂದ ಹಿಮಪಾತ ಉಂಟಾಗಿದೆ. ಶಿಕಾರಿ ದೇವಸ್ಥಾನ, ಪರಾಶರ ದೇವಸ್ಥಾನ, ಕಮ್ರುನಾಗ್ ದೇವಸ್ಥಾನ, ನಿಹ್ರಿ, ಪಂಡಾರ್, ದೇವಿದಾದ್, ರೋಹಾಡಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ತಾಜಾ ಹಿಮಪಾತವಾಗಿದೆ. ಈ ಹಿಮಪಾತದಿಂದಾಗಿ ಸೇಬು, ಆಲೂಗಡ್ಡೆ ಸೇರಿ ಇತರ ತೋಟಗಾರಿಕೆ ಬೆಳೆಗಾರರಲ್ಲೂ ಮಂದಹಾಸ ಮೂಡಿಸಿದೆ. ತುಂಬಾ ದಿನಗಳ ನಂತರ ಹಿಮಪಾರವಾಗಿರುವುದರಿಂದ ತೋಟಗಾರಿಕೆ ಬೆಳೆಗಳಿಗೆ ಇದು ವರದಾನವಾಗಿದೆ ಎಂದು ಸ್ಥಳೀಯ ರೈತರು ಹೇಳಿದ್ದಾರೆ.

ಹಿಮದಲ್ಲಿ ಪ್ರವಾಸಿಗರ ಮೋಜು: ಪ್ರವಾಸಿಗರು ಸಹ ಬಹಳ ಸಮಯದಿಂದ ಹಿಮಪಾತಕ್ಕಾಗಿ ಕಾಯುತ್ತಿದ್ದರು. ಇದೀಗ ಹಿಮಪಾತದಿಂದಾಗಿ ಪ್ರವಾಸಿಗರ ಮುಖದಲ್ಲೂ ಸಂತಸ ಅರಳಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಹೊರ ರಾಜ್ಯಗಳ ಪ್ರವಾಸಿಗರು ಶಿಮ್ಲಾದತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಪ್ರವಾಸಿಗರು ಹಿಮದೊಂದಿಗೆ ಆಟವಾಡುತ್ತಾ, ಮೋಜಿನಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಇದೇ ವೇಳೆ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ಜೋಶಿಮಠ ಭೂಕುಸಿತ: ಹಳಿ ತಪ್ಪಿದ ಜನಜೀವನ, ಮದುವೆ ಮಾಡಲೂ ಹಿಂದೇಟು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.