ETV Bharat / bharat

ವಿಶ್ವಕಪ್ ಕ್ರಿಕೆಟ್‌ ಫೈನಲ್‌ ದಿನ ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಸಿಖ್‌ ಪ್ರತ್ಯೇಕತಾವಾದಿ ಪನ್ನು ಬೆದರಿಕೆ

author img

By ANI

Published : Nov 5, 2023, 12:27 PM IST

ನವೆಂಬರ್ 19ರಂದು ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಪನ್ನು ಬೆದರಿಕೆ ಹಾಕಿದ್ದಾನೆ.

Gurpatwant Pannun
ಗುರುಪತ್ವಂತ್ ಪನ್ನು

ನವದೆಹಲಿ: ನಿಷೇಧಿತ ಸಿಖ್​ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ ಹಾಗೂ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಎಂಬಾತನ ಹೊಸ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ನವೆಂಬರ್ 19 ರಂದು (ವಿಶ್ವಕಪ್ ಕ್ರಿಕೆಟ್‌ ಫೈನಲ್ ದಿನ) ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾನೆ. ಒಂದು ವೇಳೆ ಈ ದಿನದಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದರೆ ನಿಮ್ಮ ಜೀವಕ್ಕೆ ತೊಂದರೆ ಎಂದು ಹೇಳಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, "ನಾವು ಸಿಖ್ ಜನರನ್ನು ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಕೇಳುತ್ತಿದ್ದೇವೆ. ಅಂದು ಜಾಗತಿಕ ದಿಗ್ಬಂಧನ ಇರುತ್ತದೆ. ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ. ಆ ದಿನದಂದು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಐಜಿಐ) ಮುಚ್ಚಲಾಗುವುದು. ಅದರ ಹೆಸರನ್ನು ಬದಲಾಯಿಸಲಾಗುವುದು. ಈ ವಿಮಾನ ನಿಲ್ದಾಣದ ಹೆಸರು ಶಾಹಿದ್ ಬಿಯಾಂತ್ ಸಿಂಗ್, ಶಾಹಿದ್ ಸತ್ವಂತ್ ಸಿಂಗ್ ಖಲಿಸ್ತಾನ್ ವಿಮಾನ ನಿಲ್ದಾಣ ಎಂದು ಇಡುತ್ತೇವೆ" ಎಂದು ಹೇಳಿದ್ದಾನೆ.

ವಾಸ್ತವವಾಗಿ, 2023ರ ನವೆಂಬರ್ 19ರಂದು ವಿಶ್ವಕಪ್‌ ಕ್ರಿಕೆಟ್‌ನ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಈಗಾಗಲೇ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಕಪ್ ಗೆಲ್ಲಲು ಸಜ್ಜಾಗಿದೆ. ಈ ಬೆನ್ನಲ್ಲೇ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್​ ಆಗಿದೆ.

ಇಂಥ ಬೆದರಿಕೆಗಳು ಇದೇ ಮೊದಲಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಕುರಿತು ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಜಗಳದ ಮಧ್ಯೆ, ಹಿಂದೂ-ಕೆನಡಿಯನ್ನರನ್ನು ಕೆನಡಾ ತೊರೆಯುವಂತೆ ಪನ್ನು ಒತ್ತಾಯಿಸಿದ್ದನು.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಶಾಂಗ್ರೀಲಾ ಹೋಟೆಲ್​ಗೆ ಬಾಂಬ್ ಬೆದರಿಕೆ: ದೂರು ದಾಖಲು

ಅಕ್ಟೋಬರ್ 10 ರಂದು ಇದೇ ಪನ್ನು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧದಿಂದ ಪಾಠ ಕಲಿಯುವಂತೆ ಬೆದರಿಕೆ ಹಾಕಿದ್ದ. ಅಮೃತಸರ ಮೂಲದ ಈತ 2019ರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಕಣ್ಗಾವಲಿನಲ್ಲಿದ್ದಾನೆ. ತನಿಖಾ ಸಂಸ್ಥೆಯು ಈಗಾಗಲೇ ಪನ್ನು ವಿರುದ್ಧ ಮೊದಲ ಪ್ರಕರಣ ದಾಖಲಿಸಿದೆ. ತನ್ನ ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಸತೀಶ ಜಾರಕಿಹೊಳಿ ಸೇರಿ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ : ಒಟ್ಟು 61 ಜನರಿಗೆ ಬೆದರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.