ETV Bharat / bharat

ಸಿಧು ಮೂಸೇವಾಲ ಹತ್ಯೆ ಪ್ರಕರಣ.. ಅಜರ್​ಬೈಜಾನ್​ನಿಂದ ಗ್ಯಾಂಗ್​ಸ್ಟರ್​ ಸಚಿನ್​ ಬಿಷ್ಣೋಯಿ ಭಾರತಕ್ಕೆ ಕರೆತಂದ ಪೊಲೀಸರು

author img

By

Published : Aug 1, 2023, 9:52 PM IST

ಸಿಧು ಮೂಸೇವಾಲ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್​​ ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಸೋದರ ಸಂಬಂಧಿ ಸಚಿನ್​ ಬಿಷ್ಣೋಯಿಯನ್ನು ದೆಹಲಿ ಪೊಲೀಸರು ಅಜರ್​ಬೈಜಾನ್​ನಿಂದ ಭಾರತಕ್ಕೆ ಕರೆತಂದಿದ್ದಾರೆ.

sidhu-moosewala-murder-case-patiala-house-court-grants-10-day-remand-of-sachin-bishnoi-to-delhi-police
ಸಿಧು ಮೂಸೇವಾಲ ಹತ್ಯೆ ಪ್ರಕರಣ : ಅಜರ್​ಬೈಜಾನ್​ನಿಂದ ಸಚಿನ್​ ಬಿಷ್ಣೋಯಿ ಭಾರತಕ್ಕೆ ಕರೆತಂದ ಪೊಲೀಸರು

ನವದೆಹಲಿ : ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಚಿನ್ ಬಿಷ್ಣೋಯಿಯನ್ನು ಅಜರ್​ಬೈಜಾನ್​ನ ಬಾಕುವಿನಿಂದ ಭಾರತಕ್ಕೆ ಕರೆತರಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೇವಾಲ ಅವರನ್ನು 2022ರ ಮೇ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್​​ ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಸೋದರ ಸಂಬಂಧಿ ಸಚಿನ್​ ಬಿಷ್ಣೋಯಿ ಪ್ರಮುಖ ಆರೋಪಿಯಾಗಿದ್ದನು. ಸಚಿನ್​ ಪಂಜಾಬ್​ನ ಫಾಝಿಲ್​ಕಾ ನಿವಾಸಿಯಾಗಿದ್ದನು.

ಆರೋಪಿ ಸಚಿನ್​ನನ್ನು ದೆಹಲಿ ಪೊಲೀಸರು ಪಟಿಯಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 10 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಪೊಲೀಸರು ಆರೋಪಿಯನ್ನು ವಿವಿಧ ಪ್ರಕರಣಗಳಲ್ಲಿ ವಿಚಾರಣೆ ನಡೆಸಲಿದ್ದಾರೆ. ಸಚಿನ್ ವಿರುದ್ಧ ಸಿಧು ಮೂಸೆವಾಲ ಹತ್ಯೆಗೆ ಸಂಚು ರೂಪಿಸಿದ ಮತ್ತು ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪಗಳಿವೆ.

ಸಿಧು ಮೂಸೇವಾಲ ಹತ್ಯೆ ಸಂದರ್ಭ ಸಚಿನ್​ ಬಿಷ್ಣೋಯಿ ವಿದೇಶದಲ್ಲಿದ್ದನು. ಈ ಪ್ರಕರಣ ತನಿಖೆಯನ್ನು ದಾರಿ ತಪ್ಪಿಸಲು ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ತಾನೇ ಹತ್ಯೆ ಮಾಡಿದಾಗಿ ಹಾಕಿಕೊಂಡಿದ್ದ. ಬಳಿಕ ದುಬೈಗೆ ಪರಾರಿಯಾಗಿದ್ದ ಸಚಿನ್​, ಭಾರತ ಮತ್ತು ದುಬೈ ನಡುವೆ ಉತ್ತಮ ಬಾಂಧವ್ಯ ಇರುವುದರಿಂದ ಇಲ್ಲಿ ಬಂಧನ ಸಾಧ್ಯತೆ ಹೆಚ್ಚಿದೆ ಎಂದು ಅಜರ್​ಬೈಜಾನ್​ಗೆ ತೆರಳಿದ್ದ. 2022ರ ಆಗಸ್ಟ್​ ತಿಂಗಳಲ್ಲಿ ಅಜರ್​ಬೈಜಾನ್​ನಲ್ಲಿ ಸಚಿನ್​ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಅಲ್ಲಿ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದ್ದ, ಆದರೆ ನ್ಯಾಯಾಲಯ ಆತನ ಆರ್ಜಿಯನ್ನು ತಿರಸ್ಕರಿಸಿತ್ತು.

ದೆಹಲಿ ವಿಶೇಷ ಪೊಲೀಸ್ ವಿಭಾಗದ ಅಧಿಕಾರಿಗಳು ಸೋಮವಾರ ಆರೋಪಿ ಸಚಿನ್​ನನ್ನು ಕರೆತರಲು ಅಜರ್​ಬೈಜಾನ್​ನ ಬಾಕುವಿಗೆ ತೆರಳಿದ್ದರು. ಇದಕ್ಕೂ ಮೊದಲು ಅಜರ್​ಬೈಜಾನ್​ನ ಪೊಲೀಸ್​ ಅಧಿಕಾರಿಗಳ ಜೊತೆ ದೆಹಲಿ ಪೊಲೀಸರು ಆರೋಪಿಯನ್ನು ಭಾರತಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆಸಿದ್ದರು. ಈ ಸಂಬಂಧ ಆರೋಪಿ ಸಚಿನ್​ ಬಿಷ್ಣೋಯಿಯನ್ನು ಭಾರತಕ್ಕೆ ಕರೆತರಲಾಗಿದೆ. ಆರೋಪಿಯನ್ನು ತಿಹಾರ್​ ಜೈಲಿನಲ್ಲಿ ಇರಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಸಚಿನ್​ ನಕಲಿ ಪಾಸ್​ಪೋರ್ಟ್​ ಬಳಸಿ ಅಜರ್​ಬೈಜಾನ್​ಗೆ ಪರಾರಿಯಾಗಿದ್ದ. ನಕಲಿ ಪಾಸ್​ಪೋರ್ಟ್​ನಲ್ಲಿ ತಿಲಕ್​ರಾಜ್ ಟುಟೆಜಾ ಎಂದು ನಕಲಿ ಹೆಸರು ಮತ್ತು ಸಂಗಮ್​ ವಿಹಾರ್​ ಎಂದು ನಕಲಿ ವಿಳಾಸವನ್ನು ನಮೂದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಆರೋಪಿಯ ಪತ್ತೆಗೆ ಪೊಲೀಸರು ಲುಕ್​ಔಟ್​ ನೋಟಿಸ್​ ಹೊರಡಿಸಿದ್ದರು. ಬಳಿಕ ಸಚಿನ್​ ಅಜರ್​ಬೈಜಾನ್​ಗೆ ಪರಾರಿಯಾಗಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಈ ಬಗ್ಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ವಿದೇಶದಿಂದ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ನಕಲಿ ಪಾಸ್​ಪೋರ್ಟ್​ ಸೃಷ್ಟಿಸುವ ಜಾಲವನ್ನು ಭೇದಿಸಿದಾಗ ಆರೋಪಿ ಸಚಿನ್​ ನಕಲಿ ಪಾಸ್​ ಪೋರ್ಟ್​ನೊಂದಿಗೆ ಪರಾರಿಯಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ : ಸಿಧು ಮೂಸೇವಾಲ ಹತ್ಯೆ ಪ್ರಕರಣ: ಬಹಿರಂಗವಾಯ್ತು ಕಾರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.