ETV Bharat / bharat

2060ರ ಹೊತ್ತಿಗೆ ಉತ್ತರ ಭಾರತದಲ್ಲಿ ಶುದ್ಧ ಜೀವಜಲಕ್ಕೆ ಹಾಹಾಕಾರ: ವರದಿ

author img

By

Published : Aug 16, 2022, 4:22 PM IST

Updated : Aug 16, 2022, 5:10 PM IST

ಹವಾಮಾನ ಬದಲಾವಣೆಯಿಂದ ಮುಂದಿನ ದಶಕಗಳಲ್ಲಿ ಉತ್ತರ ಭಾರತದಲ್ಲಿ ಶುದ್ಧ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ. ಟಿಬೆಟಿಯನ್ ಪ್ರಸ್ಥಭೂಮಿಯ ಕೆಳಭಾಗದ ದಿಕ್ಕಿನಲ್ಲಿ ವಾಸಿಸುವ ಜನರಿಗೆ ನೀರಿನ ಭಾರಿ ಸಂಕಷ್ಟ ಎದುರಾಗುವ ಅನುಮಾನ.

ನೀರಿನ ಕೊರತೆ
water shortage

ಹವಾಮಾನ ಬದಲಾವಣೆಯಿಂದಾಗಿ ಉತ್ತರ ಭಾರತದ ಭಾಗಗಳು 2060 ರ ವೇಳೆಗೆ ಶುದ್ಧನೀರಿನ ಲಭ್ಯತೆಯ ವಿಷಯದಲ್ಲಿ ಭಾರಿ ಕೊರತೆ ಎದುರಿಸಬಹುದು ಎಂದು ಅಧ್ಯಯನವೊಂದು ಎಚ್ಚರಿಸಿದೆ. ಏಷ್ಯಾದ "ನೀರಿನ ಗೋಪುರ" ಎಂದೇ ಕರೆಯಲ್ಪಡುವ ಟಿಬೆಟಿಯನ್ ಪ್ರಸ್ಥಭೂಮಿಯು ಮತ್ತು ಅದರ ಕೆಳಭಾಗದ ದಿಕ್ಕಿನಲ್ಲಿ ವಾಸಿಸುವ ಸುಮಾರು 200 ಕೋಟಿ ಜನರಿಗೆ ಸಿಹಿನೀರನ್ನು ಪೂರೈಸುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಉಲ್ಲೇಖಿಸಿದೆ.

ನೇಚರ್ ಕ್ಲೈಮೇಟ್ ಚೇಂಜ್ ಜರ್ನಲ್‌ನಲ್ಲಿ ಸೋಮವಾರ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ದುರ್ಬಲ ಹವಾಮಾನ ನಿರ್ವಹಣಾ ನೀತಿಯ ಸನ್ನಿವೇಶದಲ್ಲಿ, ಹವಾಮಾನ ಬದಲಾವಣೆಯು ಈ ಪ್ರದೇಶದಲ್ಲಿ ಶುದ್ಧನೀರಿನ ಸಂಗ್ರಹಣೆಯಲ್ಲಿ ಬದಲಾಯಿಸಲಾಗದ ಕುಸಿತವನ್ನು ಉಂಟುಮಾಡುತ್ತದೆ ಎಂದು ಅಂದಾಜಿಸಿದೆ. ಇದು ಮಧ್ಯ ಏಷ್ಯಾ ಮತ್ತು ಅಫ್ಘಾನಿಸ್ತಾನಗಳಲ್ಲಿನ ನೀರಿನ ಪೂರೈಕೆಯ ಸಂಪೂರ್ಣ ಕುಸಿತಕ್ಕೆ ಕಾರಣವಾಗಬಹುದು ಮತ್ತು ಶತಮಾನದ ಮಧ್ಯಭಾಗದಲ್ಲಿ ಉತ್ತರ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಪೂರ್ಣ ನೀರು ಪೂರೈಕೆ ಕುಸಿತಕ್ಕೆ ಕಾರಣವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅಮೆರಿಕದ ಪೆನ್ ಸ್ಟೇಟ್‌ನಲ್ಲಿ ವಾಯುಮಂಡಲ ವಿಜ್ಞಾನದ ಹಿರಿಯ ಪ್ರಾಧ್ಯಾಪಕರಾಗಿರುವ ಮೈಕೆಲ್ ಮನ್, ಮುನ್ಸೂಚನೆಯು ಉತ್ತಮವಾಗಿಲ್ಲ. ಮುಂದಿನ ದಶಕಗಳಲ್ಲಿ ಪಳೆಯುಳಿಕೆ ಇಂಧನ ಬಳಸುವುದನ್ನು ಅರ್ಥಪೂರ್ಣವಾಗಿ ಕಡಿಮೆ ಮಾಡಲು ನಾವು ವಿಫಲರಾಗಿ, ಎಂದಿನಂತೆ ನಮ್ಮ ವ್ಯವಹಾರಗಳನ್ನು ಮುಂದುವರೆಸಿದ ಸನ್ನಿವೇಶದಲ್ಲಿ ನೀರಿನ ಲಭ್ಯತೆಯಲ್ಲಿ ಇಂಥ ಕುಸಿತವನ್ನು ನಿರೀಕ್ಷಿಸಬಹುದು. ಅಂದರೆ ಟಿಬೆಟಿಯನ್ ಪ್ರಸ್ಥಭೂಮಿಯ ಕೆಳಗಿನ ಭಾಗಗಳಲ್ಲಿ ಸುಮಾರು ಶೇಕಡಾ 100 ರಷ್ಟು ನೀರಿನ ಲಭ್ಯತೆ ನಷ್ಟವಾಗಬಹುದು ಎಂದು ತಿಳಿಸಿದ್ದಾರೆ.

ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿರುವ ನೀರಿನ ಸಂಗ್ರಹಣೆಯ ಪ್ರಾಮುಖ್ಯತೆಯ ಹೊರತಾಗಿಯೂ ಹಿಂದಿನ ಮತ್ತು ಭವಿಷ್ಯದ ಭೂಮಿಯ ನೀರಿನ ಸಂಗ್ರಹಣೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಹೆಚ್ಚಾಗಿ ತಿಳಿಯಲಾಗಿಲ್ಲ. ಟಿಬೆಟಿಯನ್ ಪ್ರಸ್ಥಭೂಮಿಯು ಸುಮಾರು 2 ಶತಕೋಟಿ ಜನರ ನೀರಿನ ಬೇಡಿಕೆಯ ಗಣನೀಯ ಭಾಗವನ್ನು ಪೂರೈಸುತ್ತದೆ ಎಂದು ಚೀನಾದ ಸಿಂಗುವಾ ವಿಶ್ವವಿದ್ಯಾಲಯದ ಜಲವಿಜ್ಞಾನ ಎಂಜಿನಿಯರಿಂಗ್‌ನ ಸಹಾಯಕ ಪ್ರಾಧ್ಯಾಪಕ ಡಿ ಲಾಂಗ್ ಹೇಳಿದರು.

ಇತ್ತೀಚಿನ ದಶಕಗಳಲ್ಲಿ ಹವಾಮಾನ ಬದಲಾವಣೆಯು ಟಿಬೆಟಿಯನ್ ಪ್ರಸ್ಥಭೂಮಿಯ ಕೆಲವು ಪ್ರದೇಶಗಳಲ್ಲಿ ಭೂಮಿಯ ನೀರಿನ ಸಂಗ್ರಹ (15.8 ಗಿಗಾಟನ್/ವರ್ಷ) ತೀವ್ರ ಸವಕಳಿಗೆ ಕಾರಣವಾಗಿದೆ ಮತ್ತು ಇತರ ಪ್ರದೇಶಗಳಲ್ಲಿ ಭೂಮಿಯ ನೀರಿನ ಸಂಗ್ರಹ (5.6 ಗಿಗಾಟನ್/ವರ್ಷ) ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಿಮನದಿ ಕರಗುವಿಕೆ, ಹೆಪ್ಪುಗಟ್ಟಿದ ನೀರು ಕರಗಿದ್ದು ಮತ್ತು ಸರೋವರದ ವಿಸ್ತರಣೆಗಳಿಂದಾಗಿ ಇತರ ಪ್ರದೇಶಗಳಲ್ಲಿ ಭೂಮಿಯ ನೀರಿನ ಸಂಗ್ರಹಣೆ ಹೆಚ್ಚಾಗಿದೆ ಎಂದು ತಿಳಿಯಲಾಗಿದೆ.

Last Updated : Aug 16, 2022, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.