ETV Bharat / bharat

ಯುಪಿ ಬುಲ್ಡೋಜರ್ ಕ್ರಮ ನಿಲ್ಲಿಸಲಾಗದು, ಆದ್ರೆ ಕಾನೂನು ವ್ಯಾಪ್ತಿಯಲ್ಲಿರಬೇಕು: ಸುಪ್ರೀಂಕೋರ್ಟ್

author img

By

Published : Jun 16, 2022, 4:00 PM IST

ಇಂತಹ ಕ್ರಮಗಳು ಕಾನೂನಿನ ವ್ಯಾಪ್ತಿಯಲ್ಲಿರಬೇಕು. ಯುಪಿ ಸರ್ಕಾರಕ್ಕೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯ ನೀಡಲಾಗುತ್ತದೆ. ಆದರೆ, ಈ ಮಧ್ಯೆ ನಾವು ಅರ್ಜಿದಾರರ ಸುರಕ್ಷತೆಯನ್ನು ಖಾತ್ರಿಪಡಿಸಬೇಕಾಗಿದೆ-ಸುಪ್ರೀಂಕೋರ್ಟ್‌

ಉತ್ತರ ಪ್ರದೇಶದಲ್ಲಿ ಯಾರು ಬಾಲ ಬಿಚ್ಚುತ್ತಾರೋ ಅವರ ಮನೆಯ ಮೇಲೆ ಬುಲ್ಡೋಜರ್‌ಗಳನ್ನು ಹತ್ತಿಸುವ ಕ್ರಮ
ಉತ್ತರ ಪ್ರದೇಶದಲ್ಲಿ ಯಾರು ಬಾಲ ಬಿಚ್ಚುತ್ತಾರೋ ಅವರ ಮನೆಯ ಮೇಲೆ ಬುಲ್ಡೋಜರ್‌ಗಳನ್ನು ಹತ್ತಿಸುವ ಕ್ರಮ

ನವದೆಹಲಿ: ಉತ್ತರ ಪ್ರದೇಶದಲ್ಲಿ ಯಾರು ಸಮಾಜಘಾತುಕ, ವಿಧ್ವಂಸಕ ಕೃತ್ಯ ಎಸಗುತ್ತಾರೋ ಅವರ ಆಸ್ತಿಗಳನ್ನು ಬುಲ್ಡೋಜರ್‌ಗಳ ಮೂಲಕ ನಾಶಪಡಿಸುವ ಕಠಿಣ ಕ್ರಮದ ಸಂಬಂಧ ಇಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಿತು. "ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು, ನಿವಾಸಿಗಳಿಗೆ ಅಗತ್ಯವಿರುವ ಪೂರ್ವ ಸೂಚನೆ ನೀಡದೆ ಅವರ ಆಸ್ತಿಗಳನ್ನು ಬುಲ್ಡೋಜರ್​ ಮೂಲಕ ನಾಶ ಮಾಡುತ್ತಿದೆ" ಎಂದು ಆರೋಪಿಸಿ ಜಮಿಯತ್-ಉಲಾಮಾ-ಐ-ಹಿಂದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಯುಪಿ ಸರ್ಕಾರವು ಇನ್ನು ಮುಂದೆಯಾದರೂ ಯಾವುದೇ ರೀತಿಯ ಇಂತಹ ನೆಲಸಮ ಕಾರ್ಯಗಳನ್ನು ಪ್ರಮಾಣಿತ ಕಾನೂನು ವಿಧಾನವನ್ನು ಅನುಸರಿಸದೆ ಕಾರ್ಯಗತಗೊಳಿಸುವುದಿಲ್ಲ ಎಂದು ಭರವಸೆ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಬುಲ್ಡೋಜರ್‌ಗಳನ್ನು ಚಲಾಯಿಸುವ ಮೊದಲು ಸಂಬಂಧಪಟ್ಟ ವ್ಯಕ್ತಿಗಳಿಗೆ ಸೂಚನೆಗಳನ್ನು ನೀಡಿರುವುದಾಗಿ ಯುಪಿ ಸರ್ಕಾರ ಪ್ರತಿವಾದಿಸಿದೆ. "ನಿವಾಸಿಗಳ ಧರ್ಮವನ್ನು ಗುರುತಿಸಿ ಈ ನೆಲಸಮ ಕಾರ್ಯ ನಡೆಸಲಾಗಿಲ್ಲ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. ಅರ್ಜಿಗಳು 'ತಪ್ಪು ಗ್ರಹಿಕೆಗಳು ಮತ್ತು ರಾಜಕೀಯ'ವನ್ನು ಆಧರಿಸಿವೆ ಎಂದು ಅವರು ಕೋರ್ಟ್‌ಗೆ ಮನವರಿಕೆ ಮಾಡಿದರು.

ಬುಲ್ಡೋಜರ್‌ ಹರಿಸಿ ಆಸ್ತಿ ನಾಶದ ಪ್ರಕ್ರಿಯೆಗೆ ಸಂಪೂರ್ಣ ತಡೆಯಾಜ್ಞೆ ನೀಡುತ್ತಿಲ್ಲ ಎಂಬ ವಿಷಯವನ್ನು ಉಲ್ಲೇಖಿಸಿದ ನ್ಯಾಯಾಲಯ, ಇಂತಹ ಕ್ರಮಗಳು ಕಾನೂನಿನ ವ್ಯಾಪ್ತಿಯಲ್ಲಿರಬೇಕು. ಯುಪಿ ಸರ್ಕಾರಕ್ಕೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯ ನೀಡಲಾಗುತ್ತದೆ. ಆದರೆ, ಈ ಮಧ್ಯೆ ನಾವು ಅರ್ಜಿದಾರರ ಸುರಕ್ಷತೆಯನ್ನು ಖಾತ್ರಿಪಡಿಸಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡ ಪೀಠವು ಹೇಳಿದೆ. ಮುಂದಿನ ವಿಚಾರಣೆ ಜೂನ್ 21 ರಂದು ನಡೆಯಲಿದೆ.

ಇದನ್ನೂ ಓದಿ: ಕೇರಳ ಚಿನ್ನಸಾಗಣೆ ಅಕ್ರಮ: ಇಬ್ಬರು ಘಟಾನುಘಟಿ ಸಿಪಿಐ-ಎಂ ನಾಯಕರಿಗೆ ದು'ಸ್ವಪ್ನ'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.