ETV Bharat / bharat

ಸುದ್ದಿ ವಾಹಿನಿಗಳಿಗೆ ಸುಪ್ರೀಂ ಚಾಟಿ: ಸಂಯಮದಿಂದ ವರ್ತಿಸುವುದನ್ನು ಕಲಿಯಲು ಸೂಚನೆ

author img

By

Published : Jan 13, 2023, 9:26 PM IST

ದ್ವೇಷ ಭಾಷಣ ಕುರಿತಾಗಿ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ವಿಚಾರಣೆ ನಡೆಸಿದೆ. ಸುದ್ದಿ ಬಿತ್ತರಿಸುವ ವಿಷಯದಲ್ಲಿ ಸುದ್ದಿ ವಾಹಿನಿಗಳನ್ನೂ ತರಾಟೆಗೆ ತೆಗೆದುಕೊಂಡಿದೆ. ವಾಕ್ ಸ್ವಾತಂತ್ರ್ಯವು ಜವಾಬ್ದಾರಿಯೊಂದಿಗೆ ಬರುತ್ತದೆ ಎಂಬುದನ್ನು ಮಾಧ್ಯಮಗಳು ಅರಿತುಕೊಳ್ಳಬೇಕು ಎಂದು ತಾಕೀತು ಮಾಡಿದೆ.

Supreme Court
ಸುಪ್ರೀಂಕೋರ್ಟ್

ನವದೆಹಲಿ: ಸುದ್ದಿ ವಾಹಿನಿಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ಚಾಟಿ ಬೀಸಿದೆ. ಜನರ ಮನಸ್ಸನ್ನು ರೂಪಿಸುವ ದೊಡ್ಡ ಸ್ಥಾನವನ್ನು ಮಾಧ್ಯಮಗಳು ಹೊಂದಿದ್ದು, ಹೇಗೆ ಸಂಯಮದಿಂದ ಇರಬೇಕೆಂಬುವುದನ್ನು ಕಲಿಯಬೇಕೆಂದು ಸರ್ವೋಚ್ಛ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು ಸುದ್ದಿ ವಾಹಿನಿಗಳ ನಡೆಯನ್ನು ತುಂಬಾ ಅಪಾಯಕಾರಿ ಎಂದೂ ಅಸಮಾಧಾನ ವ್ಯಕ್ತಪಡಿಸಿದೆ.

ಧರ್ಮ ಸಂಸದ್ ಭಾಷಣ, ತಬ್ಲೀಘಿ ಜಮಾತ್‌ ಅಪರಾಧೀಕರಣ ಸೇರಿದಂತೆ ದ್ವೇಷ ಭಾಷಣವನ್ನು ತಡೆಯಲು ಸಾಮಾನ್ಯ ನಿರ್ದೇಶನಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿದೆ. ಟಿವಿಗಳು ಸುದ್ದಿಗಳನ್ನು ಭಾವೋದ್ರೇಕಗೊಳಿಸುತ್ತವೆ. ಜನರು ಅವರಿಗೆ ಬಡಿಸಿರುವುದನ್ನು ಸೇವಿಸುತ್ತಾರೆ. ಅದರಂತೆ ತಮ್ಮ ಜೀವನವನ್ನು ಜನತೆ ರೂಪಿಸಿಕೊಳ್ಳುತ್ತಾರೆ ಎಂದು ನ್ಯಾಯಪೀಠ ಹೇಳಿದೆ.

ವಾಕ್ ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಬರುತ್ತದೆ. ತಮ್ಮ ಮನಸ್ಸಿಗೆ ತೋಚಿದಂತೆ ಮಾತನಾಡುವ ಹಕ್ಕು ಹೊಂದಿಲ್ಲ ಎಂಬುದನ್ನು ಮಾಧ್ಯಮಗಳು ಅರಿತುಕೊಳ್ಳಬೇಕು. ಸ್ವಾತಂತ್ರ್ಯದ ಸಮಸ್ಯೆ ಏನೆಂದರೆ, ಸುದ್ದಿಯಲ್ಲಿ ಏನನ್ನು ತೋರಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ವ್ಯತ್ಯಾಸವನ್ನು ಕಂಡುಕೊಳ್ಳಲು ಅವರು ಸಾಕಷ್ಟು ಪ್ರಬುದ್ಧರಾಗಿದ್ದಾಗಿ ಇದ್ದಾರೆಯೇ ಎಂಬುವುದೇ ಈಗಿನ ದೊಡ್ಡ ಪ್ರಶ್ನೆಯಾಗಿದೆ ಎಂದು ನ್ಯಾ.ಜೋಸೆಫ್ ಹೇಳಿದರು.

ಈ ಸ್ವಾತಂತ್ರ್ಯವನ್ನು ಅಜೆಂಡಾದೊಂದಿಗೆ ಚಲಾಯಿಸಿದರೆ, ನೀವು ನಿಜವಾಗಿ ಜನರಿಗೆ ಸೇವೆ ಸಲ್ಲಿಸುತ್ತಿಲ್ಲ ಎಂದೇ ಅರ್ಥವಾಗುತ್ತಿದೆ. ಜೊತೆಗೆ ನೀವು ಬೇರೆ ಯಾವುದೋ ಕಾರಣಕ್ಕಾಗಿ ಬೇರೆಯವರ ಸೇವೆ ಮಾಡುತ್ತಿದ್ದೀರಾ ಎಂದು ದ್ವೇಷ ಹರಡುವ ಸುದ್ದಿ ವಾಹಿನಿಗಳ ವಿರುದ್ಧ ಕಿಡಿಕಾರಿದರು. ಇದೇ ವೇಳೆ, ಇಡೀ ವಿಷಯದಲ್ಲಿ ಹಣದ ವಿಚಾರ ಸಹ ಬಹಳ ಪ್ರಭಾವ ಬೀರುವಂತೆ ಕಾಣುತ್ತಿದೆ, ಇದನ್ನು ಯಾರು ನಿರ್ದೇಶಿಸುತ್ತಾರೆ. ಅಂತಿಮವಾಗಿ ಎಲ್ಲವೂ ಟಿಆರ್‌ಪಿಗಳ ಮೇಲೆ ನಡೆಯುತ್ತಿವೆ. ಇದೇ ಮೂಲಭೂತ ಸಮಸ್ಯೆ ಮತ್ತು ದುರದೃಷ್ಟಕರ ಸಂಗತಿಯಾಗಿದೆ. ಇದರ ಬಗ್ಗೆ ಏನೂ ಮಾಡಲಾಗುತ್ತಿಲ್ಲ ಎಂದು ನ್ಯಾ.ಜೋಸೆಫ್ ಕಳವಳ ವ್ಯಕ್ತಪಡಿಸಿದರು.

ಎಚ್ಚರಿಕೆಯಿಂದ ನಿರ್ವಹಿಸಬೇಕು: ಟಿವಿ ಇತರ ಮಾಧ್ಯಮಗಳಿಗಿಂತ ಹೆಚ್ಚು ವೇಗವಾಗಿ ಗ್ರಹಿಕೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಕಾರ್ಯಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಇದಕ್ಕಾಗಿ ಬಲವಾದ ಸಂದೇಶವನ್ನು ರವಾನಿಸಲು ಏನಾದರೂ ಮಾಡಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಟಿವಿ ಕಾರ್ಯಕ್ರಮಗಳಲ್ಲಿ ಒಬ್ಬರಿಗೆ ಮಾತನಾಡಲು ಅವಕಾಶ ಸಿಗುತ್ತದೆ. ಇನ್ನೊಂದು ಕಡೆಯವರೆಗೆ ಅವಕಾಶ ಇರುವುದಿಲ್ಲ. ಇದಕ್ಕೆ ಅನೇಕ ಬಾರಿ ಆ್ಯಂಕರ್​ಗಳು ಕಾರಣವಾಗುತ್ತಾರೆ ಎಂದೂ ಟೀಕಿಸಿದೆ.

ಇಷ್ಟೇ ಅಲ್ಲ, ನ್ಯಾ.ಜೋಸೆಫ್ ಅವರು ಅಮೆರಿಕ ಮತ್ತು ಬ್ರಿಟನ್​​​ ಉದಾಹರಣೆಗಳನ್ನು ಉಲ್ಲೇಖಿಸಿ, ಆ ಎರಡು ರಾಷ್ಟ್ರಗಳಲ್ಲಿ ಜನ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಜೊತೆಗೆ ಅಷ್ಟೇ ಪರಿಣಾಮಗಳನ್ನು ಎದುರಿಸುತ್ತಾರೆ. ಆದರೆ, ನಮ್ಮ ದೇಶದಲ್ಲಿ ನಮಗೆ ವಿವಿಧ ರೀತಿಯ ಸಮಸ್ಯೆಗಳಿವೆ. ನಾವು ಅವರಂತೆ ಅಸಹಾಯಕರಲ್ಲ. ಸರ್ಕಾರದ ಅಸಂಬದ್ಧವಲ್ಲದ ಮನೋಭಾವ ಮತ್ತು ಶುದ್ಧ ಹೃದಯದಿಂದ ಬದಲಾವಣೆಯನ್ನು ತರಬಹುದು ಎಂದು ತಿಳಿಸಿದರು.

ವರದಿ ಸಲ್ಲಿಸಲು ರಾಜ್ಯಗಳಿಗೆ ಸೂಚನೆ: ಉತ್ತರಾಖಂಡ ಮತ್ತು ದೆಹಲಿಯಲ್ಲಿ ದ್ವೇಷ ಭಾಷಣದ ಕುರಿತ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಉಭಯ ರಾಜ್ಯಗಳಿಗೆ ನ್ಯಾಯಪೀಠ ಸೂಚಿಸಿದೆ. ದ್ವೇಷದ ಭಾಷಣಗಳನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದರ ಕುರಿತು ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿದೆ. ಈ ಬಗ್ಗೆ ಮುಂದಿನ ಒಂದು ತಿಂಗಳ ನಂತರ ಸುಪ್ರೀಂನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಜನವರಿ 31ರಿಂದ ಸಂಸತ್ತಿನ ಅಧಿವೇಶನ: ಫೆಬ್ರವರಿ 1ಕ್ಕೆ ವಿತ್ತ ಸಚಿವರಿಂದ ಬಜೆಟ್​ ಮಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.