ETV Bharat / bharat

ಜಯಲಲಿತಾ ಸಾವಿನ ವರದಿ.. ನನ್ನ ವಿರುದ್ಧದ ಆರೋಪ ಸುಳ್ಳು, ತನಿಖೆಗೆ ಸಿದ್ಧ: ಶಶಿಕಲಾ

author img

By

Published : Oct 19, 2022, 7:23 AM IST

ಜಯಲಲಿತಾ ಸಾವಿನ ಕುರಿತಾಗಿ ಆರುಮುಘಸ್ವಾಮಿ ವರದಿಯಲ್ಲಿ ತಮ್ಮ ವಿರುದ್ಧ ಕೇಳಿಬಂದ ಆರೋಪವನ್ನು ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಅವರು ನಿರಾಕರಿಸಿದ್ದಾರೆ. ನಾನು ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ.

sasikala-denies-arumughaswamy-committees-allegations
ವರದಿಯ ಆರೋಪ ತಳ್ಳಿಹಾಕಿದ ಶಶಿಕಲಾ

ಚೆನ್ನೈ (ತಮಿಳುನಾಡು): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಹಿಂದೆ ಸ್ನೇಹಿತೆ ಶಶಿಕಲಾ ಸೇರಿ ಹಲವರ ಕೈವಾಡವಿರುವ ಬಗ್ಗೆ ತನಿಖೆ ನಡೆಸಲು ಆರುಮುಘಸ್ವಾಮಿ ಆಯೋಗ ಶಿಫಾರಸು ಮಾಡಿದ್ದನ್ನು ಶಶಿಕಲಾ ಅವರು ಆಕ್ಷೇಪಿಸಿದ್ದಾರೆ. ಅಲ್ಲದೆ, "ತಮ್ಮ ವಿರುದ್ಧ ವರದಿಯಲ್ಲಿ ವಿನಾಕಾರಣ ಆರೋಪ ಮಾಡಲಾಗಿದೆ" ಎಂದು ಹೇಳಿದ್ದಾರೆ.

ಎಐಎಡಿಎಂಕೆ ಅಧಿನಾಯಕಿ ಜೆ ಜಯಲಲಿತಾ ಅವರ ಸಾವಿನ ಕುರಿತು ನಿವೃತ್ತ ನ್ಯಾಯಮೂರ್ತಿ ಆರುಮುಘಸಾಮಿ ಅವರ ಏಕಸದಸ್ಯ ಆಯೋಗವು 5 ವರ್ಷಗಳ ನಂತರ ತನ್ನ ವರದಿಯನ್ನು ತಮಿಳುನಾಡು ಸರ್ಕಾರಕ್ಕೆ ಸಲ್ಲಿಸಿತು. ಇದನ್ನು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಇದರಲ್ಲಿ ಶಶಿಕಲಾ, ಕುಟುಂಬ ವೈದ್ಯ ಕೆ ಎಸ್ ಶಿವಕುಮಾರ್, ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ಅಂದಿನ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ಅವರಿಂದ ಲೋಪವಾಗಿದೆ. ಇವರ ವಿರುದ್ಧ ವಿಸ್ತೃತ ತನಿಖೆ ನಡೆಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ, "ವರದಿಯಲ್ಲಿ ನನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನು ನಿರಾಕರಿಸುತ್ತೇನೆ. ಜಯಲಲಿತಾ ಅವರ ವೈದ್ಯಕೀಯ ಚಿಕಿತ್ಸೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಈ ಕುರಿತು ವಿಚಾರಣೆ ಎದುರಿಸಲು ನಾನು ಸಿದ್ಧ" ಎಂದು ಅವರು ತಿಳಿಸಿದರು.

2016 ರ ಡಿಸೆಂಬರ್​ನಲ್ಲಿ ಜಯಲಲಿತಾ ಅವರ ನಿಧನ ತಮಿಳುನಾಡು ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಅವರ ಸಾವಿನ ಕಾರಣ ಮತ್ತು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆಯೇ ಅನುಮಾನ ಮೂಡಿಸಿತ್ತು. ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್​ಸೆಲ್ವಂ ಮನವಿ ಮಾಡಿದ್ದರು. ಹೀಗಾಗಿ ನಿವೃತ್ತ ನ್ಯಾ.ಆರುಮುಘಸ್ವಾಮಿ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು.

ವರದಿಯಲ್ಲೇನಿದೆ: ಆರುಮುಘಸ್ವಾಮಿ ಆಯೋಗ ಸಲ್ಲಿಸಿದ ವರದಿಯಲ್ಲಿ, ವೈದ್ಯಕೀಯ ಲೋಪವಾಗಿದೆ ಎಂಬ ಗಂಭೀರ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಜಯಲಲಿತಾ ಅವರ ಅನಾರೋಗ್ಯಕ್ಕೀಡಾದಾಗ ಯಾವ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ಏನಾಗಿತ್ತು ಎಂಬುದರ ಬಗ್ಗೆ ಗೌಪ್ಯವಾಗಿಡಲಾಗಿದೆ. ಇದಕ್ಕೆ ಕಾರಣ ಏನೆಂಬುದು ನಿಗೂಢವಾಗಿದೆ.

ಚಿಕಿತ್ಸೆ ನೀಡಿದ ವೈದ್ಯರು ಕೂಡ ಇದನ್ನು ಬಹಿರಂಗಪಡಿಸಿಲ್ಲ. ಸರ್ಜರಿ ಮಾಡಬೇಕಾದ ಅಗತ್ಯವಿದ್ದರೂ ಮಾಡದೇ ಇರುವುದಕ್ಕೆ ಕಾರಣ ಗೊತ್ತಾಗಿಲ್ಲ. ಇಂತಹ ಹಲವಾರು ವೈದ್ಯಕೀಯ ದೋಷಗಳು ಕಂಡುಬಂದಿವೆ. ಇದಕ್ಕೆ ನೇರವಾಗಿ ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ, ಕುಟುಂಬ ವೈದ್ಯರಾದ ಕೆ ಎಸ್ ಶಿವಕುಮಾರ್, ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ಅಂದಿನ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ಅವರೇ ಕಾರಣರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಆರುಮುಘಸಾಮಿ ಅವರು 608 ಪುಟಗಳ ಅಂತಿಮ ವರದಿಯನ್ನು ತಮಿಳಿನಲ್ಲಿ ಮತ್ತು 500 ಪುಟಗಳ ವರದಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 159ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಲಾಗಿದೆ.

ಓದಿ: ಶಶಿ ತರೂರ್ vs ಮಲ್ಲಿಕಾರ್ಜುನ ಖರ್ಗೆ: ಫಲಿತಾಂಶಕ್ಕೆ ಕ್ಷಣಗಣನೆ, ಕಾಂಗ್ರೆಸ್​ಗೆ ಇಂದು ನೂತನ ಸಾರಥಿ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.