ETV Bharat / bharat

ರಿಷಬ್​ ಪಂತ್ ಆರೋಗ್ಯದಲ್ಲಿ ಸುಧಾರಣೆ: ಐಸಿಯುನಿಂದ ಖಾಸಗಿ ವಾರ್ಡ್‌ಗೆ ಶಿಫ್ಟ್​​

author img

By

Published : Jan 2, 2023, 10:41 AM IST

Updated : Jan 2, 2023, 1:19 PM IST

ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಷಬ್​ ಪಂತ್ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದೆ.

rishabh pant
ರಿಷಭ್​ ಪಂತ್

ಉತ್ತರಾಖಂಡ್: ರಾಜಧಾನಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟರ್ ರಿಷಬ್ ಪಂತ್ ಆರೋಗ್ಯದ ಕುರಿತು ಗುಡ್​ ನ್ಯೂಸ್ ಸಿಕ್ಕಿದೆ. ಪಂತ್ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರನ್ನು ಇದೀಗ ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಪಂತ್ ಆರೋಗ್ಯದಲ್ಲಿ ಚೇತರಿಕೆ ಉಂಟಾಗಿದೆ. ಅವರ ಕಾಲಿನ ಅಸ್ಥಿರಜ್ಜು ಚಿಕಿತ್ಸೆಯ ಕುರಿತು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಭಾನುವಾರ ಮ್ಯಾಕ್ಸ್ ಆಸ್ಪತ್ರೆಗೆ ಸಿಎಂ ಧಾಮಿ ಭೇಟಿ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ರಿಷಬ್ ಪಂತ್ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಬಳಿಕ ಸುಮಾರು ಒಂದು ಗಂಟೆ ಕಾಲ ಪಂತ್ ತಾಯಿ ಸರೋಜ್ ಪಂತ್ ಹಾಗೂ ಸಹೋದರಿ ಸಾಕ್ಷಿ ಜೊತೆ ಮಾತುಕತೆ ನಡೆಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಇದೇ ವೇಳೆ ರಿಷಬ್​ ಪಂತ್ ಬಗ್ಗೆ ಚಿಂತಿಸಬೇಡಿ, ಸರ್ಕಾರ ಅವರ ಚಿಕಿತ್ಸೆಗೆ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ಕೊಟ್ಟಿದ್ದರು.

ರಿಷಬ್​ ಪಂತ್ ಚಿಕಿತ್ಸೆಗೆ ಧಾಮಿ ತೃಪ್ತಿ: ಪಂತ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯ ಕುರಿತು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಚಿಕಿತ್ಸೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗ ರಿಷಭ್​​​ ಪಂತ್​ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ಡೆಹ್ರಾಡೂನ್​ ಆಸ್ಪತ್ರೆಗೆ ಶಿಫ್ಟ್​

ಬಸ್​ ಚಾಲಕ, ನಿರ್ವಾಹಕನಿಗೆ ಗೌರವ: ಅಪಘಾತ ಸಂಭವಿಸಿದ ತಕ್ಷಣ ಪಂತ್​ ರಕ್ಷಣೆಗೆ ಧಾವಿಸಿ ಅವರ ಜೀವ ಉಳಿಸಲು ಸಹಾಯ ಮಾಡಿದ ಹರಿಯಾಣ ರಸ್ತೆ ಸಾರಿಗೆ ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ನಿರ್ವಾಹಕ ಪರಮ್‌ಜಿತ್ ಅವರನ್ನು ಬರುವ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಇದೇ ವೇಳೆ ಉತ್ತರಾಖಂಡ್ ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ: ಪಂತ್‌ ಪ್ರಾಣ ರಕ್ಷಿಸಿದ ಬಸ್‌ ಚಾಲಕ, ನಿರ್ವಾಹಕನನ್ನು ಗೌರವಿಸಲಿದೆ ಉತ್ತರಾಖಂಡ್ ಸರ್ಕಾರ

ಡಿಸೆಂಬರ್ 30 ರಂದು ಸಂಭವಿಸಿದ್ದ ರಸ್ತೆ ಅಪಘಾತ: ಡಿಸೆಂಬರ್ 30 ರಂದು ಬೆಳಗ್ಗೆ 5 ಗಂಟೆಗೆ ಕ್ರಿಕೆಟರ್​ ರಿಷಬ್​ ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಬರುತ್ತಿದ್ದರು. ರೂರ್ಕಿ ಬಳಿಯ ನರ್ಸನ್ ಪ್ರದೇಶದಲ್ಲಿ ಗುಂಡಿ ತಪ್ಪಿಸಲು ಹೋದಾಗ ರಿಷಬ್​ ಕಾರು ಅಪಘಾತಕ್ಕೀಡಾಗಿತ್ತು. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬಳಿಕ ಅವರನ್ನು ರೂರ್ಕಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಂತ್ ಗಂಭೀರ ಸ್ಥಿತಿ ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನ ಹೈಯರ್ ಸೆಂಟರ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರ ಆರೋಗ್ಯದ ಸ್ಥಿತಿಯು ಸಹ ಮೊದಲಿಗಿಂತ ಉತ್ತಮವಾಗಿದೆ ಎಂದು ತಿಳಿದುಬಂದಿದೆ.

Last Updated :Jan 2, 2023, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.