ETV Bharat / bharat

2023ರ ಕಹಿ ಘಟನೆ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತ

author img

By ETV Bharat Karnataka Team

Published : Dec 22, 2023, 8:47 AM IST

2023ರ ಕಹಿ ಘಟನೆಯನ್ನು ನೆನಪಿಸಿಕೊಂಡಾಗ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಜೂನ್ 2ರಂದು ಸಂಭವಿಸಿದ್ದ ತ್ರಿವಳಿ ರೈಲು ದುರಂತ ನೆನಪಾಗುತ್ತದೆ.

triple train tragedy
ತ್ರಿವಳಿ ರೈಲು ದುರಂತ

ಹೈದರಾಬಾದ್​: ಜೂನ್ 2ರಂದು ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಸಮೀಪ ತ್ರಿವಳಿ ರೈಲು ದುರಂತ ಸಂಭವಿಸಿತ್ತು. ದೇಶದ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಈ ಅಪಘಾತ ಪ್ರಕರಣ ಕೂಡ ಒಂದಾಗಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಸರಕು ರೈಲಿಗೆ ಗುದ್ದಿತ್ತು. ನಂತರ ಇದರ ಕೆಲವು ಹಳಿತಪ್ಪಿದ ಕೋಚ್‌ಗಳು ಪಕ್ಕದ ಹಳಿಗಳ ಮೇಲೆ ಬಿದ್ದಿದ್ದವು. ಇದರಿಂದ ಎದುರಿಗೆ ಬರುತ್ತಿದ್ದ ಯಶವಂತಪುರ - ಹೌರಾ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 296 ಜನರು ಸಾವನ್ನಪ್ಪಿದ್ದರೆ, 1,200ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ದುರಂತ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಜೂನ್ 3 ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೈನ್​ ಅವರು, ಬ್ರೀಫಿಂಗ್‌ನಲ್ಲಿ ಒಂದು ಜನರಲ್ ಕೋಚ್ ಹಾನಿಗೊಳಗಾದರೆ ಮತ್ತೊಂದು ಕೋಚ್ ಅದರ ಮೇಲೆ ಹತ್ತಿದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಸಮಯ ತೆಗೆದುಕೊಳ್ಳುತ್ತಿದೆ. ಕನಿಷ್ಠ 233 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 900 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾಲಸೋರ್, ಮಯೂರ್‌ಭಂಜ್, ಕಟಕ್ ಎಸ್‌ಸಿಬಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪ್ರಾಥಮಿಕ ವರದಿ ಆಧರಿಸಿ ಮಾಹಿತಿ ನೀಡಿದ್ದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜೂನ್ 3 ರಂದು ಸ್ಥಳಕ್ಕೆ ಭೇಟಿ ನೀಡಿದ್ದರು. ವೈಷ್ಣವ್ ಅವರು ಕಟಕ್, ಭುವನೇಶ್ವರ್ ಮತ್ತು ಕೋಲ್ಕತ್ತಾದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರು. ಭಾರತೀಯ ರೈಲ್ವೆ ಈಗಾಗಲೇ ಪರಿಹಾರ ಘೋಷಣೆಗಳನ್ನು ಮಾಡಿದೆ ಮತ್ತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು. ಅಷ್ಟೇ ಅಲ್ಲ ಇಡೀ ರಕ್ಷಣಾ ಕಾರ್ಯಾಚರಣೆ ಮುಗಿಯುವರೆಗೂ ಸ್ಥಳದಲ್ಲೇ ಇದ್ದು, ಹಳಿ ದುರಸ್ತಿ ಬಳಿಕ ಮೊದಲ ಟ್ರೈನ್​ ಸಂಚಾರ ಆರಂಭಿಸಿಯೇ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು.

ಜೂನ್ 3 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ದುಮುರ್ಜಾಲಾದ ಹೌರಾ ಜಿಲ್ಲೆಯ ಹೆಲಿಪ್ಯಾಡ್‌ನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೊರಟು ಬಾಲಸೋರ್‌ಗೆ ತೆರಳಿದ್ದರು. ಅಪಘಾತದ ಸ್ಥಳದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಮಾತಿನ ಚಕಮಕಿ ನಡೆಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 3 ರಂದು ಪರಿಶೀಲನಾ ಸಭೆ ನಡೆಸಿದರು. ಇದಾದ ಇಂದು ದಿನದ ನಂತರ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದರು. ಪರಿಶೀಲನಾ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ರೈಲ್ವೆ ಸಚಿವಾಲಯ, ಪಿಎಂಒ ಮತ್ತು ಎನ್‌ಡಿಆರ್‌ಎಫ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಜೂನ್ 4 ರಂದು ಅಶ್ವಿನಿ ವೈಷ್ಣವ್ ಅವರು ರೈಲು ದುರಂತದ ಮೂಲ ಕಾರಣವನ್ನು ಕಂಡುಹಿಡಿಯಲಾಗಿದೆ ಎಂದು ತಿಳಿಸಿದ್ದರು. ಅದಕ್ಕೆ ಕಾರಣರಾದವರನ್ನು ಗುರುತಿಸಿದ್ದೇವೆ ಎಂದು ಹೇಳಿದ್ದರು. ನಂತರ ರೈಲ್ವೆ ಮಂಡಳಿ ಈ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಈ ಮಧ್ಯೆ, ಮೃತ ದೇಹಗಳು ಗುರುತಿಸಲಾಗದಷ್ಟು ವಿರೂಪಗೊಂಡಿದ್ದರಿಂದ 150 ಕ್ಕೂ ಹೆಚ್ಚು ಮಂದಿಯ ಸಂರಕ್ಷಿಸಲ್ಪಟ್ಟ ಮೃತ ದೇಹಗಳನ್ನು ಗುರುತಿಸುವಲ್ಲಿ ಒಡಿಶಾ ಸರ್ಕಾರವು ದೊಡ್ಡ ಸವಾಲನ್ನು ಎದುರಿಸಿತು.

51 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಸಂಚಾರ ಮರು ಆರಂಭ: ಮಾರಣಾಂತಿಕ ಅಪಘಾತದ ಬಳಿಕ ಸುಮಾರು 51 ಗಂಟೆಗಳ ಕಾರ್ಯಾಚರಣೆಯ ನಂತರ ಜೂನ್ 5 ರಂದು ರೈಲು ಮಾರ್ಗದಲ್ಲಿ ತನ್ನ ಪ್ರಯಾಣವನ್ನು ಮರು ಪ್ರಾರಂಭಿಸಿತು. ಜೂನ್ 9 ರಂದು ರೈಲ್ವೆ ಸಚಿವಾಲಯವು 661 ಸಂತ್ರಸ್ತರ ಕುಟುಂಬಗಳಿಗೆ 22.66 ಕೋಟಿ ರೂಪಾಯಿ ಪರಿಹಾರವನ್ನು ವಿತರಿಸಿದೆ. ಜೂನ್ 11 ರಂದು ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಅನುಭವಿಗಳನ್ನು ಒಳಗೊಂಡಂತೆ ಪ್ರಮುಖ ನಾಗರಿಕ ಸಮಾಜದ ಸದಸ್ಯರ ಗುಂಪು ಒಡಿಶಾ ರೈಲು ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಪ್ರಗತಿಯನ್ನು ಹಾಳು ಮಾಡುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಒಡಿಶಾ ತ್ರಿವಳಿ ರೈಲು ಅಪಘಾತ ಕೇಸ್​: ಸಿಬಿಐ ಬಂಧಿತ ಮೂವರು ಅಧಿಕಾರಿಗಳು ಸೇರಿ 7 ರೈಲ್ವೆ ನೌಕರರ ಅಮಾನತು

ಈ ಪತ್ರಕ್ಕೆ 270 ಸಹಿದಾರರು ಸಹಿ ಹಾಕಿದ್ದಾರೆ. ಅವರಲ್ಲಿ ಕೆಲವರೆಂದರೆ, ರಾಜಸ್ಥಾನ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಅನಿಲ್ ದಿಯೋ ಸಿಂಗ್, ಗುಜರಾತ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಸ್‌ಎಂ ಸೋನಿ, ಉತ್ತರ ಪ್ರದೇಶದ ಮಾಜಿ ಡಿಜಿಪಿ ವಿಕ್ರಮ್ ಸಿಂಗ್, ಮಹಾರಾಷ್ಟ್ರದ ಮಾಜಿ ಡಿಜಿಪಿ ಪ್ರವೀಣ್ ದೀಕ್ಷಿತ್, ಜೆ & ಕೆ ಮಾಜಿ ಪೊಲೀಸ್ ಮುಖ್ಯಸ್ಥ ಎಸ್‌ಪಿ ವೈದ್ ಮತ್ತು ಮಾಜಿ ಸಿಬಿಐ ನಿರ್ದೇಶಕ ನಾಗೇಶ್ವರ ರಾವ್, ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಯೋಗೇಂದ್ರ ನರೇನ್, ಮಾಜಿ ಆರ್​ಎಡಬ್ಲ್ಯೂ (RAW) ಮುಖ್ಯಸ್ಥ ಸಂಜೀವ್ ತ್ರಿಪಾಠಿ ಮತ್ತು ಮಾಜಿ ಎನ್​ಐಎ ನಿರ್ದೇಶಕ ಯೋಗೇಶ್ ಚಂದರ್ ಮೋದಿ ಸಹ ಸಹಿ ಮಾಡಿದವರಲ್ಲಿ ಸೇರಿದ್ದಾರೆ.

ಜೂನ್ 12 ರಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಸ್ಟೇಷನ್ ಮಾಸ್ಟರ್, ತಂತ್ರಜ್ಞ ಮತ್ತು ಭಾರತೀಯ ರೈಲ್ವೇಯ ಇನ್ನೊಬ್ಬ ಉದ್ಯೋಗಿ ಸೇರಿ ಮೂವರನ್ನು ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು. ಜೂನ್ 16 ರಂದು ಗಾಯಗೊಂಡ ವ್ಯಕ್ತಿಯ ಸಾವಿನೊಂದಿಗೆ ಮೃತರ ಸಂಖ್ಯೆ 290 ಕ್ಕೆ ಏರಿತು.

ಇದನ್ನೂ ಓದಿ : Balasore train tragedy: ಒಡಿಶಾ ತ್ರಿವಳಿ ರೈಲು ದುರಂತ.. ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್​ ಶೀಟ್​

ಜೂನ್ 30 ರಂದು, AIIMS ಭುವನೇಶ್ವರದಲ್ಲಿ ಸಂರಕ್ಷಿಸಲ್ಪಟ್ಟ DNA ಪರೀಕ್ಷೆಗಳ ಮೂಲಕ 29 ದೇಹಗಳನ್ನು ಗುರುತಿಸಲಾಯಿತು ಮತ್ತು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಜುಲೈ 7 ರಂದು ಬಾಲಸೋರ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಸಿಬಿಐ ಬಂಧಿಸಿತ್ತು. ತಂತ್ರಜ್ಞ ಪಪ್ಪು ಕುಮಾರ್, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ಹಿರಿಯ ಸೆಕ್ಷನ್ ಇಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮಹಂತ ಬಂಧಿತರು. ಮೂವರನ್ನು ಐಪಿಸಿ ಸೆಕ್ಷನ್ 304 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ) ಮತ್ತು 201 (ಸಾಕ್ಷ್ಯ ನಾಶ) ಅಡಿ ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.