ETV Bharat / bharat

ರಾಮ ಲಲ್ಲಾ ವಿಗ್ರಹ ಬಾಲ ರಾಮನಂತೆ ಕಾಣುತ್ತಿಲ್ಲ: ದಿಗ್ವಿಜಯ್​ ಸಿಂಗ್

author img

By ETV Bharat Karnataka Team

Published : Jan 19, 2024, 12:59 PM IST

ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಇರಿಸಲಾದ ರಾಮಲಲ್ಲಾ ಪ್ರತಿಮೆಯು ಬಾಲ ರಾಮನಂತೆ ಕಾಣುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

'Ram Lalla idol does not look like a child': Congress' Digvijaya Singh
'Ram Lalla idol does not look like a child': Congress' Digvijaya Singh

ಭೋಪಾಲ್: ಅಯೋಧ್ಯೆ ರಾಮ ಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾ ವಿಗ್ರಹವು ಬಾಲ ರಾಮನ ಥರ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

"ನಾನು ಮೊದಲಿನಿಂದಲೂ ಈ ಮಾತನ್ನು ಹೇಳುತ್ತಿದ್ದೇನೆ. ವಿವಾದಾತ್ಮಕವಾಗಿದ್ದ ಮತ್ತು ನಾಶವಾದ ರಾಮ್ ಲಲ್ಲಾ ವಿಗ್ರಹ ಎಲ್ಲಿದೆ? ಅದರ ಬದಲಿಗೆ ಎರಡನೇ ಪ್ರತಿಮೆಯ ಅಗತ್ಯವೇನಿತ್ತು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಜೀ ಮಹಾರಾಜ್ ಅವರು ರಾಮ ಜನ್ಮಭೂಮಿ ದೇವಾಲಯದಲ್ಲಿ ಭಗವಾನ್ ರಾಮನ ವಿಗ್ರಹವು ಮಗುವಿನ ರೂಪದಲ್ಲಿರಬೇಕು ಮತ್ತು ತಾಯಿ ಕೌಸಲ್ಯನ ಮಡಿಲಲ್ಲಿರಬೇಕು ಎಂದು ಸಲಹೆ ನೀಡಿದ್ದರು. ಆದರೆ ದೇವಾಲಯದಲ್ಲಿ ಕುಳಿತಿರುವ ವಿಗ್ರಹವು ಮಗುವಿನಂತೆ ಕಾಣುತ್ತಿಲ್ಲ" ಎಂದು ಸಿಂಗ್ ಶುಕ್ರವಾರ ಎಕ್ಸ್​ನಲ್ಲಿ ಬರೆದಿದ್ದಾರೆ.

ಜನವರಿ 22ರಂದು ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುನ್ನ ಭಗವಾನ್ ರಾಮನ ವಿಗ್ರಹವನ್ನು ಗುರುವಾರ ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಇರಿಸಲಾಗಿದೆ. ಗುರುವಾರ ಗರ್ಭಗುಡಿಯಲ್ಲಿ ನಡೆದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಸುಕು ಧರಿಸಿದ ವಿಗ್ರಹದ ಮೊದಲ ಫೋಟೋ ಬಹಿರಂಗವಾಗಿದೆ.

'ರಾಮ್ ಲಲ್ಲಾ' ವಿಗ್ರಹವನ್ನು ಕರ್ನಾಟಕದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಈ ವಿಗ್ರಹ 51 ಇಂಚು ಎತ್ತರ ಮತ್ತು 1.5 ಟನ್ ತೂಕವಿದೆ. ವಿಗ್ರಹವು ಭಗವಾನ್ ರಾಮನನ್ನು ಕಮಲದ ಮೇಲೆ ನಿಂತಿರುವ ಐದು ವರ್ಷದ ಮಗುವಾಗಿ ಚಿತ್ರಿಸಿದೆ. ಏತನ್ಮಧ್ಯೆ, ಜನವರಿ 22 ರಂದು ನಿಗದಿಯಾಗಿರುವ ರಾಮ ದೇವಾಲಯದ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಸಿದ್ಧತೆಯ ಭಾಗವಾಗಿ ಅಯೋಧ್ಯೆ ನಗರವನ್ನು ಗುರುವಾರ ಆಕರ್ಷಕವಾದ ಹೂವುಗಳಿಂದ ಅಲಂಕರಿಸಲಾಗಿದೆ.

ಇದಕ್ಕೂ ಮುನ್ನ ಮಂಗಳವಾರ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಆರ್​ಎಸ್​ಎಸ್​ಗಳು ಬಾಬರಿ ಮಸೀದಿಯನ್ನು ಕೆಡವಲು ಬಯಸಿದ್ದವೇ ಹೊರತು ಹೊರತು ದೇವಾಲಯ ನಿರ್ಮಿಸಲು ಬಯಸಿರಲಿಲ್ಲ. ಮಸೀದಿ ನೆಲಸಮವಾದರೆ ಮಾತ್ರ ಈ ವಿಚಾರವನ್ನು ಕೋಮು ವಿಷಯವನ್ನಾಗಿಸಬಹುದು ಎಂಬುದೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ ಎಂದಿಗೂ ವಿರೋಧಿಸಿಲ್ಲ. ಆದರೆ ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಬೇಕೆಂಬುದು ನಮ್ಮ ನಿಲುವಾಗಿತ್ತು ಎಂದು ಸಿಂಗ್ ಹೇಳಿದರು.

"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ ಎಂದಿಗೂ ವಿರೋಧಿಸಲಿಲ್ಲ. ವಿವಾದಿತ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ನ್ಯಾಯಾಲಯದ ನಿರ್ಧಾರದವರೆಗೆ ಕಾಯುವಂತೆ ಮಾತ್ರ ನಾವು ಹೇಳಿದ್ದೆವು. ರಾಜೀವ್ ಗಾಂಧಿ ಅವರ ಅವಧಿಯಲ್ಲಿ ವಿವಾದಿತವಲ್ಲದ ಭೂಮಿಯಲ್ಲಿ 'ಭೂಮಿ ಪೂಜೆ' ಸಹ ಮಾಡಲಾಗಿತ್ತು. ನರಸಿಂಹ ರಾವ್ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ವಿವಾದಿತವಲ್ಲದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು" ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

ಇದನ್ನೂ ಓದಿ: ಅಯೋಧ್ಯೆ ದೇಗುಲದ ಗರ್ಭಗುಡಿಯಲ್ಲಿ ಬಾಲ ಶ್ರೀರಾಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.