ETV Bharat / bharat

ಮಂದಿರ ಉದ್ಘಾಟನೆ ಆಹ್ವಾನಿತರಿಗೆ ರಾಮ ಜನ್ಮಭೂಮಿಯ ಪವಿತ್ರ ಮಣ್ಣು, ಸರಯೂ ನದಿ ತೀರ್ಥ

author img

By ETV Bharat Karnataka Team

Published : Jan 13, 2024, 10:51 AM IST

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ರಾಮಜನ್ಮಭೂಮಿಯ ಪವಿತ್ರ ಪ್ರಸಾದವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೀಡಲಿದೆ.

ರಾಮ ಜನ್ಮಭೂಮಿಯ ಪವಿತ್ರ ಮಣ್ಣು
ರಾಮ ಜನ್ಮಭೂಮಿಯ ಪವಿತ್ರ ಮಣ್ಣು

ಅಯೋಧ್ಯೆ (ಉತ್ತರಪ್ರದೇಶ): ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಹ್ವಾನಿತ ಭಕ್ತರಿಗೆ ಶ್ರೀರಾಮಜನ್ಮ ಭೂಮಿಯ ಪವಿತ್ರ ಮಣ್ಣು, ಸರಯೂ ನದಿಯ ತೀರ್ಥ, ದೇಸಿ ತುಪ್ಪದಲ್ಲಿ ತಯಾರಿಸಲಾದ ಲಡ್ಡು ಪ್ರಸಾದವಾಗಿ ನೀಡಲಾಗುತ್ತದೆ.

ಅಡಿಪಾಯ ಅಗೆಯುವ ಸಂದರ್ಭದಲ್ಲಿ ಹೊರತೆಗೆಯಲಾದ ರಾಮ ಜನ್ಮಭೂಮಿಯ ಮಣ್ಣನ್ನು ಪಾಕೆಟ್​ಗಳಲ್ಲಿ ಪ್ಯಾಕ್ ಮಾಡಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳಿಗೆ ನೀಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶುಕ್ರವಾರ ತಿಳಿಸಿದೆ. ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆಯ ರಾಮಮಂದಿರದ 15 ಮೀಟರ್ ಉದ್ದದ ಆಕೃತಿ, ಪವಿತ್ರ ಮಣ್ಣು ಸೇರಿ ವಿವಿಧ ಪ್ರಸಾದವನ್ನು ಉಡುಗೊರೆಯಾಗಿ ನೀಡಲಾಗುವುದು ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

ಆಹ್ವಾನಿತರಿಗೆ ಲಡ್ಡು, ತೀರ್ಥ ಪ್ರಸಾದ: ದಿವ್ಯ ದೇಗುಲದ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರು ಮತ್ತು ಅತಿಥಿಗಳು ಸೇರಿದಂತೆ 11,000 ಕ್ಕೂ ಹೆಚ್ಚು ಭಕ್ತರಿಗೆ ಸ್ಮರಣೀಯ ಉಡುಗೊರೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪವಿತ್ರ ಮಣ್ಣಿನೊಂದಿಗೆ ದೇಸಿ ತುಪ್ಪದಲ್ಲಿ ವಿಶೇಷವಾಗಿ ತಯಾರಿಸಲಾದ 100 ಗ್ರಾಂ ತೂಕದ ಮೋತಿಚೂರ್​ ಲಡ್ಡುಗಳನ್ನು ಪ್ರಸಾದವಾಗಿ ನೀಡಲಾಗುವುದು. ಆಹ್ವಾನಿತರಿಗೆ ನೀಡುವ ಎರಡು ಉಡುಗೊರೆಗಳಲ್ಲಿ ಒಂದರಲ್ಲಿ ಲಡ್ಡು, ಪವಿತ್ರ ತುಳಸಿ ಎಲೆ ಇದ್ದರೆ, ಇನ್ನೊಂದರಲ್ಲಿ ಪವಿತ್ರ ಮಣ್ಣು ಇರುತ್ತದೆ ಎಂದು ಟ್ರಸ್ಟ್ ಹೇಳಿದೆ.

ಇದರ ಜೊತೆಗೆ ಉಡುಗೊರೆ ಬಾಕ್ಸ್​ಗಳಲ್ಲಿ ಸರಯೂ ನದಿಯ ನೀರಿನ ತೀರ್ಥದ ಬಾಟಲಿ, ಗೋರಖ್‌ಪುರದ ಗೀತಾ ಪ್ರೆಸ್ ಒದಗಿಸಿದ ಧಾರ್ಮಿಕ ಪುಸ್ತಕಗಳು ಸಹ ಇರುತ್ತವೆ. ಸಮಾರಂಭಕ್ಕೆ ಆಹ್ವಾನಿತರಾದ ಗಣ್ಯ ವ್ಯಕ್ತಿಗಳು ಮತ್ತು ಅತಿಥಿಗಳನ್ನು ಸ್ವಾಗತಿಸಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಕಲ ಸಿದ್ಧತೆಗಳನ್ನು ಮಾಡಿದೆ.

ಪ್ರಸಾದದ ಪ್ಯಾಕೆಟ್​ನಲ್ಲಿ ಏನಿರುತ್ತೆ : ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತ ಭಕ್ತರಿಗೆ ನೀಡಲಾಗುವ ಪ್ರಸಾದದ ಪ್ಯಾಕೆಟ್​ನಲ್ಲಿ ರಾಮ ಜನ್ಮಭೂಮಿಯ ಮಣ್ಣು, ಸರಯೂ ನದಿಯ ತೀರ್ಥದ ಚಿಕ್ಕ ಬಾಟಲ್​, ಗೋರಖ್‌ಪುರದ ಗೀತಾ ಪ್ರೆಸ್ ಒದಗಿಸಿದ ಧರ್ಮ ಪುಸ್ತಕ, 100 ಗ್ರಾಂ ಮೋಚಿಚೂರ್​ ಲಡ್ಡು ಇರಲಿದೆ.

ಉತ್ತರಪ್ರದೇಶದಿಂದ ಸಾವಿರಾರು ಮೈಲುಗಳಷ್ಟು ದೂರವಿರುವ ಅಮೆರಿಕದಲ್ಲೂ ರಾಮ ನಾಮ ಜಪ ಪ್ರತಿಧ್ವನಿಸುತ್ತಿದೆ. ಅಲ್ಲಿನ 10 ರಾಜ್ಯಗಳಲ್ಲಿ ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆಯ ಮಾಹಿತಿಯುಳ್ಳ 40 ಕ್ಕೂ ಹೆಚ್ಚು ಜಾಹೀರಾತು ಫಲಕಗಳನ್ನು ಹಾಕಲಾಗಿದೆ. ಇವುಗಳನ್ನು ವಿಶ್ವ ಹಿಂದೂ ಪರಿಷತ್​ (ವಿಹೆಚ್​ಪಿ) ಮತ್ತು ಭಾರತೀಯರು ಅಳವಡಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ: ಕಂಚಿ ಪೀಠದಲ್ಲಿ 40 ದಿನ ಪೂಜಾ, ಹವನ ಕಾರ್ಯಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.