ETV Bharat / bharat

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಇಂದು 6 ಮಂದಿ ಅಪರಾಧಿಗಳು ಬಿಡುಗಡೆ ಸಾಧ್ಯತೆ

author img

By

Published : Nov 12, 2022, 4:26 PM IST

Updated : Nov 12, 2022, 4:47 PM IST

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರು ಅಪರಾಧಿಗಳ ಬಿಡುಗಡೆ ಮಾಡುವಂತೆ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸ್ವಾಗತಿಸಿದ್ದಾರೆ.

rajiv-gandhi-assassination-case-6-convicts-will-released-today
ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಇಂದು 6 ಮಂದಿ ಅಪರಾಧಿಗಳು ಬಿಡುಗಡೆ

ಚೆನ್ನೈ(ತಮಿಳುನಾಡು): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನವೆಂಬರ್ 11 ರಂದು ಆದೇಶ ನೀಡಿದ್ದು, ಇಂದು ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಬಂಧೀಖಾನೆ ಇಲಾಖೆ ತಿಳಿಸಿದೆ.

ಹತ್ಯೆ ಪ್ರಕರಣದಲ್ಲಿ 7 ಮಂದಿ ಭಾಗಿಯಾಗಿದ್ದು, 7 ಮಂದಿಯಲ್ಲಿ ಪೆರರಿವಾಳನ್​ ಅವರನ್ನು ಮೇ 18ರಂದು ವಿಶೇಷ ಸೆಕ್ಷನ್ 142 ಅಡಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಅದಾದ ಬಳಿಕ ಉಳಿದ ಆರು ಮಂದಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ನಳಿನಿ ಮತ್ತು ರವಿಚಂದ್ರನ್ ಅದೇ ಸೆಕ್ಷನ್ ಬಳಸಿ ಬಿಡುಗಡೆ ಮಾಡುವಂತೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ಇದೀಗ ಆರು ಅಪರಾಧಿಗಳಾದ ನಳಿನಿ, ರವಿಚಂದ್ರನ್, ಮುರುಗನ್, ರಾಬರ್ಟ್ ಬಯಾಸ್, ಜಯಕುಮಾರ್, ಸಂತನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ವೆಲ್ಲೂರು ಜೈಲಿನಲ್ಲಿದ್ದ ನಳಿನಿ ಹಾಗೂ ತೂತುಕುಡಿ ಜೈಲಿನಲ್ಲಿರುವ ರವಿಚಂದ್ರನ್ ಸದ್ಯ ಪೆರೋಲ್ ಮೇಲಿದ್ದಾರೆ. ಸಂತನ್ ಮತ್ತು ಮುರುಗನ್ ವೆಲ್ಲೂರು ಜೈಲಿನಲ್ಲಿದ್ದು, ಜಯಕುಮಾರ್ ಮತ್ತು ರಾಬರ್ಟ್ ಬಯಾಸ್ ಚೆನ್ನೈ ಪುಝಲ್ ಜೈಲಿನಲ್ಲಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರತಿಗಳನ್ನು ಇ - ಮೇಲ್ ಮೂಲಕ ಸಂಬಂಧಪಟ್ಟ ಜೈಲುಗಳಿಗೆ ಕಳುಹಿಸಿ, ನಂತರ ಕೈದಿಗಳನ್ನು ಬಿಡುಗಡೆ ಮಾಡಲಾಗುಗುತ್ತದೆ. ಆದರೆ, ನಿನ್ನೆ ರಾತ್ರಿ 8 ಗಂಟೆಯಾದರೂ ತೀರ್ಪು ಪ್ರತಿ ಇ-ಮೇಲ್ ಮೂಲಕ ಬಂದಿರದ ಕಾರಣ ನಿನ್ನೆ ಬಿಡುಗಡೆ ಪ್ರಕ್ರಿಯೆ ಜರುಗಿಲ್ಲ. ಹಾಗಾಗಿ ಇಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕಾರಾಗೃಹ ಇಲಾಖೆಯ ನಿಯಮಗಳ ಪ್ರಕಾರ 6 ಗಂಟೆಯ ನಂತರ ಕೈದಿಗಳನ್ನು ಬಿಡುಗಡೆ ಮಾಡುವಂತಿಲ್ಲ. ಸುಪ್ರೀಂಕೋರ್ಟ್ ತೀರ್ಪು ಇ-ಮೇಲ್ ಮೂಲಕ ಸಂಬಂಧಪಟ್ಟ ಕಾರಾಗೃಹಗಳಿಗೆ ತಲುಪಿದ ತಕ್ಷಣ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಎಂ ಕೆ ಸ್ಟಾಲಿನ್​ ಪ್ರತಿಕ್ರಿಯೆ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರು ಅಪರಾಧಿಗಳ ಬಿಡುಗಡೆಯನ್ನು ಸ್ವಾಗತಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಸುಪ್ರೀಂ ಕೋರ್ಟ್​ನ ಈ​ ತೀರ್ಪು ಚುನಾಯಿತ ಸರ್ಕಾರದ ನಿರ್ಧಾರ ಮತ್ತು ನಿರ್ಣಯಗಳನ್ನು ರಾಜ್ಯಪಾಲರು ತಡೆಹಿಡಿಯಬಾರದು ಎಂಬುದಕ್ಕೆ ನಿದರ್ಶನವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಕೇಂದ್ರ-ತಮಿಳುನಾಡು ಸರ್ಕಾರಗಳಿಗೆ ಸುಪ್ರೀಂ ನೋಟಿಸ್​

Last Updated :Nov 12, 2022, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.