ETV Bharat / bharat

ವಿಪಕ್ಷಗಳ ಮೈತ್ರಿಕೂಟದ I.N.D.I.A ಹೆಸರಿಗೆ ಬಿಹಾರ ಸಿಎಂ ನಿತೀಶ್​ಕುಮಾರ್​ ಆಕ್ಷೇಪ, ಬಳಿಕ ಒಪ್ಪಿಗೆ

author img

By

Published : Jul 19, 2023, 2:38 PM IST

ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರಿಟ್ಟಿದ್ದಕ್ಕೆ ಬಿಹಾರ ಸಿಎಂ ನಿತೀಶ್​ಕುಮಾರ್​ ಅವರು ಆಕ್ಷೇಪಿಸಿದ್ದರು. ಬಳಿಕ ಅದನ್ನು ಒಪ್ಪಿಕೊಂಡಿದ್ದಾರೆ.

ಬಿಹಾರ ಸಿಎಂ ನಿತೀಶ್​ಕುಮಾರ್​
ಬಿಹಾರ ಸಿಎಂ ನಿತೀಶ್​ಕುಮಾರ್​

ಪಾಟ್ನಾ (ಬಿಹಾರ) : ಲೋಕಸಭೆ ಚುನಾವಣೆಗೆ ಮೋದಿ ವಿರೋಧಿ ಪಕ್ಷಗಳೆಲ್ಲಾ ಒಂದಾಗಿ ಇಂಡಿಯಾ(I.N.D.I.A) ಕೂಟವನ್ನು ರಚಿಸಿಕೊಂಡಿವೆ. ವಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆ ಆಯೋಜಿಸಿದ್ದ ಬಿಹಾರ ಸಿಎಂ ನಿತೀಶ್​ಕುಮಾರ್​ ಹೊಸದಾಗಿ ರೂಪಿಸಲಾಗಿರುವ ಒಕ್ಕೂಟಕ್ಕೆ I.N.D.I.A ಎಂಬ ಹೆಸರಿಡುವುದನ್ನು ಆಕ್ಷೇಪಿಸಿದ್ದರು. ಉಳಿದ ನಾಯಕರೆಲ್ಲಾ ಈ ಹೆಸರೇ ಯಾಕೆ ಎಂಬುದನ್ನು ವಿವರಿಸಿದ ಬಳಿಕ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನಿತೀಶ್ ಕುಮಾರ್ ಅವರ ಪ್ರಕಾರ, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಡುವುದು ಬೇಡ, ಏಕೆಂದರೆ ಅದರಲ್ಲಿ NDA ಎಂಬ ಅಕ್ಷರಗಳಿವೆ. ಇದು ಬಿಜೆಪಿ ನೇತೃತ್ವದ ಕೂಟಕ್ಕಿಂತಲೂ ಹೆಚ್ಚು ಭಿನ್ನ ಎನಿಸುವುದಿಲ್ಲ ಎಂದು ತಗಾದೆ ತೆಗೆದಿದ್ದರು ಎಂದು ಮೂಲಗಳು ತಿಳಿಸಿವೆ. 26 ವಿಪಕ್ಷಗಳ ಮಹತ್ವದ ಸಭೆಗೂ ಮೊದಲು ನಡೆದ ಅನೌಪಚಾರಿಕ ಸಭೆಯಲ್ಲಿ ಇಂಡಿಯಾ ಎಂಬ ಹೆಸರನ್ನು ಎಲ್ಲ ನಾಯಕರೆದುರು ಪ್ರಸ್ತಾಪಿಸಲಾಗಿತ್ತು. ಎಲ್ಲ ಪಕ್ಷಗಳ ನಾಯಕರಿಂದ ಈ ಹೆಸರಿನ ಬಗ್ಗೆ ಸಲಹೆಗಳನ್ನು ಕೇಳಲಾಯಿತು. ಇದನ್ನು ಎಲ್ಲರೂ ಒಪ್ಪಿಕೊಂಡರೆ, ನಿತೀಶ್​ ಕುಮಾರ್​ ಮಾತ್ರ ಆಕ್ಷೇಪಿಸಿದ್ದರು ಎಂದು ವರದಿಯಾಗಿದೆ.

ಸಭೆಯಲ್ಲಿ ಇಂಡಿಯಾ ಹೆಸರಿನ ಬಗ್ಗೆ ಚರ್ಚೆಗಳು ನಡೆದು ಎಲ್ಲರೂ ಒಪ್ಪಿಗೆ ನೀಡಿದ ಬಳಿಕ, ನಿತೀಶ್ ಕುಮಾರ್ ಅವರು ಸಮ್ಮತಿ ಸೂಚಿಸಿದ್ದಾರೆ. "ನೀವೆಲ್ಲರೂ ಇಂಡಿಯಾ ಪದ ಸರಿಯಾಗಿದೆ ಎನ್ನುತ್ತಿದ್ದೀರಿ, ಅದುವೇ ಇರಲಿ" ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಇಂಡಿಯಾ ಹೆಸರು ಪ್ರಸ್ತಾಪಿಸಿದ್ದು ಮಮತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಪಕ್ಷಗಳ ಮೈತ್ರಿಕೂಟಕ್ಕೆ 'ಇಂಡಿಯಾ' ಎಂಬ ಹೆಸರನ್ನು ಮೊದಲು ಪ್ರಸ್ತಾಪಿಸಿದರು ಎಂದು ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ಮುಖ್ಯಸ್ಥ ತೋಲ್ ತಿರುಮಾವಳವನ್ ತಿಳಿಸಿದ್ದಾರೆ. ದೀರ್ಘ ಚರ್ಚೆಯ ನಂತರ 'Indian National Democratic Inclusive Alliance' ಹೆಸರಿಗೆ ಎಲ್ಲ ನಾಯಕರು ಒಪ್ಪಿಗೆ ಸೂಚಿಸಿದರು ಎಂದರು.

ಮತ್ತೊಂದೆಡೆ, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ಅವರು ಹೇಳುವಂತೆ, ಸಭೆಯ ಚರ್ಚೆಯ ವೇಳೆ ರಾಹುಲ್ ಗಾಂಧಿ ಇಂಡಿಯಾ ಪದವೇಕೆ ಎಂಬುದನ್ನು ಸಮರ್ಥಿಸಿಕೊಂಡರು. “ಇದೊಂದು ಸಾಮೂಹಿಕ ಪ್ರಯತ್ನ. ನಾವೆಲ್ಲರೂ ಒಟ್ಟಿಗೆ ಕುಳಿತು ಹೆಸರುಗಳನ್ನು ನಿರ್ಧರಿಸಿದ್ದೇವೆ. ರಾಹುಲ್ ಗಾಂಧಿ ಅವರು ಇಂಡಿಯಾ ಪದದ ಅರ್ಥ ಮತ್ತು ಲಾಭದ ಬಗ್ಗೆ ವಿವರಿಸಿದರು ಎಂದರು.

ವಿಪಕ್ಷಗಳ ಮುಂದಿನ ಸಭೆಯನ್ನು ಮುಂಬೈನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು. 11 ಸದಸ್ಯರ ಸಮನ್ವಯ ಸಮಿತಿ ರಚಿಸಲಾಗುವುದು. ಸಮಿತಿಯ ಸದಸ್ಯರನ್ನು ಮುಂಬೈನಲ್ಲಿ ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಉಭಯ ಬಣದಲ್ಲಿಲ್ಲದ ಬಿಎಸ್​ಪಿ ಸ್ವತಂತ್ರ ಸ್ಪರ್ಧೆ; ಜೆಡಿಎಸ್​ ಯಾರ ಕಡೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.