ETV Bharat / bharat

ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ..ಅಮಿತಾಭ್ ಬಚ್ಚನ್ ಭೇಟಿಯಾದ ನಿತಿನ್ ಗಡ್ಕರಿ

author img

By

Published : Aug 19, 2022, 11:11 AM IST

ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ನಿನ್ನೆ ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಭೇಟಿ ನೀಡಿ ಜನರಲ್ಲಿ ರಸ್ತೆ ಅಪಘಾತದ ಕುರಿತು ಅರಿವು ಮೂಡಿಸಲು ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ​

NITIN GADKARI
ನಿತಿನ್ ಗಡ್ಕರಿ

ಮುಂಬೈ: ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ನಿನ್ನೆ ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮುಂಬೈ ನಿವಾಸದಲ್ಲಿ ಭೇಟಿ ಮಾಡಿದರು. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಿಷನ್​ ಚಾಂಪಿಯನ್ ಅಭಿಯಾನ​ ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಅಭಿಷೇಕ್ ಬಚ್ಚನ್ ಕೂಡ ಉಪಸ್ಥಿತರಿದ್ದರು.

ನಟ ಅಮಿತಾಭ್​ ಬಚ್ಚನ್ ಮುಂಬೈನ ಸಂಚಾರ ನಿಯಮಗಳ ಬಗ್ಗೆ ಆಗಾಗ್ಗೆ ಕಳವಳ ವ್ಯಕ್ತಪಡಿಸುತ್ತಿರುತ್ತಾರೆ. ಈ ಹಿನ್ನೆಲೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಿಷನ್ ಬಲಪಡಿಸಲು ಗಡ್ಕರಿ ಅಮಿತಾಬ್ ಬಚ್ಚನ್ ಬೆಂಬಲ ಕೋರಿದ್ದಾರೆ. ಈ ಕುರಿತಾದ ಫೋಟೋಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಅಂಕಿ- ಅಂಶಗಳ ಪ್ರಕಾರ, ಯುದ್ಧದಲ್ಲಿ ಸಾವನ್ನಪ್ಪುವರ ಸಂಖ್ಯೆಗಿಂತ ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವವರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ, ರಸ್ತೆ ದುರಂತಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ ಪ್ರಾರಂಭಿಸಿದ್ದು, ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ರಸ್ತೆ ಸುರಕ್ಷತಾ ಜಾಗೃತಿ: ಸೈಕಲ್​ ಏರಿ ಅರಿವು ಮೂಡಿಸುತ್ತಿರುವ ವ್ಯಕ್ತಿ

ರಸ್ತೆ ಅಪಘಾತದ ವರದಿ 2019 ರ ಪ್ರಕಾರ, 2019 ರಲ್ಲಿ ದೇಶದಲ್ಲಿ 4 ಲಕ್ಷ 49 ಸಾವಿರದ 2 ಅಪಘಾತ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ ಬರೋಬ್ಬರಿ 1,51,113 ಜನರು ಸಾವನ್ನಪ್ಪಿದ್ದಾರೆ. 4,51,361 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದವರಲ್ಲಿ 18 ರಿಂದ 60 ರ ವಯೋಮಾನದವರು ಶೇಕಡಾ 84 ರಷ್ಟಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೊಂದು ಅಪಘಾತ ಸಂಭವಿಸುತ್ತಿದೆ.

ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ: ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಮೂಲಕ ರಸ್ತೆ ಬಳಕೆದಾರರಿಗೆ ಅರಿವು ಮೂಡಿಸಲಾಗುತ್ತಿದೆ. ವೇಗದ ಚಾಲನೆ ಮಾಡುವುದು, ಸಂಚಾರ ನಿಯಮ ಉಲ್ಲಂಘಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಗಮನಿಸಲು ಮಾರ್ಗಮಧ್ಯೆ ಚೆಕ್​ ಪಾಯಿಂಟ್​ ನಿರ್ಮಾಣ. ಸಾಮಾನ್ಯ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಕ್ರಮಿಸಿದ ಅಥವಾ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸವಾರರಿಗೆ ದಂಡ, ಸಂಚಾರ ನಿಯಮಗಳ ಕುರಿತು ಚರ್ಚಾ ಸ್ಪರ್ಧೆ, ರಸ್ತೆ ಸುರಕ್ಷತಾ ನಿಯಮಗಳ ಪೋಸ್ಟರ್​ ಅಳವಡಿಕೆ ಸೇರಿದಂತೆ ಹತ್ತು ಹಲವು ವಿದಾನಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಇದನ್ನೂ ಓದಿ: ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಮಾಸ ವೇದಿಕೆಯಾಗಬೇಕು: ಶಾಸಕ ಸಂಜೀವ ಮಠಂದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.