ನೂತನ ಉಪರಾಷ್ಟ್ರಪತಿಯಾಗಿ ಧನಕರ್​ ಆಯ್ಕೆ.. ಕನ್ನಡತಿ ಮಾರ್ಗರೇಟ್​ ಆಳ್ವಗೆ ಸೋಲು

author img

By

Published : Aug 6, 2022, 8:07 PM IST

Updated : Aug 6, 2022, 8:25 PM IST

Jagdeep Dhankar

ನೂತನ ಉಪರಾಷ್ಟ್ರಪತಿ ಆಯ್ಕೆಗೋಸ್ಕರ ನಡೆದ ಚುನಾವಣೆಯಲ್ಲಿ ಎನ್​ಡಿಎ ಬೆಂಬಲಿತ ಅಭ್ಯರ್ಥಿ ಜಗದೀಪ್‌ ಧನಕರ್‌ ಗೆಲುವು ದಾಖಲು ಮಾಡಿದ್ದಾರೆ.

ನವದೆಹಲಿ: ನೂತನ ಉಪರಾಷ್ಟ್ರಪತಿ ಆಯ್ಕೆಗೋಸ್ಕರ ನಡೆದ ಚುನಾವಣೆಯಲ್ಲಿ ಎನ್​ಡಿಎ ಬೆಂಬಲಿತ ಅಭ್ಯರ್ಥಿ ಜಗದೀಪ್‌ ಧನಕರ್‌ ಗೆಲುವು ದಾಖಲು ಮಾಡಿದ್ದು, ದೇಶದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕನ್ನಡತಿ ಮಾರ್ಗರೇಟ್ ಆಳ್ವ ಅವರಿಗೆ ಸೋಲು ಉಂಟಾಗಿದೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 725 ಸದಸ್ಯರು ಮತದಾನ ಮಾಡಿದ್ದು, ಇದರಲ್ಲಿ ಜಗದೀಪ್ ಧನಕರ್​​ ಅವರಿಗೆ 528 ಮತ ಹಾಗೂ ಆಳ್ವ ಅವರಿಗೆ 182 ಮತಗಳು ಬಂದಿವೆ. ಹೀಗಾಗಿ, ಎನ್​ಡಿಎ ಬೆಂಬಲಿತ ಅಭ್ಯರ್ಥಿ ಧನಕರ್​​ ಅವರು ದಾಖಲೆಯ 346 ವೋಟ್​​ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆಂದು ಲೋಕಸಭೆ ಜನರಲ್ ಸೆಕ್ರೆಟರಿ ಉತ್ಪಾಲ್ ಕೆ ಸಿಂಗ್ ತಿಳಿಸಿದರು.

ಪ್ರಸ್ತುತ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದೆ. ಜಗದೀಪ್​ ಧನಕರ್ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಗಸ್ಟ್​ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಾರತದ ನೂತನ ಉಪ ರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆದಿತ್ತು. ಸಂಸತ್ತಿನ ಉಭಯ ಸದನಗಳ ಸದಸ್ಯರು ಮತದಾನ ಮಾಡಿದ್ದಾರೆ. ಉಪರಾಷ್ಟ್ರಪತಿ ಆಯ್ಕೆಗೆ 725 ಸಂಸದರಿಂದ ಮತದಾನವಾಗಿದ್ದು, ಟಿಎಂಸಿ ಸಂಸದರು ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದರು.

ಯಾರಿದು ಜಗದೀಪ್ ಧನಕರ್?​: ವೃತ್ತಿಯಲ್ಲಿ ವಕೀಲರಾಗಿರುವ ಜಗದೀಪ್ ಧನಕರ್​ 1989ರಲ್ಲಿ ರಾಜಕೀಯ ಪ್ರವೇಶ ಮಾಡುತ್ತಾರೆ. ಮೂರು ದಶಕಗಳಿಗೂ ಹೆಚ್ಚು ಸಾರ್ವಜನಿಕ ಸೇವೆಯಲ್ಲಿರುವ ಧನ್ಕರ್​​ 1989ರ ಲೋಕಸಭೆ ಚುನಾವಣೆಯಲ್ಲಿ ಜುಂಜುನು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾರೆ. ಇದಾದ ಬಳಿಕ 1990ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಇವರು ಸೇವೆ ಸಲ್ಲಿಸಿದ್ದು, 1993ರಲ್ಲಿ ಕಿಶನ್​ಗಢ ಕ್ಷೇತ್ರದಿಂದ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು 2019ರಲ್ಲಿ ಪಶ್ಚಿಮ ಬಂಗಾಳ ಗವರ್ನರ್​ ಆಗಿ ನೇಮಕ ಮಾಡಿದ್ದಾರೆ. ಸದಾ ಒಂದಿಲ್ಲೊಂದು ವಿಭಿನ್ನ ಕೆಲಸಗಳ ಮೂಲಕ ಜನತೆಯ ಮನಗೆದ್ದಿರುವ ಇವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಅನೇಕ ವಿಚಾರಗಳಲ್ಲಿ ವಾಕ್ಸಮರ ನಡೆಸಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದರು. 71 ವರ್ಷದ ಜಗದೀಪ್ ಧನಕರ್ ಅವರು ಸಮಾಜವಾದಿ ಹಿನ್ನೆಲೆ ಹೊಂದಿರುವ ರಾಜಸ್ಥಾನದ ಜಾಟ್ ಸಮುದಾಯದ ನಾಯಕರಾಗಿದ್ದಾರೆ.

ಅಭಿನಂಧನೆಗಳ ಸುರಿಮಳೆ: ದೇಶದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್ ಧನಕರ್​​ ಅವರಿಗೆ ಅಭಿನಂದನೆಗಳ ಸುರಿಮಳೆಯಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿರಿ: ಉಪರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಪಾಲ ಜಗದೀಪ್​ ಧನ್ಕರ್ ಕಣಕ್ಕೆ

Last Updated :Aug 6, 2022, 8:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.