ETV Bharat / bharat

ಮಣಿಪುರ ಮಹಿಳೆಯರ ವಿಡಿಯೋ ತನಿಖೆ ಸಿಬಿಐ ಹೆಗಲಿಗೆ: ಕೇಂದ್ರದಿಂದಲೂ ಸುಪ್ರೀಂಕೋರ್ಟ್​ಗೆ ಅಫಿಡವಿಟ್​?

author img

By

Published : Jul 27, 2023, 8:10 PM IST

ಮಣಿಪುರ ಮಹಿಳೆಯರ ವೈರಲ್​ ವಿಡಿಯೋ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಮಣಿಪುರದಾಚೆ ಪ್ರಕರಣದ ಟ್ರಯಲ್​ಗಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.

ಸಿಬಿಐಗೆ ಮಣಿಪುರ ಮಹಿಳೆಯರ ವಿವಸ್ತ್ರಗೊಳಿಸಿದ ವಿಡಿಯೋ ತನಿಖೆ
ಸಿಬಿಐಗೆ ಮಣಿಪುರ ಮಹಿಳೆಯರ ವಿವಸ್ತ್ರಗೊಳಿಸಿದ ವಿಡಿಯೋ ತನಿಖೆ

ಇಂಫಾಲ್​(ಮಣಿಪುರ) : ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಯು ದೇಶಾದ್ಯಂತ ಭಾರಿ ಟೀಕೆಗೆ ಗುರಿಯಾಗಿದ್ದು, ಪ್ರಕರಣದಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮಣಿಪುರ ಗೃಹ ಇಲಾಖೆ ವೈರಲ್ ವಿಡಿಯೋ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವರ್ಗಾಯಿಸಿದೆ.

ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವ 26 ಸೆಕೆಂಡ್‌ಗಳ ವಿಡಿಯೋ ಜುಲೈ 20 ರಂದು ವೈರಲ್​ ಆಗಿತ್ತು. ಇದು ಆಕ್ರೋಶಕ್ಕೆ ಕಾರಣವಾಗಿ ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟುವಂತೆ ಆಗ್ರಹ ಕೇಳಿಬಂದಿತ್ತು. ತಕ್ಷಣವೇ ಕಾರ್ಯಾಚರಣೆ ಕೈಗೊಂಡಿದ್ದ ಸರ್ಕಾರ ಪ್ರಮುಖ ಆರೋಪಿ, ವಿಡಿಯೋ ಮಾಡಿದ ವ್ಯಕ್ತಿ, ಅಪ್ರಾಪ್ತ ಸೇರಿ 7 ಮಂದಿಯನ್ನು ಬಂಧಿಸಿದೆ. ಇದೀಗ ಸಿಬಿಐ ವಿಚಾರಣೆಗೂ ನೀಡಿದೆ.

ಮಣಿಪುರದಾಚೆ ತನಿಖೆಗೆ ಕೇಂದ್ರ ಸುಪ್ರೀಂಗೆ ಅಫಿಡವಿಟ್​: ವಿಡಿಯೋ ವೈರಲ್​ ಬಳಿಕ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಜನರು ಉದ್ರಿಕ್ತರಾಗಿ ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಘಟನೆಗಳು ನಡೆಯುತ್ತಿವೆ. ಹೀಗಾಗಿ ಮಣಿಪುರದ ಹೊರಗೆ ನಿಖರ ತನಿಖೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಅಫಿಡವಿಡ್​ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ, ಮಹಿಳೆಯರ ವಿಡಿಯೋವನ್ನು ಚಿತ್ರೀಕರಿಸಿದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನೂ ಸಹ ಬಂಧಿಸಲಾಗಿದೆ.

ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ATSUM) ಮೇ 3 ರಂದು ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಯ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಈವರೆಗೂ 160 ಕ್ಕೂ ಅಧಿಕ ಜನರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ.

ಅವಮಾನಕ್ಕೊಳಗಾದ ಇಬ್ಬರಲ್ಲಿ ಒಬ್ಬ ಮಹಿಳೆ ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ಮಾಜಿ ಯೋಧನ ಪತ್ನಿ. ಅಸ್ಸಾಂ ರೆಜಿಮೆಂಟ್‌ನಲ್ಲಿ ಸುಬೇದಾರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು. ದೇಶವನ್ನೇ ಕಾಪಾಡಲು ಹೋರಾಡಿದ ನಾನು, ಪತ್ನಿಗೆ ರಕ್ಷಣೆ ನೀಡಲಾಗಲಿಲ್ಲ ಎಂದು ಮಾಜಿ ಯೋಧ ತೀವ್ರ ನೊಂದು ನುಡಿದಿದ್ದರು.

ಕಠಿಣ ಕ್ರಮಕ್ಕೆ ಮೋದಿ ಸೂಚನೆ: ಮಣಿಪುರದಲ್ಲಿ ಮಹಿಳೆಯರನ್ನು ಮೆರವಣಿಗೆ ಮಾಡಿ, ಅಮಾನವೀಯವಾಗಿ ನಡೆದುಕೊಂಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದರು. ಮಹಿಳೆಯರನ್ನು ಗೌರವಿಸದ ಸಮಾಜ ತೃಣಕ್ಕೆ ಸಮ. ಇಂತಹ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಮಣಿಪುರದ ಈ ಅಮಾನವೀಯ ಕೃತ್ಯವು ನನ್ನನ್ನು ತೀವ್ರ ಘಾಸಿ ಮಾಡಿದೆ. ನಾಗರಿಕ ಸಮಾಜಕ್ಕೆ ಇದು ನಾಚಿಕೆಗೇಡಿನ ಸಂಗತಿ. ಮಹಿಳೆಯರ ಗೌರವ ಕಾಪಾಡಲು ಎಲ್ಲ ರಾಜ್ಯಗಳ ಸಿಎಂಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ ; ಮಹಿಳೆ ಥಳಿಸಿ ಬಟ್ಟೆ ಹರಿದರು.. ರಾತ್ರಿಯಿಡಿ ಮರಕ್ಕೆ ಕಟ್ಟಿ ಹಾಕಿದರು:ನಾಲ್ವರ ಬಂಧನ, ತನಿಖೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.