ETV Bharat / bharat

ಕಾರಿನಲ್ಲಿ ಬಂದು ಮೂರು ಕೆಜಿ ಚಿನ್ನ ಕದ್ದು ಪರಾರಿಯಾದ ಖದೀಮರು

author img

By ETV Bharat Karnataka Team

Published : Sep 9, 2023, 9:27 PM IST

ದರೋಡೆಕೋರರ ಗುಂಪೊಂದು ವ್ಯಾಪಾರಿಯೊಬ್ಬರಿಗೆ ತಲುಪಿಸಲು ಸಾಗಿಸುತ್ತಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮೂರು ಕೆಜಿ ಚಿನ್ನ ಕದ್ದು ಪರಾರಿಯಾದ ಖದೀಮರು
ಮೂರು ಕೆಜಿ ಚಿನ್ನ ಕದ್ದು ಪರಾರಿಯಾದ ಖದೀಮರು

ತ್ರಿಶೂರ್ (ಕೇರಳ): ದರೋಡೆಕೋರರ ಗುಂಪೊಂದು 3 ಕಿಲೋಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಕೇರಳ ರಾಜ್ಯದ ತ್ರಿಶೂರಿನಲ್ಲಿ ನಡೆದಿದೆ. ಡಿಪಿ ಚೈನ್ ಎಂಬ ಸಂಸ್ಥೆ ತಯಾರಿಸಿದ ಚಿನ್ನಾಭರಣಗಳನ್ನು ತಮಿಳುನಾಡಿನ ಕನ್ಯಾಕುಮಾರಿಯ ವ್ಯಾಪಾರಿಯೊಬ್ಬರಿಗೆ ಕೊಡಲು ಎಂದು ಡಿಪಿ ಚೈನ್​ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಆಭರಣಗಳೊಂದಿಗೆ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದರು.

ಈ ವೇಳೆ ಕಾರೊಂದರಲ್ಲಿ ಬಂದ ಅಪರಿಚಿತ ನಾಲ್ವರ ಗುಂಪು ಹಲ್ಲೆ ಮಾಡಿ ಚಿನ್ನವನ್ನು ದೋಚಿ ಪರಾರಿಯಾಗಿದೆ ಎಂದು ಉದ್ಯೋಗಿಗಳು ದೂರು ನೀಡಿದ್ದಾರೆ. ಬಿಳಿ ಬಣ್ಣದ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಬಂದ ಗುಂಪು ದರೋಡೆ ನಡೆಸಿದೆ ಎಂದು ದೂರಿನಲ್ಲಿ ಉದ್ಯೋಗಿಗಳು ಉಲ್ಲೇಖಿಸಿದ್ದಾರೆ. ಕಂಪನಿಯ ಉದ್ಯೋಗಿಗಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡಿಪಿ ಚೈನ್​ ಸಂಸ್ಥೆಯಲ್ಲಿ ತಯಾರಿಸಿದ ಆಭರಣಗಳನ್ನು ವಾರಕ್ಕೊಮ್ಮೆ ಚೆನ್ನೈ-ಎಗ್ಮೋರ್ ರೈಲಿನ ಮೂಲಕ ತ್ರಿಶೂರ್‌ನಿಂದ ವ್ಯಾಪಾರಿಗಳಿಗೆ ಆಭರಣಗಳನ್ನು ತಲುಪಿಸಲಾಗುತ್ತಿತ್ತು. ಈ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡ ದುಷ್ಕರ್ಮಿಗಳು ಈ ದರೋಡೆ ನಡೆಸಿದ್ದಾರೆ ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳುವಾದ ಚಿನ್ನಾಭರಣದ ಒಟ್ಟು ಮೌಲ್ಯ ಒಂದೂವರೆ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ​

ರಾಜಸ್ಥಾನದಲ್ಲೂ ನಡೆದಿದ್ದ ಘಟನೆ: ಇತ್ತೀಚೆಗೆ ರಾಜಸ್ಥಾನದ ಬರಾನ್​ ಜಿಲ್ಲೆಯ ಚಿಪಬರೋಡ್‌ನಲ್ಲಿರುವ ಆಭರಣ ಮಳಿಗೆಯ ಬೀಗ ಮುರಿದು​ ಎಂಟು ಮಂದಿ ಕಳ್ಳರ ಗುಂಪು 100 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದರು. ಚಿನ್ನಾಭರಣ ಮಳಿಗೆಯ ಮಾಲೀಕ ತಮ್ಮ ನಿವಾಸದ ಸಮೀಪವಿರುವ ತಮ್ಮ ಅಂಗಡಿಯಲ್ಲಿ ಶಬ್ದ ಕೇಳಿ ರಾತ್ರಿ ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿ ಗಮನಿಸಿದ್ದರು. ಈ ವೇಳೆ, ಮೂವರು ಕಳ್ಳರನ್ನು ಗಮನಿಸಿದ್ದರು ಅವರು ಬಳಿಕ ಪರವಾನಗಿ ಪಡೆದ ಬಂದೂಕನ್ನು ತರುವಷ್ಟರಲ್ಲಿ ದರೋಡೆಕೋರರು ಪರಾರಿಯಾಗಿದ್ದರು.

ಮಹಾರಾಷ್ಟ್ರದಲ್ಲಿ ಇಂತಹದ್ದೇ ಘಟನೆ ವರದಿ: ಸಿನಿಮಿಯಾ ಶೈಲಿಯಲ್ಲಿ ಆಭರಣದ ಮಳಿಗೆಗೆ ನುಗ್ಗಿ ಬರೋಬ್ಬರಿ 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜೂನ್​ 4 ರಂದು ನಡೆದಿತ್ತು. ಹಾಡಹಗಲೇ ಮಾರಕಾಸ್ತ್ರ, ಬಂದೂಕುಗಳನ್ನು ಹೊಂದಿದ್ದ 7 ಜನರಿದ್ದ ದರೋಡೆಕೋರರ ತಂಡವೊಂದು ರಿಲಯನ್ಸ್ ಆಭರಣ ಮಳಿಗೆಗೆ ನುಗ್ಗಿ ಅಂಗಡಿಯಲ್ಲಿದ್ದ ಎಲ್ಲ ಜನರನ್ನು ಬೆದರಿಸಿ 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದರು.

ಇದನ್ನೂ ಓದಿ: ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.