ETV Bharat / bharat

ಕತ್ತಲೆ ಸೃಷ್ಟಿಸಿದ ದಟ್ಟ ಮಂಜು: ವಿಮಾನ, ರೈಲು ಸಂಚಾರ ವ್ಯತ್ಯಯ, ಇನ್ನೆರಡು ದಿನ ಇದೇ ಸ್ಥಿತಿ

author img

By

Published : Jan 8, 2023, 10:38 AM IST

ಉತ್ತರ ಭಾರತದಲ್ಲಿ ಚಳಿ ಮೈ ಕೊರೆಯುತ್ತಿದೆ. ವಾತಾವರಣದ ಶುಷ್ಕದಿಂದಾಗಿ ದಟ್ಟ ಮಂಜು ಕವಿದಿದ್ದು, ಗೋಚರತೆಯೇ ಕಡಿಮೆಯಾಗಿದೆ. ಇದರಿಂದ ವಿಮಾನ, ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಮುಂದಿನ 2 ದಿನ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

weather-conditions
ಕತ್ತಲೆ ಸೃಷ್ಟಿಸಿದ ದಟ್ಟ ಮಂಜು

ನವದೆಹಲಿ: ಉತ್ತರ ಭಾರತದಲ್ಲಿ ತೀವ್ರ ಚಳಿ ಮತ್ತು ದಟ್ಟ ಮಂಜು ಕವಿದಿದೆ. ಪ್ರತಿಕೂಲ ಹವಾಮಾನ ಉತ್ತರ ಭಾರತದಲ್ಲಿ ರೈಲು ಮತ್ತು ವಿಮಾನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ. ಹವಾಮಾನ ಮತ್ತು ಇತರೆ ಕಾರ್ಯಾಚರಣೆ ಸಮಸ್ಯೆಯಿಂದಾಗಿ ಇಂದು 1 ಗಂಟೆಯವರೆಗೆ 20 ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ. ವಿವಿಧ ಸ್ಥಳಗಳಿಂದ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 13 ವಿಮಾನಗಳು ವಿಳಂಬಗೊಂಡಿವೆ. ಇಲ್ಲಿಂದ ತೆರಳಬೇಕಿದ್ದ 7 ವಿಮಾನಗಳಿಗೆ ದಟ್ಟ ಮಂಜು ತೊಡಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಮಾನಗಳ ಬಗ್ಗೆ ಮಾಹಿತಿ ಪಡೆಯಿರಿ: ಪ್ರತಿಕೂಲ ಹವಾಮಾನದಿಂದಾಗಿ ಹಲವಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾದ ಕಾರಣ ಎಲ್ಲ ಪ್ರಯಾಣಿಕರು ತಮ್ಮ ವಿಮಾನಗಳ ಸಮಯದ ಬಗ್ಗೆ ಪೂರ್ವ ಮಾಹಿತಿ ಪಡೆದುಕೊಳ್ಳಲು ವಿಮಾನಯಾನ ಸಂಸ್ಥೆಗಳು ಸಲಹೆ ನೀಡಿವೆ. ಪ್ರಯಾಣಕ್ಕೆ ಹೊರಡುವ ಮುನ್ನ ವಿಮಾನದ ಲಭ್ಯತೆ ಬಗ್ಗೆ ಮೊದಲೇ ಪರೀಕ್ಷಿಸಿಕೊಳ್ಳಿ ಎಂದು ಹೇಳಿವೆ. ಅಲ್ಲದೇ, ವಿಮಾನ ನಿಲ್ದಾಣಗಳಲ್ಲಿ ದಟ್ಟ ಮಂಜಿನಿಂದಾಗಿ ಗೋಚರತೆ ಇಲ್ಲವಾಗಿದ್ದು, ಅದರ ಇಳಿಕೆಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಅಪಾಯಕ್ಕೀಡಾಗುವ ಬದಲು ವಾತಾವರಣ ತಿಳಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣಗಳ ಅಧಿಕಾರಿಗಳು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ.

ರೈಲು ಸಂಚಾರಕ್ಕೂ ಅಡ್ಡಿ: ದಟ್ಟವಾದ ಮಂಜು ಆವರಿಸಿದ್ದು ಅನೇಕ ರೈಲುಗಳು ತಡವಾಗಿ ಓಡಾಟ ಆರಂಭಿಸುತ್ತಿವೆ. ಉತ್ತರ ರೈಲ್ವೇ ವಿಭಾಗದ 42 ರೈಲುಗಳು ದಟ್ಟ ಮಂಜಿನ ಕಾರಣಕ್ಕೆ ಗೋಚರತೆ ಸಮಸ್ಯೆಯಿಂದ ತಡವಾಗಿ ಚಲಿಸುತ್ತಿವೆ. ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರವನ್ನೇ ಆವರಿಸಿದ ಇಬ್ಬನಿ: ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳು ದಟ್ಟ ಮಂಜಿನಿಂದ ಆವೃತವಾಗಿವೆ. ಇದರಿಂದ ವಾತಾವರಣದಲ್ಲಿ ತೀವ್ರ ಚಳಿ ಉಂಟಾಗಿದ್ದು, ಹಲವೆಡೆ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಇದು ಇನ್ನೂ 2 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಬೆಳಿಗ್ಗೆ ದಟ್ಟವಾದ ಮಂಜಿನ ಪದರವು ಗೋಚರತೆಯನ್ನು ತೀವ್ರ ಸ್ವರೂಪದಲ್ಲಿ ಕಡಿಮೆ ಮಾಡಿದೆ. ಮುಂದಿನ ಎರಡು ದಿನ ವಾಯುವ್ಯ ಭಾರತದಲ್ಲಿಯೂ ಶೀತ ಗಾಳಿ ಮತ್ತು ತೀವ್ರ ಚಳಿ ಮುಂದುವರಿಯಲಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಇರಲಿದೆ. ಕ್ರಮೇಣ ಅದು ಇಳಿಕೆ ಕಾಣಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

2 ದಿನಗಳ ನಂತರ ವಾಯುವ್ಯ ಭಾರತದ ಬಯಲು ಪ್ರದೇಶದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್​ ದಾಖಲಾಗಲಿದೆ. ಪೂರ್ವ ಭಾರತದಲ್ಲಿ ಮುಂದಿನ ಮೂರು ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಅಂದರೆ ಸುಮಾರು 2 ರಿಂದ 3 ಡಿಗ್ರಿ ಕನಿಷ್ಠ ತಾಪಮಾನ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇತರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ?: ಮುಂದಿನ ಎರಡು ದಿನಗಳಲ್ಲಿ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರಾಖಂಡ, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅಸ್ಸೋಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ದಟ್ಟವಾದ ಮಂಜು ಮುಂದುವರಿಯಲಿದೆ. ಹೆಚ್ಚೂ ಕಡಿಮೆ 2 ರಿಂದ 3 ಡಿಗ್ರಿ ಸೆಲ್ಸಿಯಸ್​​ ಕನಿಷ್ಠ ತಾಪಮಾನ ಇರಲಿದೆ. ಇದು ಚಳಿ ಉಂಟು ಮಾಡಲಿದೆ. ಕೆಲವೆಡೆ ಚಳಿಯಿಂದ ತೀವ್ರ ಚಳಿ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಇದನ್ನೂ ಓದಿ: ರಾಷ್ಟ್ರದ ರಾಜಧಾನಿಯಲ್ಲಿ ದಾಖಲೆಯ ಚಳಿ.. ರಾಜ್ಯ ರಾಜಧಾನಿಯಲ್ಲೂ ಮುಂದುವರಿದ ಮೈಕೊರೆಯುವ ಚಳಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.