ETV Bharat / bharat

ಕೇಜ್ರಿವಾಲ್ ಸಂಪುಟಕ್ಕೆ ಡಿಸಿಎಂ ಸಿಸೋಡಿಯಾ, ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ

author img

By

Published : Feb 28, 2023, 6:11 PM IST

Updated : Feb 28, 2023, 7:27 PM IST

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ.

manish-sisodia-and-satyendar-jain-resignation
ಕೇಜ್ರಿವಾಲ್ ಸಂಪುಟಕ್ಕೆ ಡಿಸಿಎಂ ಸಿಸೋಡಿಯಾ, ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ

ನವದೆಹಲಿ: ಸಿಎಂ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರದ ಸಚಿವ ಸಂಪುಟಕ್ಕೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್​ ಇಂದು ರಾಜೀನಾಮೆ ನೀಡಿದ್ದಾರೆ. ಇಬ್ಬರು ಸಚಿವರು ಹಗರಣ ಆರೋಪ ಪ್ರಕರಣಗಳಲ್ಲಿ ಜೈಲು ಸೇರಿದ್ದಾರೆ. ರಾಜೀನಾಮೆ ಅಂಗೀಕಾರವಾಗಿದೆ ಎಂದು ವರದಿಯಾಗಿದೆ.

ದೆಹಲಿ ಸರ್ಕಾರವು ಜಾರಿಗೆ ತರಲು ಹೊರಟಿದ್ದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮನೀಶ್​ ಸಿಸೋಡಿಯಾರನ್ನು ಮೂರು ದಿನಗಳ ಹಿಂದಷ್ಟೇ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಐದು ದಿನಗಳ ಕಾಲ ಕಸ್ಟಡಿಯಲ್ಲಿದ್ದಾರೆ. ಇಂದು ಅವರಿಗೆ ಮಧ್ಯಾಹ್ನ ಜಾಮೀನು ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿತ್ತು.

ಕಾನೂನು ಪರಿಹಾರಕ್ಕಾಗಿ ಹೈಕೋರ್ಟ್​ಗೆ ಹೋಗುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ನರಸಿಂಹ ಅವರಿದ್ದ ದ್ವಿಸದಸ್ಯ ಪೀಠವು ಸಲಹೆ ನೀಡಿತ್ತು. ಇದರ ಬೆನ್ನಲ್ಲೇ ಸಿಸೋಡಿಯಾ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ, ಸಾಕ್ಷ್ಯಗಳ ನಾಶ ಮತ್ತು ವಿರೂಪಗೊಳಿಸಿದ ಆರೋಪಗಳು ಸಿಸೋಡಿಯಾ ಮೇಲಿವೆ. ದೆಹಲಿ ಸರ್ಕಾರದಲ್ಲಿ ಸಿಸೋಡಿಯಾ ಪ್ರಭಾವಿ ಸಚಿವರಾಗಿದ್ದರು. ಒಟ್ಟು 18 ಖಾತೆಗಳು ಇವರ ಬಳಿ ಇದ್ದವು. ಆಪ್​ ಮತ್ತು ಸರ್ಕಾರದಲ್ಲಿ ವಿಚಾರದಲ್ಲಿ ಕೇಜ್ರಿವಾಲ್ ನಂತರದಲ್ಲಿ ಎರಡನೇ ಪ್ರಮುಖ ಎಂದೇ ಹೇಳಲಾಗುತ್ತದೆ.

9 ತಿಂಗಳಿಂದ ಸತ್ಯೇಂದ್ರಗೆ ಜೈಲು: ಮತ್ತೊಂದೆಡೆ, ಕಳೆದ ವರ್ಷದ ಮೇ 3ರಂದು ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಕೂಡ ಜೈಲು ಸೇರಿದ್ದಾರೆ. ಅಂದಿನಿಂದ ಇವರು ತಿಹಾರ್ ಜೈಲಿನಲ್ಲಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಬಳಸಲಾದ ನಾಲ್ಕು ಶೆಲ್ ಕಂಪನಿಗಳ ನಿಜವಾದ ನಿಯಂತ್ರಣವನ್ನು ಸತ್ಯೇಂದ್ರ ಜೈನ್ ಹೊಂದಿದ್ದಾರೆ. ಈ ಪ್ರಕರಣದಲ್ಲಿ ಸಹ ಆರೋಪಿಗಳಾದ ಅಂಕುಶ್ ಜೈನ್ ಮತ್ತು ವೈಭವ್ ಜೈನ್ ಕೇವಲ ನಾಮಕಾವಸ್ತೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು. ಕಳೆದ ಮಾರ್ಚ್ 31ರಂದು ಜೈನ್​ ಒಡೆತನದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳಿಗೆ ಸೇರಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.

ಅಲ್ಲದೇ, ಜೂನ್ 6ರಂದು ಸತ್ಯೇಂದ್ರ ಜೈನ್ ಮತ್ತು ಅವರ ಪತ್ನಿ ಮತ್ತು ಸಹಚರರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ 2.85 ಕೋಟಿ ರೂ. ನಗದು ಮತ್ತು 1.80 ಕೆಜಿ ತೂಕದ 133 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಅಕ್ರಮವಾಗಿ ಕೃಷಿ ಭೂಮಿ ಖರೀದಿಸಿದ ಆರೋಪವೂ ಜೈನ್ ಮೇಲಿದೆ. ಈ ಬಗ್ಗೆಯೂ ಇನ್ನೂ ತನಿಖೆ ನಡೆಯುತ್ತಿದೆ. ಇದರ ನಡುವೆ ನವೆಂಬರ್​ ತಿಂಗಳಲ್ಲಿ ಜೈಲಿನಲ್ಲೇ ಜೈನ್​ ಮಸಾಜ್​ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್​ ಆಗಿ ಟೀಕೆಗೂ ಗುರಿಯಾಗಿತ್ತು.

ಬಿಜೆಪಿ ಪ್ರತಿಕ್ರಿಯೆ: ಇಬ್ಬರು ಸಚಿವರ ರಾಜೀನಾಮೆ ಬಗ್ಗೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಇದು ದೆಹಲಿಯ ಜನರ ಗೆಲುವು ಎಂದು ಹೇಳಿದ್ದಾರೆ. ಭ್ರಷ್ಟ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆಯೇ ಜೈಲಿನಿಂದ ಸರ್ಕಾರ ನಡೆಸುವ ಪಾಪವನ್ನು ನಿಲ್ಲಿಸಬೇಕಿತ್ತು. ಭ್ರಷ್ಟರನ್ನು ರಕ್ಷಿಸಲು ಕೇಜ್ರಿವಾಲ್ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭಾ ಸದಸ್ಯ ರವಿಶಂಕರ್ ಪ್ರಸಾದ್​ ಸಹ ದೆಹಲಿ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇಬ್ಬರು ಸಚಿವರು ಕೂಡ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದಾಗಲೇ ರಾಜೀನಾಮೆ ಕೊಡಬೇಕಿತ್ತು. ಆದರೆ, ಆಮ್​ ಆದ್ಮಿ ಪಕ್ಷದ ಸರ್ಕಾರವು 3ಸಿಗಳಲ್ಲಿ (Cut, Commission & Corruption) ತೊಡಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: 'ಸಿಬಿಐ ಬಂಧನ ಪ್ರಶ್ನಿಸಿ ಹೈಕೋರ್ಟ್​ಗೆ ಹೋಗಿ': ಡಿಸಿಎಂ ಸಿಸೋಡಿಯಾಗೆ ಸುಪ್ರೀಂ ಸೂಚನೆ

Last Updated : Feb 28, 2023, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.