ETV Bharat / bharat

ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರಿಬ್ಬರನ್ನು ಕೊಂದು ಮೂಟೆ ಕಟ್ಟಿದ ತಂದೆ!

author img

By ETV Bharat Karnataka Team

Published : Sep 4, 2023, 9:01 AM IST

Double Murder In Agar Malwa: ಬಾಲಕಿಗೆ ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಆಕೆಯ ತಂದೆ ಹತ್ಯೆ ಮಾಡಿರುವ ಘಟನೆ ಅಗರ್ ಮಾಲ್ವಾ ಜಿಲ್ಲೆಯ ಕಾನಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

murder
ಕೊಲೆ

ಅಗರ್ ಮಾಲ್ವಾ (ಮಧ್ಯಪ್ರದೇಶ) : ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗರ್​ ಮಾಲ್ವಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಭಾನುವಾರ ವಶಕ್ಕೆ ಪಡೆಯಲಾಗಿದೆ ಎಂದು ಪ್ರಾಥಮಿಕ ತನಿಖೆ ವರದಿಯನ್ನು ಉಲ್ಲೇಖಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಲೋ ಮೀಟರ್​ ದೂರದಲ್ಲಿರುವ ಕಾನಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಟವಾಡ ಗ್ರಾಮದ ಕೃಷಿ ಜಮೀನಿನಲ್ಲಿ ಗೋಣಿಚೀಲಗಳಲ್ಲಿ ತುಂಬಿದ ರೀತಿ ಇಬ್ಬರು ಯುವಕರ ಶವಗಳು ಪತ್ತೆಯಾಗಿದ್ದವು. ಬಟವಾಡ ಗ್ರಾಮದ ನಿವಾಸಿ ಮೆಹರ್ಬನ್ ಸಿಂಗ್ ಎಂಬುವರ ಒಡೆತನದ ಜಮೀನಿನಲ್ಲಿ ಸುಮಾರು 20-22 ವರ್ಷ ವಯಸ್ಸಿನ ಇಬ್ಬರು ಯುವಕರ ಶವಗಳನ್ನು ಅಡಗಿಸಿಟ್ಟಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಬಳಿಕ ತನಿಖೆ ನಡೆಸಿದಾಗ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ಗೋವಿಂದ್ ಗುರ್ಜರ್ ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಇನ್ನೂ ಪತ್ತೆಯಾಗಿಲ್ಲ.

ಏನಿದು ಪ್ರಕರಣ? : ಕಾನಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳಿಗೆ ಇಬ್ಬರು ಯುವಕರು ಕಿರುಕುಳ ನೀಡುತ್ತಿದ್ದರು. ಇದರಿಂದ ಕೋಪಗೊಂಡ ತಂದೆ ಯುವಕರಿಬ್ಬರನ್ನೂ ಕೊಂದು ಗೋಣಿಚೀಲದಲ್ಲಿ ಶವಗಳನ್ನು ತುಂಬಿ ಇಟ್ಟಿದ್ದರು. ಸದ್ಯಕ್ಕೆ ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ, ಆರೋಪಿ ತಂದೆಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮೈಸೂರು: ಸ್ನೇಹಿತನನ್ನೇ ಕೊಂದು, ಬೇರೊಬ್ಬರ ಮೇಲೆ ಹಾಕಲು ಯತ್ನಿಸಿ ಸಿಕ್ಕಿಬಿದ್ದ ಖದೀಮರು

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕೋರಿ ಮಾತನಾಡಿ, "ಬಟವಾಡ ಗ್ರಾಮದ ಹೊಲವೊಂದರಲ್ಲಿ ಎರಡು ಶವಗಳಿರುವ ಬಗ್ಗೆ ಕಾನಾಡ್ ಠಾಣೆಯ ಪೊಲೀಸರಿಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಎರಡು ಶವಗಳು ಪತ್ತೆಯಾಗಿವೆ. ಗೋಣಿಚೀಲಗಳಲ್ಲಿ ಮೃತದೇಹಗಳನ್ನು ತುಂಬಿ ಇಡಲಾಗಿತ್ತು, ಛಿದ್ರಗೊಂಡ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಶಾಜಾಪುರದ ಶಂಕಿತ ನಿವಾಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ‘ನನಗೆ ಇಬ್ಬರೂ ಯುವಕರು ಸರಿಯಾಗಿ ಪರಿಚಯವಿಲ್ಲ, ಅವರು ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು’ ಎಂದು ಆರೋಪಿ ಹೇಳಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಗಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಿದ ತಂದೆ ಕೊಲೆ

ಕೊಲೆಗೈದಿದ್ದು ಹೇಗೆ? : ಯುವಕನೋರ್ವ ಶನಿವಾರ ರಾತ್ರಿ ತನ್ನ ಸ್ನೇಹಿತನೊಂದಿಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಅವರನ್ನು ಹಿಂಬಾಲಿಸಿದ ಆರೋಪಿ, ಬೊಲೆರೋ ವಾಹನದಿಂದ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರಿಬ್ಬರೂ ಕೆಳಗೆ ಬಿದ್ದಿದ್ದಾರೆ. ಇದಾದ ಬಳಿಕ ಆರೋಪಿಯು ಯುವಕರಿಬ್ಬರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಜಮೀನಿನ ಬಳಿ ಕರೆತಂದು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ. ಬಳಿಕ ಮೃತದೇಹಗಳನ್ನು ಗೋಣಿಚೀಲಗಳಲ್ಲಿ ತುಂಬಿ ಎಸೆದಿದ್ದಾನೆ. ಭಾನುವಾರ ಬೆಳಗ್ಗೆ ಗ್ರಾಮಸ್ಥರ ಕಣ್ಣಿಗೆ ಗೋಣಿಚೀಲಗಳು ಬಿದ್ದಿದ್ದು, ಆತಂಕಗೊಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೆಳಗಾವಿಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಕೇಸ್ : ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.