ETV Bharat / bharat

ಯಾವುದೇ ಶಕ್ತಿ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ: ಸಿಎಂ ಮಮತಾ ಬ್ಯಾನರ್ಜಿ

author img

By ETV Bharat Karnataka Team

Published : Dec 6, 2023, 7:49 AM IST

Kolkata International Film Festival : ಯಾವುದೇ ಶಕ್ತಿ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಯಾವುದೇ ಶಕ್ತಿಯಿಂದ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಅಂತಹ ಶಕ್ತಿ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಿನ್ನೆ ದಿನ ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ 29ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದ್ದರೂ ಹೆದರುವ ಅವಶ್ಯಕತೆಯಿಲ್ಲ. ನಾವು ದೇಶ ಮತ್ತು ಇಲ್ಲಿಯ ಜನರನ್ನು ಪ್ರೀತಿಸುತ್ತೇವೆ. ಎಲ್ಲ ಜಾತಿಗಳು ಮತ್ತು ಸಮುದಾಯಗಳನ್ನು ಸಮಾನವಾಗಿ ಕಾಣುತ್ತೇವೆ. ನಾವು ಯಾವುದೇ ರೀತಿಯ ದೇಶ ವಿಭಜನಾ ಶಕ್ತಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತೃಣಮೂಲ ಕಾಂಗ್ರೆಸ್​ ಸಂಸದ ಮತ್ತು ನಟ ಶತ್ರುಘ್ನ ಸಿನ್ಹಾ, ಸದ್ಯದ ಪರಿಸ್ಥಿತಿಯಿಂದ ಭಯಪಡಬೇಡಿ, ನೀವೊಬ್ಬ ಉಕ್ಕಿನ ಮಹಿಳೆ ಎಂದು ಸಿಎಂಗೆ ಪ್ರೋತ್ಸಾಹಿಸಿದರು. ಮುಂದುವರೆದು ಮಾತನಾಡಿದ ಅವರು, ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಎಂದು ಕರೆ ನೀಡಿದರು. ಇದೇ ವೇಳೆ, ಸಿನ್ಹಾರ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಸಿಎಂ ಬ್ಯಾನರ್ಜಿ, ನಾವೆಲ್ಲರೂ ದೇಶವನ್ನು ಪ್ರೀತಿಸುವ ಕಾರಣ ಎಲ್ಲ ಜಾತಿ, ಧರ್ಮ ಮತ್ತು ಪಂಥದವರು ಒಗ್ಗಟ್ಟಾಗಿ ಇರುತ್ತೇವೆ. ಖಂಡಿವಾಗಿ ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಎಂದು ಹೇಳಿದರು.

ಸಲ್ಮಾನ್‌ ಖಾನ್​ಗೆ ಆಹ್ವಾನ: ಕಾರ್ಯಕ್ರಮದಲ್ಲಿ ಸಿಎಂ ಬ್ಯಾನರ್ಜಿ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಬಂಗಾಳದಲ್ಲಿ ಸಿನಿಮಾ ಮಾಡುವಂತೆ ಆಹ್ವಾನಿಸಿದರು. ಬಂಗಾಳ ಭಾರತದ ಸಾಂಸ್ಕೃತಿಕ ರಾಜಧಾನಿಯಾಗಿದ್ದು, ಇದೀಗ ಚಲನಚಿತ್ರ ನಿರ್ಮಾಣಕ್ಕೂ ಒಳ್ಳೆಯ ತಾಣವಾಗಿದೆ ಆದ್ದರಿಂದ ಇಲ್ಲಿಯ ಡಾರ್ಜಿಲಿಂಗ್, ಕುರ್ಸಿಯಾಂಗ್, ಬೋಲ್ಪುರ್ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರಗಳನ್ನು ಮಾಡಿ ಎಂದು ಮಮತಾ ಆಹ್ವಾನಿಸಿದರು.

ಬಂಗಾಳದ ಜನರು ಸಿನಿಮಾವನ್ನು ಮೆಚ್ಚುತ್ತಾರೆ. ಚಲನಚಿತ್ರದ ಭಾಷೆ ಜಾಗತಿಕವಾಗಿದೆ. ಚಲನಚಿತ್ರದ ಭಾಷೆ ಎಲ್ಲ ಜನರನ್ನು ಆಕರ್ಷಿಸುತ್ತದೆ ಎಂದ ಅವರು ಈ ಬಾರಿ ಗ್ಲೋಬಲ್ ಬ್ಯುಸಿನೆಸ್ ಸಮ್ಮಿಟ್‌ನಲ್ಲಿ ನಾವು ನಮ್ಮ ಫಿಲ್ಮ್ ಸೊಸೈಟಿಯನ್ನು ಸೃಜನಶೀಲ ಉದ್ಯಮವಾಗಿ ಪ್ರಸ್ತುತಪಡಿಸಿದ್ದೇವೆ ಎಂದು ಹೇಳಿದರು.

ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಸೋನಾಕ್ಷಿ ಸಿನ್ಹಾ, ಮಹೇಶ್ ಭಟ್, ಶತ್ರುಘ್ನ ಸಿನ್ಹಾ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಕಾರ್ಯಕ್ರಮದ ಥೀಮ್ ಸಾಂಗ್​ಗೆ ಸಿಎಂ ಮಮತಾ ಬ್ಯಾನರ್ಜಿ ಅವರು ಬಾಲಿವುಡ್​ ನಟರ ಜೊತೆ ಡ್ಯಾನ್ಸ್​ ಮಾಡಿ ಎಲ್ಲರ ಗಮನ ಸೆಳೆದರು.

ಇದನ್ನೂ ಓದಿ:ಹಿಂದಿ ಹೃದಯಭಾಗದ ರಾಜ್ಯಗಳನ್ನು 'ಗೋಮೂತ್ರ ರಾಜ್ಯಗಳು' ಎಂದು ಕರೆದ ಡಿಎಂಕೆ ಸಂಸದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.