ETV Bharat / bharat

SSC ಹಗರಣ: ಗ್ರೂಪ್​ ಸಿ ಹುದ್ದೆ ಕಳೆದುಕೊಂಡ ಮಮತಾ ಬ್ಯಾನರ್ಜಿಯ ಸೊಸೆ.. ಚರ್ಚೆ ಹುಟ್ಟುಹಾಕಿದ ನೇಮಕಾತಿ!

author img

By

Published : Mar 10, 2023, 9:04 PM IST

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೊಸೆ ಬ್ರಿಷ್ಟಿ ಮುಖರ್ಜಿ ಅವರು ಬೋಲ್‌ಪುರ ಮೇಲ್ ಪ್ರಾಥಮಿಕ ಶಾಲೆಯಲ್ಲಿನ ಗ್ರೂಪ್ ಸಿ ಕೆಲಸ ಕಳೆದುಕೊಂಡಿದ್ದಾರೆ.

ಬ್ರಿಷ್ಟಿ ಮುಖರ್ಜಿ
ಬ್ರಿಷ್ಟಿ ಮುಖರ್ಜಿ

ರಾಮ್‌ಪುರಹತ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೊಸೆ ಬ್ರಿಷ್ಟಿ ಮುಖರ್ಜಿ ಅವರು ಹೈಕೋರ್ಟ್ ಆದೇಶದ ನಂತರ ಬೋಲ್‌ಪುರ ಮೇಲ್ ಪ್ರಾಥಮಿಕ ಶಾಲೆಯಲ್ಲಿನ ಗ್ರೂಪ್ ಸಿ ಕೆಲಸ ಕಳೆದುಕೊಂಡಿದ್ದಾರೆ. ಸಿಎಂ ತಾಯಿಯ ಮನೆಯಾದ ಬಿರ್ಭೂಮ್‌ನ ಕುಸುಂಬಾ ಗ್ರಾಮದ ಬ್ರಿಷ್ಟಿ ಮುಖರ್ಜಿ ಅವರನ್ನು ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಎಸ್‌ಸಿ) ಬೋಧಕೇತರ ಸಿಬ್ಬಂದಿಯಾಗಿ "ಕಾನೂನುಬಾಹಿರವಾಗಿ" ನೇಮಿಸಲಾಗಿತ್ತು ಎಂಬ ಆರೋಪ ಎದುರಿಸುತ್ತಿದ್ದರು.

ಅಕ್ರಮವಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ ನೀಡಲಾದ ಶಿಫಾರಸುಗಳನ್ನು ರದ್ದುಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ನಂತರ ಉದ್ಯೋಗಿಗಳ ರದ್ಧತಿ ಪಟ್ಟಿಯಲ್ಲಿ ಬ್ರಿಷ್ಟಿ ಮುಖರ್ಜಿಯ ಹೆಸರು 608 ನೇ ಸ್ಥಾನದಲ್ಲಿದೆ. ಬ್ರಿಷ್ಟಿ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಕೇವಲ ಒಂದು ದಿನ ಕೆಲಸ ಮಾಡಿದ ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಅವರನ್ನು ಸಂಪರ್ಕಿಸಿದಾಗ, ಬ್ಯಾನರ್ಜಿ ಅವರ ಸಹೋದರ ನಿಹಾರ್ ಅವರು ತಮ್ಮ ಮಗಳು ದೈಹಿಕ ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದಾರೆ ಮತ್ತು ಯಾವುದೇ ಸಂಬಳವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು. ಬ್ರಿಷ್ಟಿಗೆ ಹೇಗೆ ಕೆಲಸ ಸಿಕ್ಕಿತು ಎಂಬ ಬಗ್ಗೆ ಸ್ಪಷ್ಟನೆ ನೀಡದ ಅವರು, ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಆಕೆಗೆ ಕೆಲಸ ಸಿಕ್ಕಿದೆ ಎಂದು ಹೇಳಿದ್ದಾರೆ. ಬ್ಯಾನರ್ಜಿ ಅವರ ಪೂರ್ವಜರ ಮನೆ ಕುಸುಂಬಾ ಗ್ರಾಮದಲ್ಲಿದೆ. ಮುಖ್ಯಮಂತ್ರಿಯವರ ಚಿಕ್ಕಪ್ಪ ಅನಿಲ್ ಮುಖರ್ಜಿ ಮತ್ತು ಅವರ ಪುತ್ರ ನಿಹಾರ್ ಮುಖರ್ಜಿ ಕುಸುಂಬಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಅಭ್ಯರ್ಥಿಗಳ ಆರೋಪದಿಂದ ಹಗರಣ ಬೆಳಕಿಗೆ: ಮಾಜಿ ಶಿಕ್ಷಣ ಸಚಿವರು ಮತ್ತು ಆಯೋಗದ ಹಲವು ಅಧಿಕಾರಿಗಳ ಬಂಧನಕ್ಕೆ ಕಾರಣವಾದ ಬಹುಕೋಟಿ ಎಸ್‌ಎಸ್‌ಸಿ ಹಗರಣದಲ್ಲಿ ಬ್ಯಾನರ್ಜಿ ಅವರ ಕುಟುಂಬದ ಸದಸ್ಯರೊಬ್ಬರ ಹೆಸರಿರುವುದು ಇದೇ ಮೊದಲು. WBSSC ಲಂಚ ಪಡೆದು ಅನರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದೆ ಎಂದು ಅಭ್ಯರ್ಥಿಗಳು ಆರೋಪಿಸಿದಾಗ ಹಗರಣ ಬೆಳಕಿಗೆ ಬಂದಿತ್ತು.

ಕಲ್ಕತ್ತಾ ಹೈಕೋರ್ಟ್ WBSSC ಗೆ ಮೋಸದ ರೀತಿಯಲ್ಲಿ ನೇಮಕಗೊಂಡ ಅಭ್ಯರ್ಥಿಗಳ ಶಿಫಾರಸುಗಳನ್ನು ರದ್ದುಗೊಳಿಸುವಂತೆ ನಿರ್ದೇಶಿಸಿತ್ತು. ಈ ನಿರ್ದೇಶದನ ಮೇಲೆ ಆಯೋಗ ರದ್ಧತಿ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಸಿಎಂ ಕಟುಂಬ ಸದಸ್ಯರೊಬ್ಬರ ಹೆಸರು ಇರುವುದು ಈಗ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದು, ಸಂಪೂರ್ಣ ತನಿಖೆ ನಡೆಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಇದುವರೆಗೂ ನಡೆದ ನೇಮಕಾತಿಗಳಲ್ಲಿ ಇನ್ನೆಷ್ಟು ರಾಜಕೀಯ ಪ್ರಭಾವ ಇದ್ದಿರಬಹುದು ಎಂಬ ಶಂಕೆ ರಾಜ್ಯದ ಜನರಲ್ಲಿ ಹುಟ್ಟಿದೆ.

ಭ್ರಷ್ಟಾಚಾರ ಪ್ರಕರಣದ ಆರೋಪ ಬಗ್ಗೆ ಸಿಬಿಐ ತನಿಖೆಗೆ ವಹಿಸಿ ಎಂಬ ಒತ್ತಾಯ: ಬ್ಯಾನರ್ಜಿ ಅವರ ಕುಟುಂಬದ ಸದಸ್ಯರು ಮತ್ತು ಆಪ್ತರನ್ನು ಆಡಳಿತದ ವಿವಿಧ ಉನ್ನತ ಹುದ್ದೆಗಳಿಗೆ ಬಡ್ತಿ ನೀಡಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಇನ್ನೊಂದೆಡೆ ಬ್ಯಾನರ್ಜಿ ಅವರ ಸಂಬಂಧಿಕರ ನೇಮಕ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸಿದೆ.

ಎಸ್‌ಎಸ್‌ಸಿ ಹಗರಣ ಬಹಿರಂಗವಾದಾಗಿನಿಂದ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಗೆ ವಿವಾದಕ್ಕೀಡಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಇಬ್ಬರು ಹೆವಿವೇಯ್ಟ್ ನಾಯಕರು-ಮಾಜಿ ಕ್ಯಾಬಿನೆಟ್ ಸಚಿವ ಪಾರ್ಥ ಚಟರ್ಜಿ ಮತ್ತು ಪ್ರಭಾವಿ ಶಾಸಕ ಮಾಣಿಕ್ ಭಟ್ಟಾಚಾರ್ಯ-ಕೇಂದ್ರ ಏಜೆನ್ಸಿಗಳಿಂದ ಬಂಧನಕ್ಕೊಳಗಾಗಿ, ವಂಚನೆಯ ನೇಮಕಾತಿ ಪ್ರಕ್ರಿಯೆಯು ಕಳೆದ 10 ವರ್ಷಗಳಲ್ಲಿ ನೇಮಕಗೊಂಡಿರುವ ಶಿಕ್ಷಕರ ರುಜುವಾತುಗಳು ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ..

ಇದನ್ನೂ ಓದಿ : ಬಿಎಸ್​ಎಫ್​ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇ 10 ಮೀಸಲಾತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.