ETV Bharat / bharat

ಬೆಳಗಾವಿ ಗಡಿ ವಿವಾದ ನಿಲುವಳಿ ಸೂಚನೆ ಮಂಡಿಸಿದ ಮಹಾ ಸರ್ಕಾರ.. ಸರ್ವಪಕ್ಷಗಳಿಂದ ಒಮ್ಮತದ ಅಂಗೀಕಾರ

author img

By

Published : Dec 27, 2022, 1:25 PM IST

Updated : Dec 27, 2022, 2:38 PM IST

ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ನಿಲುವಳಿ ಸೂಚನೆ ಮಂಡನೆ - ನಿಲುವಳಿ ಮಂಡಿಸಿದ ಸಿಎಂ ಏಕನಾಥ್​ ಶಿಂದೆ - ಸರ್ವಪಕ್ಷಗಳಿಂದ ಒಮ್ಮತದ ಅಂಗೀಕಾರ

unanimously-passed-the-resolution
ಬೆಳಗಾವಿ ಗಡಿ ವಿವಾದ ನಿಲುವಳಿ ಸೂಚನೆ ಮಂಡಿಸಿದ ಮಹಾ ಸರ್ಕಾರ

ನಾಗಪುರ(ಮಹಾರಾಷ್ಟ್ರ): ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯೆ ಇರುವ ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ ಅಂಗೀಕರಿಸಲಾಗಿದೆ. ಗಡಿ ಭಾಗದಲ್ಲಿರುವ ಮರಾಠಿ ಪ್ರದೇಶಗಳು ರಾಜ್ಯಕ್ಕೆ ಸೇರಬೇಕು ಎಂಬ ಒತ್ತಾಯವನ್ನು ಅಲ್ಲಿನ ಸರ್ಕಾರ ಮಂಡಿಸಿದೆ.

ಮುಖ್ಯಮಂತ್ರಿ ಏಕನಾಥ್​ ಶಿಂದೆ ಅವರು ಮಂಡಿಸಿದ ನಿಲುವಳಿ ಸೂಚನೆಯನ್ನು ಸರ್ವಪಕ್ಷಗಳು ಅವಿರೋಧವಾಗಿ ಒಪ್ಪಿಗೆ ನೀಡಿವೆ. ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಜತೆಗಿನ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಯಥಾವತ್ತಾಗಿ ಜಾರಿಗೊಳಿಸಲು ಕರ್ನಾಟಕ ಸರ್ಕಾರಕ್ಕೆ, ಕೇಂದ್ರ ಸರ್ಕಾರ ಸೂಚನೆ ನೀಡಬೇಕು. ಮತ್ತು ಗಡಿ ಭಾಗದ ಮರಾಠಿ ಜನರ ಸುರಕ್ಷತೆಗೆ ಸರ್ಕಾರಕ್ಕೆ ತಿಳಿವಳಿಕೆ ನೀಡಬೇಕು ಎಂದು ಸಿಎಂ ಏಕನಾಥ್​ ಶಿಂದೆ ಹೇಳಿದರು.

ಕರ್ನಾಕದಿಂದಲೂ ನಿರ್ಣಯ ಮಂಡನೆ: ಮಹಾರಾಷ್ಟ್ರ ಗಡಿ ವಿವಾದ ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ವಿವಾದ ಸಂಬಂಧ ನಿರ್ಣಯವನ್ನು ಮಂಡಿಸಿದ್ದರು.

ಮುಖ್ಯಮಂತ್ರಿ ಮಂಡಿಸಿದ ನಿರ್ಣಯಕ್ಕೆ ಸರ್ವಾನುಮತದಿಂದ ಸದನ ಒಪ್ಪಿಗೆ ಸೂಚಿಸಿತು. ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ಸದಸ್ಯರೆಲ್ಲರ ಭಾವನೆಯು ಒಂದೇ ಆಗಿದ್ದು, ಇದಕ್ಕೆ ಧಕ್ಕೆ ಆದಾಗ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ಹಾಗೂ ಮಹಾರಾಷ್ಟ್ರದ ಜನತೆಯು ಅನಾವಶ್ಯಕವಾಗಿ ಸೃಷ್ಟಿಸಿರುವ ವಿವಾದವನ್ನು ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಯಿತು.

ಗಡಿ ವಿವಾದ ಮೇಲಿನ ನಿರ್ಣಯ ಹೀಗಿದೆ: ರಾಷ್ಟ್ರದಲ್ಲಿ ಭಾಷಾವಾರು ಪ್ರಾಂತ್ಯಗಳ ಸ್ಥಾಪನೆ ಮಾಡುವ ಸಲುವಾಗಿ ರಾಜ್ಯಗಳ ಮರುವಿಂಗಡಣೆಯ ಆಯೋಗ 1953ರಲ್ಲಿ ರಚನೆಯಾಗಿತ್ತು. ಆಯೋಗವು 1955ರಲ್ಲಿ ತನ್ನ ವರದಿಯನ್ನು ಮಂಡಿಸಿತು. 1955ರಲ್ಲಿ ಎಲ್ಲ ರಾಜ್ಯಗಳಿಗೆ ಈ ವರದಿಯನ್ನು ಕಳುಹಿಸಿಕೊಟ್ಟು, ಅಭಿಪ್ರಾಯ ಪಡೆದು, 1956ರಲ್ಲಿ ರಾಜ್ಯ ಮರುವಿಂಗಡಣೆ ಕಾಯ್ದೆ ಜಾರಿಗೆ ಬಂತು. 1950ರ ನವೆಂಬರ್ ಅಂದಿನ ಮೈಸೂರು ರಾಜ್ಯದ ಉದಯವಾಯಿತು. ಮಹಾಜನ ಆಯೋಗ 1966 ರ ಅಕ್ಟೋಬರ್‌ನಲ್ಲಿ ಅಸ್ತಿತ್ವಕ್ಕೆ ಬಂತು. 1967ರಲ್ಲಿ ವರದಿ ನೀಡಿತು. ಮಹಾರಾಷ್ಟ್ರದ ಬೇಡಿಕೆಯ ಮೇರೆಗೆ ರಚನೆಯಾದಂತಹ ಮಹಾಜನ ಆಯೋಗದ ವರದಿಯನ್ನು ಮಹಾರಾಷ್ಟ್ರವೇ ತಿರಸ್ಕರಿಸಿತು.

ಈಗಾಗಲೇ ಮಹಾಜನ ಆಯೋಗದ ವರದಿ ಮಂಡಿಸಿ 66 ವರ್ಷ ಕಳೆದಿವೆ. ವರ್ಷಗಳಲ್ಲಿ ಎರಡೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಮಹಾರಾಷ್ಟ್ರ ಈಗಾಗಲೇ ಮುಗಿದು ಹೋದ ಅಧ್ಯಾಯ. ಆದಾಗ್ಯೂ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಗಡಿಯ ಬಗ್ಗೆ ದಾವೆ ಹೂಡಿ, ಅಂದಿನಿಂದಲೂ ಎರಡೂ ರಾಜ್ಯಗಳ ಜನರ ನಡುವಿನ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. 2004 ರಿಂದ ಇಲ್ಲಿಯವರೆಗೂ ಸುಪ್ರೀಂ ಕೋರ್ಟಿನಲ್ಲಿ ಮಹಾರಾಷ್ಟ್ರದ ದಾವೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಯಾಕೆಂದರೆ, ಸಂವಿಧಾನದ 3ನೇ ಪರಿಚ್ಛೇದದ ಪ್ರಕಾರ ಈ ಮರುಪರಿಶೀಲನೆ ಮಾಡುವ ಪರಮಾಧಿಕಾರ ಈ ದೇಶದ ಪ್ರಜಾಪ್ರಭುತ್ವದ ಉನ್ನತ ಸಂಸ್ಥೆಯಾದ ಸಂಸತ್ತಿಗೆ ಮಾತ್ರ ಇದೆ.

ಇದರ ಬಗ್ಗೆ ರಾಜ್ಯ ಸರ್ಕಾರ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗವನ್ನು ರಚಿಸಿದ್ದು, ಈ ಆಯೋಗವು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದೆ. ಅಲ್ಲದೆ, ಇತ್ತೀಚೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾ. ಶಿವರಾಜ ಪಾಟೀಲ್​​ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ನಮ್ಮ ನಿಲುವನ್ನು ಸಮರ್ಥವಾಗಿ ಪ್ರತಿಪಾದನೆ ಮಾಡಲು ಅವರ ಮಾರ್ಗದರ್ಶನ ಪಡೆಯಲಾಗುತ್ತಿದೆ. ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲ ಮುಕುಲ್ ರೋಹಟಗಿ ನೇತೃತ್ವದಲ್ಲಿ ಐದು ಜನ ನುರಿತ ವಕೀಲರ ತಂಡ ರಚನೆ ಮಾಡಲಾಗಿದೆ.

ಕರ್ನಾಟಕ ನೆಲ ಜಲದ ಹಿತ ಕಾಪಾಡಲು ಕಾನೂನಿನ ಹೋರಾಟದ ಸಮರ್ಥನೆ ಮಾಡಲು ಈ ಮೂಲಕ ರಾಜ್ಯ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರದ ನಾಯಕರು ಕೊಡುತ್ತಿರುವ ಎಲ್ಲ ಹೇಳಿಕೆಗಳು ಅತ್ಯಂತ ಖಂಡನೀಯ ಮತ್ತು ಮಹಾರಾಷ್ಟ್ರದ ಸಚಿವರು ಕಾನೂನು ಸುವ್ಯವಸ್ಥೆ ಸೂಕ್ಷ್ಮವಿದ್ದಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿ, ಪ್ರಚೋದಿಸಲು ಯತ್ನಿಸುವ ಕಾರ್ಯವೂ ಖಂಡನೀಯ. ಕೇಂದ್ರದ ಗೃಹ ಸಚಿವರು ಎರಡೂ ರಾಜ್ಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ನೀಡಿರುವ ಸೂಚನೆಯನ್ನು ಸಹ ಮಹಾರಾಷ್ಟ್ರ ಉಲ್ಲಂಘಿಸುತ್ತಿದ್ದು, ರಾಜ್ಯಗಳ ಸಂಬಂಧಕ್ಕೆ ಧಕ್ಕೆ ತರುವಂತಾಗಿದೆ. ಇದನ್ನು ನಿಯಂತ್ರಿಸಬೇಕೆಂದು ಮಹಾರಾಷ್ಟ್ರಕ್ಕೆ ಸರ್ಕಾರಕ್ಕೆ ಸೂಚಿಸುತ್ತಾ, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೂ ರಾಜ್ಯ ಸರ್ಕಾರ ತರುತ್ತದೆ.

ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ಸದಸ್ಯರೆಲ್ಲರ ಭಾವನೆಯು ಒಂದೇ ಆಗಿದೆ. ಇದಕ್ಕೆ ಧಕ್ಕೆ ಆದಾಗ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ಹಾಗೂ ಮಹಾರಾಷ್ಟ್ರದ ಜನತೆಯು ಅನಾವಶ್ಯಕವಾಗಿ ಸೃಷ್ಟಿಸಿರುವ ವಿವಾದವನ್ನು ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಈ ಸದನ ಸರ್ವಾನುಮತದಿಂದ ನಿರ್ಣಯಿಸಿತು.

ಓದಿ: ಇಂದು ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ನಿಲುವಳಿ ಸೂಚನೆ ಮಂಡನೆ

Last Updated : Dec 27, 2022, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.