ETV Bharat / bharat

ವಾಷಿಂಗ್ಟನ್​ ಭಾರತೀಯ ರಾಯಭಾರಿ ಕಚೇರಿ ಮೇಲೆ ಖಲಿಸ್ತಾನಿಗಳಿಂದ ದಾಳಿ ಯತ್ನ

author img

By

Published : Mar 26, 2023, 2:10 PM IST

ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಭಾರತದ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರೆಸಿದ್ದು, ಶನಿವಾರ ವಾಷಿಂಗ್ಟನ್​ ಡಿಸಿಯ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ.

khalistan-supporters-try-to-incite-violence-at-indian-embassy-in-washington-secret-service-police-foil-their-bid
ವಾಷಿಂಗ್ಟನ್​ನ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲು ಯತ್ನಿಸಿದ ಖಲಿಸ್ತಾನಿಗಳು

ವಾಷಿಂಗ್ಟನ್ (ಯುಎಸ್ಎ) : ಖಲಿಸ್ತಾನಿಗಳ ಭಾರತ ವಿರೋಧಿ ಧೋರಣೆ ಮುಂದುವರೆದಿದೆ. ಪ್ರತ್ಯೇಕತಾವಾದಿಗಳ ಗುಂಪೊಂದು ವಾಷಿಂಗ್ಟನ್​ ಡಿಸಿಯ ಡೌನ್​​ಟೌನ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಜಮಾಯಿಸಿ ಹಿಂಸಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಈ ವೇಳೆ ಎಚ್ಚೆತ್ತ ಯುಎಸ್​ ಸೀಕ್ರೆಟ್​ ಸರ್ವಿಸ್​ ಅಧಿಕಾರಿಗಳು ಮತ್ತು ಪೊಲೀಸ್​ ಅಧಿಕಾರಿಗಳು ದುಷ್ಕರ್ಮಿಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶನಿವಾರ ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮುಂದೆ ಜಮಾಯಿಸಿದ ಖಲಿಸ್ತಾನಿಗಳು ಭಾರತೀಯ ರಾಯಭಾರಿ ತರಣ್​ಜಿತ್​ ಸಿಂಗ್​ ಸಂಧು ವಿರುದ್ಧ ನಿಂದನೀಯ ಘೋಷಣೆಗಳನ್ನು ಕೂಗಿ, ಬಹಿರಂಗವಾಗಿ ಬೆದರಿಕೆ ಹಾಕಿದರು. ಈ ವೇಳೆ ಅವರು ರಾಯಭಾರಿ ಕಚೇರಿಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಈ ವೇಳೆ ಪ್ರತ್ಯೇಕತಾವಾದಿಗಳ ಗುಂಪಿನಲ್ಲಿದ್ದ ಕೆಲವು ಪ್ರತಿಭಟನಾಕಾರು ಹಿಂಸಾಚಾರ ನಡೆಸುವಂತೆ ಪ್ರೇರೇಪಿಸುತ್ತಿರುವುದು ಕಂಡುಬಂದಿದೆ. ಅಲ್ಲದೇ ಖಲಿಸ್ತಾನಿಗಳು ಇಲ್ಲಿನ ಕಟ್ಟಡದ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಲ್ಲದೆ, ಭಾರತೀಯ ರಾಯಭಾರಿ ಕಚೇರಿ ಕಟ್ಟಡಕ್ಕೂ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಲ ಭಾಷಣಕಾರರು ಭಾರತದಲ್ಲಿ ಮಾತ್ರವಲ್ಲದೇ ಇಲ್ಲಿಯೂ ಹಿಂಸಾಚಾರ ನಡೆಸುವಂತೆ ಹೇಳುತ್ತಿರುವುದು ಕಂಡುಬಂದಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಯುಎಸ್​ ಸೀಕ್ರೆಟ್​ ಸರ್ವೀಸ್​ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಭಾರತೀಯ ರಾಯಭಾರಿ ಕಚೇರಿ ಸುತ್ತ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರು. ಕಚೇರಿ ಬಳಿಯಲ್ಲಿದ್ದ ತ್ರಿವರ್ಣ ಧ್ವಜಸ್ಥಂಭದ ಬಳಿಗೆ ನುಗ್ಗಲು ಯತ್ನಿಸಿದ ಐವರು ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿಗಳು ತಡೆದು ಶೀಘ್ರವಾಗಿ ಹಿಂತಿರುಗುವಂತೆ ಕೇಳಿದರು.

ಈ ಹಿಂದೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಲಂಡನ್​ ಮತ್ತು ಸ್ಯಾನ್​​ಫ್ರಾನ್ಸಿಸ್ಕೋದ ರಾಯಭಾರಿ ಕಚೇರಿಗೆ ದಾಳಿ ನಡೆಸಿದ್ದರು. ಸ್ಯಾನ್​ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆಸಿದ್ದ ಪ್ರತ್ಯೇಕತಾವಾದಿಗಳು ಹಿಂಸಾಚಾರ ನಡೆಸಿದ್ದರು. ಇದನ್ನು ಅಮೆರಿಕ ಖಂಡಿಸಿತ್ತು.

ಅಲ್ಲದೇ ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್​ ಕಟ್ಟಡ ಮೇಲೆ ದಾಳಿ ನಡೆಸಿದ್ದ ಖಲಿಸ್ತಾನಿಗಳು ಇಲ್ಲಿದ್ದ ತ್ರಿವರ್ಣ ಧ್ವಜ ಕೆಳಗಿಳಿಸಿ, ಖಲಿಸ್ತಾನಿ ಧ್ವಜ ಹಾರಿಸಿ ಉದ್ಧಟತನ ಮೆರೆದಿದ್ದರು. ಬ್ರಿಟನ್​​​ ಸರ್ಕಾರದ ಭದ್ರತಾ ಲೋಪದ ವಿರುದ್ಧ ಭಾರತವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಕೆನಡಾದಲ್ಲಿ ಖಲಿಸ್ತಾನಿಗಳ ಹಿಂಸಾಚಾರ: ಕೆನಡಾದಲ್ಲಿಯೂ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಭಾರತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಈ ಸಂಬಂಧ ಖಲಿಸ್ತಾನಿಗಳ ಪ್ರತಿಭಟನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆನಡಾದ ಹೈಕಮಿಷನರ್​ಗೆ ಭಾರತ ಒತ್ತಾಯಿಸಿದೆ.

ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಕೆನಡಾದ ಭಾರತದ ರಾಜತಾಂತ್ರಿಕ ಮಿಷನ್ ಮತ್ತು ಕಾನ್ಸುಲೇಟ್‌ಗಳ ವಿರುದ್ಧ ದಾಳಿ ನಡೆಸಿದ ಪ್ರತ್ಯೇಕತಾವಾದಿಗಳ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ. ಜೊತೆಗೆ ಕೆನಡಾದ ರಾಜತಾಂತ್ರಿಕ ಆವರಣದ ಹೊರಗೆ ಭದ್ರತಾ ಲೋಪದ ಕುರಿತು ಪ್ರಶ್ನೆ ಮಾಡಿದೆ. ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ವಿದೇಶಾಂಗ ಸಚಿವಾಲಯ ಇದೇ ವೇಳೆ ಒತ್ತಾಯಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆದರಿಕೆ ಕರೆ ಕೆಲಕಾಲ ತಲ್ಲಣವನ್ನು ಸೃಷ್ಟಿಸಿತ್ತು. ವಿಮಾನ ಪ್ರಯಾಣಿಕರೊಬ್ಬರ ಫೋನ್‌ಗೆ ಖಲಿಸ್ತಾನಿ ಪ್ರತ್ಯೇಕತಾವಾದಿ ಕಾರ್ಯಕರ್ತನಿಂದ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪ್ರಯಾಣಿಕರು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಆರೋಪಿ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ.

ಇನ್ನು, ಈ ಆಡಿಯೋದಲ್ಲಿ ಖಲಿಸ್ತಾನಿ ಬೆಂಬಲಿಗರು ದೆಹಲಿಯ ಪ್ರಗತಿ ಮೈದಾನವನ್ನು ವಶಪಡಿಸಿಕೊಳ್ಳಬೇಕು. ಅಲ್ಲದೆ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಅದರ ಬದಲಿಗೆ ಖಲಿಸ್ತಾನ್ ಧ್ವಜಗಳನ್ನು ಹಾಕಬೇಕು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪಂಜಾಬ್‌ನ ಅಜ್ನಾಲಾ ಪ್ರಕರಣದಲ್ಲಿ ಬೇಕಾಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಇನ್ನೂ ಪತ್ತೆಯಾಗಿಲ್ಲ. ಮಾರ್ಚ್ 18 ರಿಂದ ತಲೆಮರೆಸಿಕೊಂಡಿರುವ ಅಮೃತ್​ಪಾಲ್​ ಗುರುತು ಹರಿಯಾಣದಲ್ಲಿ ಪತ್ತೆಯಾಗಿತ್ತು. ಇದೀಗ ಅಮೃತಪಾಲ್ ದೆಹಲಿಯಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನಿಗಳ ದಾಳಿ: ಅಮೆರಿಕ ಖಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.