ETV Bharat / bharat

ಹೈದರಾಬಾದ್​ನಲ್ಲಿ ಅಲ್ಪಸಂಖ್ಯಾತ ಯುವಕರಿಗಾಗಿ ಐಟಿ ಪಾರ್ಕ್: ತೆಲಂಗಾಣ ಸಿಎಂ ಕೆಸಿಆರ್​​

author img

By PTI

Published : Nov 23, 2023, 5:10 PM IST

Updated : Nov 23, 2023, 5:15 PM IST

KCR promises special IT Park: ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹೈದರಾಬಾದ್​ನಲ್ಲಿ ಅಲ್ಪಸಂಖ್ಯಾತ ಯುವಕರಿಗಾಗಿ ವಿಶೇಷ ಐಟಿ ಪಾರ್ಕ್​ ಸ್ಥಾಪಿಸುವುದಾಗಿ ಎಂದು ಸಿಎಂ ಕೆಸಿಆರ್​ ತಿಳಿಸಿದ್ದಾರೆ.

kcr-promises-special-it-park-for-muslim-youths-in-hyderabad-if-brs-voted-to-power
ಹೈದರಾಬಾದ್​ನಲ್ಲಿ ಅಲ್ಪಸಂಖ್ಯಾತ ಯುವಕರಿಗಾಗಿ ಐಟಿ ಪಾರ್ಕ್: ತೆಲಂಗಾಣ ಸಿಎಂ ಕೆಸಿಆರ್​​

ಹೈದರಾಬಾದ್​​ (ತೆಲಂಗಾಣ): ತೆಲಂಗಾಣದ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮತದಾರರನ್ನು ಓಲೈಸುವಲ್ಲಿ ರಾಜಕೀಯ ಪಕ್ಷಗಳು ಹೊಸ ಹೊಸ ಘೋಷಣೆಗಳನ್ನು ಮಾಡುತ್ತಿವೆ. ಹಾಲಿ ಮುಖ್ಯಮಂತ್ರಿ, ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್, ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಹೈದರಾಬಾದ್​ನಲ್ಲಿ ಅಲ್ಪಸಂಖ್ಯಾತ ಯುವಕರಿಗಾಗಿ ವಿಶೇಷ ಮಾಹಿತಿ ತಂತ್ರಜ್ಞಾನ ಉದ್ಯಾನವನ (ಐಟಿ ಪಾರ್ಕ್​) ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.

ತೆಲಂಗಾಣದಲ್ಲಿ 119 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದೆ. ಇಂದು ಶಿಕ್ಷಣ ಸಚಿವೆ ಸಬಿತಾ ಇಂದ್ರಾರೆಡ್ಡಿ ಸ್ಪರ್ಧಿಸಿರುವ ಮಹೇಶ್ವರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ನಮ್ಮ ಸರ್ಕಾರವು ಹಿಂದೂಗಳು ಹಾಗೂ ಮುಸ್ಲಿಮರನ್ನು ಎರಡು ಕಣ್ಣುಗಳಂತೆ ಪರಿಗಣಿಸುತ್ತದೆ. ಎಲ್ಲರನ್ನೂ ಜೊತೆಗೆ ಕರೆದೊಯ್ಯುತ್ತದೆ ಎಂದು ಹೇಳಿದ್ದಾರೆ.

ಇಂದು ನಾವು ನೀಡುತ್ತಿರುವ ಪಿಂಚಣಿಯನ್ನು ಮುಸ್ಲಿಮರು ಕೂಡ ಪಡೆಯುತ್ತಿದ್ದಾರೆ. ನಾವು ವಸತಿ ಶಾಲೆಗಳನ್ನು ತೆರೆದಿದ್ದೇವೆ. ಅದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಸಹ ಓದುತ್ತಿದ್ದಾರೆ. ನಾವು ನಮ್ಮೊಂದಿಗೆ ಎಲ್ಲರನ್ನು ಕರೆದುಕೊಂಡು ಹೋಗುತ್ತೇವೆ. ಈಗ ನಾವು ಮುಸ್ಲಿಂ ಯುವಕರ ಬಗ್ಗೆಯೂ ಯೋಚಿಸುತ್ತಿದ್ದೇವೆ. ಹೈದರಾಬಾದ್​ ಬಳಿ ವಿಶೇಷ ಐಟಿ ಪಾರ್ಕ್​ಅನ್ನು ಸ್ಥಾಪಿಸುತ್ತೇವೆ. ಪಹಾಡಿ ಶರೀಫ್ ಗ್ರಾಮದ ಬಳಿ ಐಟಿ ಪಾರ್ಕ್ ಬರಲಿದೆ ಎಂದು ಸಿಎಂ ತಿಳಿಸಿದರು.

ಇದೇ ವೇಳೆ, ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಲ್ಲದೆ ತೆಲಂಗಾಣ 'ಶಾಂತಿಯುತ'ವಾಗಿದೆ ಎಂದು ಪ್ರತಿಪಾದಿಸಿದ ಕೆಸಿಆರ್​​, ಬಿಆರ್‌ಎಸ್ ಸರ್ಕಾರವು ತನ್ನ 10 ವರ್ಷಗಳ ಆಡಳಿತದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 12,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಕೆಸಿಆರ್ ಬದುಕಿರುವವರೆಗೂ ತೆಲಂಗಾಣ ಜಾತ್ಯತೀತ ರಾಜ್ಯವಾಗಿಯೇ ಇರುತ್ತದೆ ಎಂದರು.

ತೆಲಂಗಾಣಕ್ಕೆ ರಾಜ್ಯತ್ವವನ್ನು ಸಾಧಿಸಿದವರು ಯಾರು?, 24 ಗಂಟೆ ಉಚಿತ ವಿದ್ಯುತ್ ನೀಡಲು ಯಾರು ಸಮರ್ಥರಾಗಿದ್ದಾರೆ?, ಪ್ರತಿ ಮನೆ ಬಾಗಿಲಿಗೆ ನಲ್ಲಿ ನೀರನ್ನು ತಂದವರು ಯಾರು ಎಂದು ಸಭಿಕರನ್ನು ಕೇಳಿದ ಕೆಸಿಆರ್​, ತೆಲಂಗಾಣ ರಚನೆಯಾದಾಗ ಸರಿಯಾದ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯಗಳಿಲ್ಲದೆ ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು. ನಮ್ಮ ಸರ್ಕಾರದ ಪ್ರಯತ್ನದಿಂದ ರೈತರಿಗೆ 24 ಗಂಟೆಗಳ ಉಚಿತ ಗುಣಮಟ್ಟದ ವಿದ್ಯುತ್ ನೀಡಲಾಗುತ್ತಿದೆ. ಅದರೂ ಕೂಡ ಇತರ ರಾಜ್ಯಗಳಂತೆ ನೀರಿನ ತೆರಿಗೆ ಇಲ್ಲದೇ ವಿದ್ಯುತ್ ಪೂರೈಸಲಾಗುತ್ತಿದೆ. ಹಣಕಾಸಿನ ಶಿಸ್ತನ್ನೂ ಕಾಪಾಡಿಕೊಳ್ಳುತ್ತಿರುವುದರಿಂದ ರಾಜ್ಯದ ಸಂಪತ್ತು ಬೆಳೆಯುತ್ತಿದೆ. ರಾಜ್ಯದಲ್ಲಿ ಕೃಷಿ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.

ಕೆಸಿಆರ್ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದಾರೆ ಹಾಗೂ 'ರೈತ ಬಂಧು' ಯೋಜನೆ ಕುರಿತು ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬಂದರೆ ರೈತ ಬಂಧು ಯೋಜನೆಯನ್ನು ಮುಂದುವರೆಸಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಯೋಜನೆಯಡಿ ಈಗಿರುವ ವಾರ್ಷಿಕ 10,000 ರೂ.ಗಳ ನೆರವನ್ನು ಕ್ರಮೇಣ 16,000 ರೂ.ಗೆ ಹೆಚ್ಚಿಸಲಾಗುವುದು ಎಂದು ಸಿಎಂ ತಿಳಿಸಿದರು.

ಕಾಂಗ್ರೆಸ್ ನಾಯಕರು ಕೇವಲ ಮೂರು ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ ಎಂದು ನಿರಾತಂಕವಾಗಿ ಹೇಳುತ್ತಿದ್ದಾರೆ. ಸಮಗ್ರ ಭೂ ಆಡಳಿತದ 'ಧರಣಿ' ಪೋರ್ಟಲ್ ರದ್ದು ಮಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್​ನ ಈ ಕ್ರಮವು ಮಧ್ಯವರ್ತಿಗಳ ಆಡಳಿತವನ್ನು ಪುನಾರಂಭಿಸಲು ಕಾರಣವಾಗಬಹುದು. ಹೀಗಾಗಿ ಯಾರಿಗೆ ಮತ ಹಾಕಬೇಕು ಎಂದು ಯೋಚಿಸಿ ನಿರ್ಧಾರ ಕೈಗೊಳ್ಳಿ ಎಂದು ಜನತೆಗೆ ಕೆಸಿಆರ್ ಕರೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ಭರವಸೆಗಳು ವಿಫಲ: ತೆಲಂಗಾಣ ಪ್ರಚಾರದಲ್ಲಿ ಮಾಜಿ ಸಿಎಂ ಬಿಎಸ್​​ವೈ ಟೀಕೆ

Last Updated : Nov 23, 2023, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.